ಸಕ್ಕರೆ ಕಾರ್ಖಾನೆ ಪುನರ್ ಸ್ಥಾಪನೆ: ರೈತರ ಮೊಗದಲ್ಲಿ ಸಂತಸ

Sugar factory re-establishment: Farmers rejoice

ಸಕ್ಕರೆ ಕಾರ್ಖಾನೆ ಪುನರ್ ಸ್ಥಾಪನೆ: ರೈತರ ಮೊಗದಲ್ಲಿ ಸಂತಸ  

ಕಂಪ್ಲಿ 10: ವಿಜಯನಗರ ಜಿಲ್ಲೆಯ ಸಕ್ಕರೆ ಕಾರ್ಖಾನೆ ಪುನಸ್ಥಾಪಿಸುವುದು ಅತಿಮುಖ್ಯವಾಗಿದ್ದು, ಕಾರ್ಖಾನೆ ಪುನರ್ ಸ್ಥಾಪನೆ ಮಾಡಲು ರಾಣಿ ಸಂಯುಕ್ತ ಅವರು ಮುಂದಾಗಿರುವುದು ರೈತರ ಮೊಗದಲ್ಲಿ ಖುಷಿ ತಂದಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ಗಂಗಾಧರ ತಿಳಿಸಿದರು. 

ಮಂಗಳವಾರ ಪಟ್ಟಣದ ಅತಿಥಿ ಗೃಹದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಘಟನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದವತಿಯಿಂದ ಈ ಹಿಂದೆ ವಿಜಯನಗರ ಜಿಲ್ಲೆಯ ಸಕ್ಕರೆ  ಕಾರ್ಖಾನೆ ಪುನಃ ಸ್ಥಾಪನೆಗಾಗಿ ಬಹಳಷ್ಟು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇದಲ್ಲದೇ ಇತ್ತೀಚೆಗೆ  ಐತಿಹಾಸಿನ ಹಂಪಿಯಿಂದ ಸಾಕಷ್ಟು ರೈತರ ಸಮಾಕ್ಷಮದಲ್ಲಿ ಹೊಸಪೇಟೆವರೆಗೆ ಕಾಲ್ನಡಿಗೆಯಲ್ಲಿ ನ್ಯಾಯಮೂರ್ತಿ ಮಾಜಿ ಲೋಕಾಯುಕ್ತರಾದ ಸಂತೋಷ ಹೆಗ್ಡೆ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ್ದೇವೆ. ಆದರೆ, ಇದೀಗ ವಿಜಯನಗರ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಪುನಸ್ಥಾಪನೆ ಮಾಡಲು ರಾಣಿ ಸಂಯುಕ್ತ ಅವರು ಬಂಗಾರಿ ಶುಗರ್ಸ್‌ ಎಂದು ಬೊಮ್ಮನಹಳ್ಳಿ ತಾಲೂಕಿನ ಕೆಂಚನಬಂಡಿ ಗ್ರಾಮದಲ್ಲಿ ಮುಂದಾಗಿರುವುದು ಸಂತಸದ ವಿಷಯವಾಗಿದೆ. ಹೊಸಪೇಟೆ ಪ್ರದೇಶದ ಬಳಿಯಲ್ಲಿ ವೇಬ್ರಿಡ್ಜ್‌ ಸ್ಥಾಪಿಸಿ, ಕಬ್ಬು ಸಂಗ್ರಹಣಾ ಘಟಕ ಸ್ಥಾಪಿಸುವ ಭರವಸೆ ಇದೆ. ರಾಣಿ ಸಂಯುಕ್ತ ಅವರಿಗೆ ಬೆಂಬಲ ನೀಡುತ್ತೇವೆ ಎಂದರು. ರಾಜ್ಯ ಉಪಾಧ್ಯಕ್ಷ ಎಸ್‌.ಎ.ಖಾದ್ರಿ ಮಾತನಾಡಿ, ವಿಜಯನಗರದಲ್ಲಿ ಸಕ್ಕರೆ ಕಾರ್ಖಾನೆ ಪುನ: ಆರಂಭಿಸುವುದು ಬಹುದಿನದ ಬೇಡಿಕೆಯಾಗಿದೆ. ಈಗಾಗಲೇ ಜನಪ್ರತಿನಿಧಿಗಳು ಕಾರ್ಖಾನೆ ಸ್ಥಾಪನೆಗೆ ಆಶ್ವಾಸನೆ ನೀಡಿದ್ದಾರೆ. ಆದರೆ, ಈಗ ಧೀಮಂತ ಮಹಿಳೆ ರಾಣಿ ಸಂಯುಕ್ತ ಅವರು ಕಾರ್ಖಾನೆ ಪುನ: ಸ್ಥಾಪಿಸಲು ಮುಂದಾಗಿರುವುದು ರೈತರಲ್ಲಿ ಹರ್ಷದಾಯಕವಾಗಿದೆ ಎಂದರು.  ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಎಸ್‌.ಎ.ಖಾದ್ರಿ, ಕಂಪ್ಲಿ ತಾಲೂಕು ಅಧ್ಯಕ್ಷ ಗುಬಾಜಿ ರಾಮಾಂಜಿನಿ, ವಿಜಯನಗರ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಯುವ ಘಟಕ ಅಧ್ಯಕ್ಷ ಕೆ.ಹರ್ಷಿತ್, ಪದಾಧಿಕಾರಿಗಳಾದ ಉಷಾ, ಹೆಚ್‌.ಕಾಶಿಲಿಂಗಪ್ಪ, ಕೆ.ಶ್ರೀನಿವಾಸ, ಬಿ.ನೀಲಪ್ಪ, ಬಿ.ಶಂಕರ, ಗೋಪಾಲ, ಜೆ.ಬಸವರಾಜ, ಕೊಟ್ರೇಶ, ವೆಂಕಟೇಶ, ಅಂಬರೇಶ, ಗೋವಿಂದಪ್ಪ, ಹನುಮಂತಪ್ಪ, ವಾಬುಸಾಬ್ ಸೇರಿದಂತೆ ರೈತರು ಇದ್ದರು.  

 .