ಕಾರ್ಖಾನೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ

World Environment Day celebration on factory premises

ಕಾರ್ಖಾನೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ  

ಮಾಂಜರಿ, 05 : ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು” ಎಂಬ ಶೀರ್ಷಿಕೆಯೊಂದಿಗೆ ಆಚರಿಸಲಾಗುತ್ತಿರುವ ಈ ಸಾಲಿನ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾರ್ಖಾನೆಯ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಹಾಗೂ ವಿಭಾಗಾಧಿಕಾರಿಗಳಿಂದ ಕಾರ್ಖಾನೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು.  

ಈ ವೇಳೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೋರೆ ಮಾತನಾಡಿ ಕಾರ್ಖಾನೆಯ ರೂವಾರಿಗಳು, ಕೆ.ಎಲ್‌.ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾಽಽ ಪ್ರಭಾಕರ ಕೋರೆಯವರ ಮಾರ್ಗದರ್ಶನದಲ್ಲಿ ಹಾಗೂ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆ ಮಹಾಮಂಡಳ ಹೊಸದೆಹಲಿಯ ನಿರ್ದೇಶಕರಾದ ಅಮಿತ ಕೋರೆಯವರ ಮುಂದಾಳತ್ವದಲ್ಲಿ ಮುನ್ನಡೆಯುತ್ತಿರುವ ಕಾರ್ಖಾನೆಯು ಯಾವತ್ತೂ ಹಸಿರು ಪಟ್ಟಿ ಬೆಳವಣಿಗೆ ಹಾಗೂ ಮಾಲಿನ್ಯ ರಹಿತ ಪರಿಸರ ಧ್ಯೇಯವನ್ನು ಕಾಪಾಡಿಕೊಂಡು ಬಂದಿದ್ದು ಕಾರ್ಖಾನೆಯ ಒಳ ಮತ್ತು ಹೊರ ಆವರಣದಲ್ಲಿ ನಿರಂತರ ಸಸಿ ನೆಟ್ಟು ಮರಗಳನ್ನಾಗಿ ಬೆಳೆಸುವ ಕಾರ್ಯವನ್ನು ಶ್ರದ್ದೆ ಮತ್ತು ಕಾಳಜಿ ಪೂರ್ವಕವಾಗಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಈ ವರ್ಷವೂ ಸಹ ಸಾವಿರಾರು ಸಸಿ ನೆಡುವ ಗುರಿಯನ್ನು ಹೊಂದಿದೆ.  

ಪರಿಸರ ದಿನಾಚರಣೆಯ ಈ ವರ್ಷದ ಘೋಷಣೆ  “ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು” ಕುರಿತು ಗಂಭೀರವಾಗಿ ಯೋಚಿಸುವ ಮತ್ತು ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಆಗಬಹುದಾದ ತೊಂದರೆಗಳನ್ನು ತಡೆಯಬೇಕಾಗಿದೆ.   

ಈಗ ಆಗುತ್ತಿರುವ ಮತ್ತು ಮುಂದೆ ಆಗಬಹುದಾದ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡು ಪರಿಸರ ಉಳಿಸಿದರೆ ಮಾತ್ರ ಜೀವಕುಲ ಉಳಿಯಲು ಸಾಧ್ಯ. ಜನಸಂಖ್ಯೆ ಹೆಚ್ಚಳದೊಂದಿಗೆ ಮಾಲಿನ್ಯ ಹೆಚ್ಚಾಗುತ್ತ ಹೋಗುತ್ತಿದೆ. ಆದರೆ ಮನುಷ್ಯ ಇರುವ ಪರಿಸರ ಸಂಪತ್ತನ್ನು ಉಳಿಸಿಕೊಳ್ಳುವತ್ತ ಗಮನಹರಿಸುತ್ತಿಲ್ಲ. ಎಲ್ಲ ಕಾರ್ಮಿಕ/ಸಿಬ್ಬಂದಿಯವರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಸಿ ನೆಡುವ ಮೂಲಕ ಪರಿಸರ ಉಳಿಸುವಲ್ಲಿ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು.  

ಈ ಸಮಯದಲ್ಲಿ ಕಾರ್ಖಾನೆಯ ಉಪಾಧ್ಯಕ್ಷರಾದ ತಾತ್ಯಾಸಾಹೇಬ ಕಾಟೆ, ನಿರ್ದೇಶಕರಾದ ಅಜೀತ ದೇಸಾಯಿ, ಪರಸಗೌಡಾ ಪಾಟೀಲ, ಮಲ್ಲಪ್ಪಾ ಮೈಶಾಳೆ, ಚೇತನ ಪಾಟೀಲ, ಭೀಮಗೌಡಾ ಪಾಟೀಲ, ಮಾಹಾವೀರ ಕಾತ್ರಾಳೆ, ಅಣ್ಣಾಸಾಬ ಇಂಗಳೆ, ಹಾಗೂ ವಿಭಾಗಾಧಿಕಾರಿಗಳು ಮತ್ತು ಕಾರ್ಮಿಕ/ಸಿಬ್ಬಂದಿಯವರು ಹಾಜರಿದ್ದು ಸಸಿ ನೆಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.