ಸವದತ್ತಿ 02: ಬೆಳಗಾವಿ ಜಿಲ್ಲೆಯ ಸಹೃದಯ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ‘ಸಹೃದಯ ಕಾವ್ಯ ಪ್ರಶಸ್ತಿ’ ಪ್ರದಾನ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಜೂನ್ 8ರಂದು ಬೆಳಿಗ್ಗೆ 10ಕ್ಕೆ ಪಟ್ಟಣದ ಡಿ. ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ನಿಲಯದಲ್ಲಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದೆ.
ಶಾಸಕ ವಿಶ್ವಾಸ್ ವೈದ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರವಾಡದ ಹಿರಿಯ ಕವಿ, ಕಥೆಗಾರ ಡಾ. ಬಸು ಬೇವಿನಗಿಡದ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ತೀರ್ುಗಾರರಾದ ನಾಡಿನ ಹಿರಿಯ ಜನಪದ ವಿದ್ವಾಂಸ ಡಾ. ಸಿ. ಕೆ. ನಾವಲಗಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ರತ್ನಾ ಎಲ್. ಕದಮ್, ಬೆಳಗಾವಿಯ ಕಾರ್ಯಪಾಲಕ ಅಭಿಯಂತರ ವಿಠಲ ತಡಸಲೂರ, ಧಾರವಾಡದ ಆರ್ಟ್ ಪಾಯಿಂಟ್ ಮಾಲಿಕರಾದ ವಿಠಲ ಬಸಲಿಗುಂದಿ, ನಿಲಯ ಪಾಲಕರಾದ ಹಾಶೀಮ್ ತಹಶೀಲ್ದಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಾಡು ನುಡಿ ಸೇವೆ ಸಲ್ಲಿಸಿದ ಗದಗ ಜಿಲ್ಲಾ ಕಸಾಪ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ ಅವರಿಗೆ ಗೌರವ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ಜೆ. ನಾಯಕ ಉಪಸ್ಥಿತರಿರುತ್ತಾರೆ.
ಬಳ್ಳಾರಿಯ ದಸ್ತಗೀರಸಾಬ್ ದಿನ್ನಿ ಅವರ ‘ಮಧು ಬಟ್ಟಲಿನ ಗುಟುಕು’ ಗಜಲ್ ಸಂಕಲನ ಹಾಗೂ ಬೆಂಗಳೂರಿನ ಸವಿರಾಜ್ ಆನಂದೂರು ಅವರ ‘ಗಂಡಸರನ್ನು ಕೊಲ್ಲಿರಿ’ ಕವನ ಸಂಕಲನಕ್ಕೆ ಪ್ರಶಸ್ತಿ ಲಭಿಸಿದ್ದು ಅವರಿಗೆ ತಲಾ ರೂ. 5000 ನಗದು ಪುರಸ್ಕಾರ, ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಗುವುದು. ಇದೇ ಸಂದರ್ಭದಲ್ಲಿ ಕವಿಗೋಷ್ಠಿ ನಡೆಯಲಿದ್ದು ಎಮ್. ಡಿ. ಬಾವಾಖಾನ್, ಗಂಗಾ ಚಕ್ರಸಾಲಿ, ಶಿವರಾಜ್ ಅರಳಿ, ಸೌಮ್ಯ ಕೋಟಗಿ, ಮಂಜುನಾಥ ಸಿಂಗನ್ನವರ, ಎಫ್. ಎಲ್. ಮದಹಳ್ಳಿ, ವೈ. ಬಿ. ಕಡಕೋಳ, ಆನಂದ ಏಣಗಿ, ಬಿ. ಎಮ್. ಬಾವಾಖಾನ್, ಚನಬಸಯ್ಯ ಪೂಜೇರ, ರಮೇಶ್ ಮಡಿವಾಳರ ಕವನ ವಾಚಿಸಲಿದ್ದಾರೆ ಎಂದು ಕಾರ್ಯದರ್ಶಿ ರಮೇಶ್ ಕೆ. ತಳವಾರ ತಿಳಿಸಿದ್ದಾರೆ.