ಗಾಂಧಿನಗರ 28: ನಮ್ಮ ಸಶಸ್ತ್ರ ಪಡೆಗಳು ಪಾಕಿಸ್ಥಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 22 ಉಗ್ರ ನೆಲೆಗಳನ್ನು ಕೇವಲ 22 ನಿಮಿಷಗಳಲ್ಲಿ ಧ್ವಂಸಗೊಳಿಸಿದವು. ಈ ಬಾರಿ ಎಲ್ಲವನ್ನೂ ನಾವು ಕೆಮರಾದ ಮುಂದೆಯೇ ಮಾಡಿದೆವು.
ನಮ್ಮದೇ
ದೇಶದಲ್ಲಿ ದಾಳಿಗೆ ಯಾರೂ ಸಾಕ್ಷ್ಯ ಕೇಳಬಾರದೆಂಬ ಕಾರಣಕ್ಕೆ ಎಲ್ಲ ಸಿದ್ಧತೆಗಳನ್ನೂ ನಡೆಸಿದ್ದೆವು ಎಂದು ಮೋದಿ ಹೇಳಿದ್ದಾರೆ. ಈ ಮೂಲಕ 2016ರ
ಸರ್ಜಿಕಲ್ ದಾಳಿ ಮತ್ತು 2019ರ ಬಾಲಕೋಟ್ ದಾಳಿಯ
ವೇಳೆ “ಸಾಕ್ಷ್ಯ’ ಕೇಳಿದ್ದ ವಿಪಕ್ಷಗಳಿಗೆ ಮೋದಿ ಟಾಂಗ್ ನೀಡಿದ್ದಾರೆ.
2 ದಿನಗಳ
ಗುಜರಾತ್ ಭೇಟಿಯಲ್ಲಿರುವ ಪ್ರಧಾನಿ ಮೋದಿ, ಗುಜರಾತ್ನ ನಗರ ಅಭಿವೃದ್ಧಿಯ
20ನೇ ವರ್ಷದ ಪಯಣ ಕಾರ್ಯಕ್ರಮದಲ್ಲಿ ಈ ಮಾತುಗಳನ್ನಾಡಿದ್ದಾರೆ.
“ಭಾರತದೊಂದಿಗೆ ನೇರವಾಗಿ ಯುದ್ಧ ನಡೆಸಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಪಾಕಿಸ್ಥಾನಕ್ಕೆ ಗೊತ್ತಿದೆ. ಇದೇ ಕಾರಣಕ್ಕೆ ಪಾಕಿಸ್ಥಾನವು ಭಾರತದ ವಿರುದ್ಧ ಭಯೋತ್ಪಾದನೆಯ ಮೂಲಕ ಯುದ್ಧ ನಡೆಸುತ್ತದೆ. ಭಾರತದ ವಿರುದ್ಧದ ವಿಧ್ವಂಸಕ ಕೃತ್ಯಗಳು ಕೇವಲ ಉಗ್ರರು ನಡೆಸುತ್ತಿರುವ ಪರೋಕ್ಷ ಯುದ್ಧವಲ್ಲ, ಅದು ಪಾಕಿಸ್ಥಾನವೇ ನಡೆಸುತ್ತಿರುವ ವ್ಯವಸ್ಥಿತ ಯುದ್ಧ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
1947ರಲ್ಲೇ
ಮುಜಾಹಿದೀನ್ಗಳನ್ನು ಕೊಲ್ಲಬೇಕಿತ್ತು: “1947ರಲ್ಲಿ
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತಾಂಬೆಯ ಸರಪಳಿಯನ್ನು ಕಡಿಯಬೇಕಿತ್ತು. ಅಂದೇ ಈ ಮುಜಾಹಿದೀನ್ಗಳನ್ನು
ಕೊಂದಿದ್ದರೆ ಇಂದು ದೇಶಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ.
ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ವಶಕ್ಕೆ ಪಡೆಯುವವರೆಗೂ ಸೇನೆ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಬಾರದು ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಹೇಳಿದ್ದರು. ಆದರೆ ಅಂದಿನ ಸರಕಾರ ಅವರ ಮಾತಿಗೆ ಕಿವಿಗೊಡಲೇ ಇಲ್ಲ’ ಎಂದು ನೆಹರೂ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು.
ಭಾರತದೊಂದಿಗೆ
ನೇರವಾಗಿ ಯುದ್ಧ ನಡೆಸಿದರೆ ನಾವು ಗೆಲ್ಲುವುದಿಲ್ಲ ಎನ್ನುವುದು ಪಾಕ್ಗೆ ಅರಿವಾಯಿತು. ಹೀಗಾಗಿ
ಅದು ಪರೋಕ್ಷ ಯುದ್ಧದ ಮೊರೆ ಹೋಯಿತು. ಇದನ್ನು ನಾವು ಪರೋಕ್ಷ ಯುದ್ಧ ಎಂದು ಕರೆಯಲು ಆಗುವುದಿಲ್ಲ. ಏಕೆಂದರೆ ಮೇ 6ರ ರಾತ್ರಿ ಭಾರತ
ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಮೃತಪಟ್ಟ ಪಾಕ್ ಉಗ್ರರಿಗೆ ಪಾಕ್ ಸರಕಾರವೇ ಸರಕಾರಿ ಗೌರವ ನೀಡಿದೆ. ಅವರ ಶವಗಳ ಮೇಲೆ ಪಾಕ್ ಧ್ವಜವನ್ನು ಹೊದಿಸಿ, ಸೇನೆಯೇ
ಅವರಿಗೆ ಸೆಲ್ಯೂಟ್ ಮಾಡಿ ಅಂತಿಮ ನಮನವನ್ನೂ ಸಲ್ಲಿಸಿದೆ. ಈ ಭಯೋತ್ಪಾದಕ ಚಟುವಟಿಕೆಗಳು
ಕೇವಲ ಪರೋಕ್ಷ ಯುದ್ಧವಲ್ಲ, ಉದ್ದೇಶಪೂರ್ವಕ ಯುದ್ಧ ತಂತ್ರ ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದು ಮೋದಿ ಗುಡುಗಿದ್ದಾರೆ.