ಸಹನಾ ಪಾಟಗೆಗೆ 17, ಭೀಮವ್ವಗೆ 16 ಚಿನ್ನದ ಪದಕ

Sahana Patage won 17 gold medals, Bhimava 16.

ಬಾಗಲಕೋಟ : ತೋಟಗಾರಿಕೆ ವಿವಿಯಲ್ಲಿ ಮಂಗಳವಾರ ನಡೆದ 14ನೇ ಘಟಿಕೋತ್ಸವದಲ್ಲಿ ಬೀದರನ ತೋಟಗಾರಿಕೆ ಮಹಾವಿದ್ಯಾಲಯದ ಬಿ.ಎಸ್‌.ಸಿ ಪದವಿ ವಿದ್ಯಾರ್ಥಿಗಳಾದ  ಸಹನಾ ಪಾಟಗೆಗೆ 17 ಹಾಗೂ ಭೀಮವ್ವಗೆ 16 ಚಿನ್ನದ ಪದಕಗಳು ಲಭಿಸಿದ್ದು, ರಾಜ್ಯದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಪದಕಗಳನ್ನು ಪ್ರಧಾನ ಮಾಡಿದರು. 

17 ಚಿನ್ನದ ಪದಕ ಪಡೆದ ಸಹನಾ ಪಾಟಗೆ ಅವರು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಟೈಲರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಂಜುನಾಥ ಮತ್ತು ಶೋಭಾಳ ದಂಪತಿ ಮಗಳಾಗಿದ್ದು, ತಮ್ಮ ಗ್ರಾಮದ ಹೊಳಲಿನಲ್ಲಿ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ 10ನೇ ತರಗತಿವರೆಗೆ, ಹೂವಿನ ಹಡಗಲಿಯ ಮ.ಮ.ಪಾಟೀಲ ಕಾಲೇಜಿನಲ್ಲಿ ಪಿಯುಸಿ ತರಗತಿಯನ್ನು ಮುಗಿಸಿದ್ದು, ಸ್ನಾತಕ ತೋಟಗಾರಿಕೆ ಪದವಿಯನ್ನು ಬೀದರ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ವಿದ್ಯಾಬ್ಯಾಸ ಮಾಡಿದ್ದಾರೆ.   

ಕಾಲೇಜು ಹಂತದಲ್ಲಿ ಟಾಪರ್ ಆಗಿದ್ದೆ. ಆದರೆ ಪದವಿಯಲ್ಲಿ ಸಾಧನೆ ಮಾಡುತ್ತೇನೆ ಅಂದುಕೊಂಡಿರಲಿಲ್ಲ. ಇಷ್ಟೊಂದು ಪದಕಗಳು ಸಿಕ್ಕಿರುವುದು ಸಂತೋಷವಾಗಿದೆ. ಹೆಣ್ಣು ಮಕ್ಕಳಿಗೂ ಓದಲು ಅವಕಾಶ ಕೊಟ್ಟರೆ ನೀವು ಅಂದುಕೊಂಡಿರುವದಕ್ಕಿಂತ ಹೆಚ್ಚಿನ ಸಾಧನೆ ಮಾಡುತ್ತಾರೆ. ಸಾಧನೆಗೆ ಕಾಲೇಜಿನ ಉಪನ್ಯಾಸಕರು ಸೇರಿದಂತೆ ಗೆಳೆಯರು ಸಹ ಸಹಾಯ ಮಾಡಿದ್ದಾರೆ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತೇನೆ. ತೋಟಗಾರಿಕೆ ಕ್ಷೇತ್ರದಲ್ಲಿಯೇ ವಿದ್ಯಾಬ್ಯಾಸ ಮುಂದುವರಿಸುವುದಾಗಿ ಸಹನಾ ಹೇಳುತ್ತಾರೆ. ಮಕ್ಕಳ ಸಾಧನೆ ಮಾಡಿದರೆ ಆಗುವ ಸಂತೋಷ ಬೇರೆನು ಇಲ್ಲವೆಂದು ಸಹನಾ ತಂದೆ ಮಂಜುನಾಥ ಹೇಳಿದರು. 

ಅದೇ ರೀತಿ 16 ಪದಕಗಳನ್ನು ಪಡೆದ ಭೀಮವ್ವ ಅವರು ಸಹ ಕೊಪ್ಪಳ ಜಿಲ್ಲೆಯ ತಳಬಾಳ ಗ್ರಾಮದ ಸಣ್ಣ ನಿಂಗಪ್ಪ ಮತ್ತು ಯಲ್ಲವ್ವ ದಂಪತಿ ಮಗಳಾಗಿದ್ದು, ತಂದೆ ಮೃತಪಟ್ಟಿದ್ದು, ತಾಯಿ ಕೃಷಿ ಮಾಡಿಕೊಂಡು ಮಗಳನ್ನು ಓದಿಸಿದ್ದಾರೆ. ಭೀಮವ್ವ ಬೇವೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10ನೇ ತರಗತಿ, ನವಚೇತನ ಪಿಯು ಕಾಲೇಜಿನಲ್ಲಿ ಪಿಯುಸಿ ಹಾಗೂ ಸ್ನಾತಕ ಪದವಿಯನ್ನು ಬೀದರ ತೋಟಗಾರಿಕೆ ಮಹಾವಿದ್ಯಾಲಯಲ್ಲಿ ವಿದ್ಯಾಬ್ಯಾಸ ಮಾಡಿದ್ದಾರೆ. ಒಂದು ಚಿನ್ನದ ಪದಕ ಪಡೆದುಕೊಳ್ಳಬೇಕೆಂಬ ಆಶೆ ಇತ್ತು. ಆದರೆ ನನಗೆ 16 ಚಿನ್ನದ ಪದಕಗಳು ಬಂದಿರುವುದು ಸಂತೋಷ ತಂದಿದೆ. ನನಗೆ ತಂದೆ ಇಲ್ಲದಿದ್ದರೂ ತಾಯಿ ಹಾಗೂ ಅಣ್ಣ ಓದಲು ಪ್ರೋತ್ಸಾಹ ನೀಡಿದ್ದಾರೆ ಎಂದು ಭೀಮವ್ವ ಹೇಳಿದ್ದಾರೆ.  

ಬಿ.ಎಸ್‌ಸಿ (ಹಾನ್ಸ್‌) ತೋಟಗಾರಿಕೆ ಪದವಿಯಲ್ಲಿ 5 ಚಿನ್ನದ ಪದಕ ಪಡೆದರೆ, ಪಲ್ಲವಿ ಎಲ್ ಮಲ್ಲಣ್ಣವರ 4, ನಿತ್ಯಶ್ರೀ ಎಂ 4, ನಂದಿತಾ ನಾಯ್ಕ ಮತ್ತು ನಿತ್ಯಶ್ರೀ ಎಂ ತಲಾ 3, ಪ್ರಕೃತಿ ಬಿ.ಎಸ್ ಮತ್ತು ಪ್ರಿಯಾಂಕಾ ಟಿ.ಕ, ಪ್ರತೀಕ್ಷಾ ಹೆಗಡೆ, ವಿಜಯ ಬಾಲಾಜಿ ಯಾದವ, ರೇಖಾ ರಾಮಪ್ಪ ತೇಲಿ ತಲಾ 2, ಕೆ.ಚೈತ್ರಾ, ಜಯವರ್ಧನ ಆರ್, ಕೆ.ಸಮ್ಲಾ, ಲಕ್ಷ್ಮೀ ಗುಜಲೂರ, ಕಾಶಮ್ಮ ಪವಾಡಿ, ಮಹೇಶ ಹಾಗೂ ಆಶಾ ಕೆ.ಎಂ ತಲಾ ಒಂದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. 

ಡಾಕ್ಟರೇಟ್ ಪದವಿಯಲ್ಲಿ ಪವನ ಪಿ.ಆರ್ 4 ಚಿನ್ನದ ಪದಕ ಪಡೆದುಕೊಂಡರೆ, ವಂದನಾ ಮತ್ತು ಮಹಾಲಕ್ಷ್ಮೀ ಎಂ. ತಲಾ 2 ಪದಕ ಪಡೆದುಕೊಂಡಿದ್ದಾರೆ. ಎಂ.ಎಸ್‌.ಸಿ ಸ್ನಾತಕೋತ್ತರ ಪದವಿಯಲ್ಲಿ ಧನ್ಯಶ್ರೀ ಎಸ್‌.ಜಿ, ಅಮೂಲ್ಯ ಎಚ್‌.ಟಿ ತಲಾ 4 ಚಿನ್ನದ ಪದಕ ಪಡೆದರೆ, ಸಚಿನ ಮೋದಗಿ 3, ಗೀತಾಂಜಲಿ, ಸುಪ್ರೀಯಾ ಎಂ.ಎಸ್ ತಲಾ 2, ಲಿಖಿತಗೌಡ, ಕಾವ್ಯ, ಚಂದನ ಬಿ, ಹರ್ಷ ಪಾಟೀಲ, ಕಾರ್ತಿಕ ಸಿ.ಎಸ್, ಕುಣೆ ಲಾವಣ್ಯ, ಹರ್ಷಿತ ಬಿ.ಎಚ್ ತಲಾ ಒಂದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.