ನಿಗಮಕ್ಕೆ ನೌಕರರ ಕೊಡುಗೆ ಅಪಾರ: ಜಾಧವ

ನಿಗಮಕ್ಕೆ ನೌಕರರ ಕೊಡುಗೆ ಅಪಾರ: ಜಾಧವ  Employees' contribution to the corporation is immense: Jadhav

ತಾಳಿಕೋಟಿ 31 : ನಿಗಮದಲ್ಲಿ ಸುಮಾರು 25ರಿಂದ 30 ವರ್ಷಗಳ ವರೆಗೆ ತಮ್ಮ ಸೇವೆಯನ್ನು ಅತ್ಯಂತ ನಿಷ್ಠೆ ಪ್ರಾಮಾಣಿಕತೆ ಹಾಗೂ ಸಮಯ ಪಾಲನೆಯೊಂದಿಗೆ ಸಲ್ಲಿಸಿ ಇಂದು ನಿವೃತ್ತಿ ಹೊಂದಿದ ಮೂವರು ನೌಕರರು ನಿಗಮಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ ಅದನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಅವರ ವಿಶ್ರಾಂತ ಬದುಕು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲೆಂದು ಹಾರಿಸುತ್ತೇನೆ ಎಂದು ಘಟಕ ವ್ಯವಸ್ಥಾಪಕ ಪಿ.ಕೆ.ಜಾಧವ ಹೇಳಿದರು. ಭಾನುವಾರ ಪಟ್ಟಣದ ಸಾರಿಗೆ ಘಟಕದಲ್ಲಿ ಸೇವೆಯನ್ನು ಸಲ್ಲಿಸಿ ವಯೋನಿವೃತ್ತರಾದ ಸಾರಿಗೆ ನಿಯಂತ್ರಕ ಎಂಎಂ ಕಲ್ಲಪ್ಪಗೋಳ, ಚಾಲಕರಾದ ಎ.ಎನ್‌.ತಾಳಿಕೋಟಿ ಹಾಗೂ ಎ.ಎಂ. ಮನಿಯಾರ ಇವರಿಗೆ ಘಟಕದ ವತಿಯಿಂದ ಹಮ್ಮಿಕೊಂಡ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿವೃತ್ತಿ ಎಂಬುದು ವೃತ್ತಿಗಷ್ಟೇ ಸೀಮಿತವಾಗಲಿ ಇತರ ಚಟುವಟಿಕೆಗಳಿಗೆ ಅಲ್ಲ. ಜೀವನದ ವುಳಿದ ಸಮಯವನ್ನು ಸಮಾಜ ಸೇವೆಗಾಗಿ ವಿನಯೋಗಿಸಿ. ಮಕ್ಕಳ ಶಿಕ್ಷಣ ಹಾಗೂ ಅವರ ತರಬೇತಿಗಾಗಿ ಹೆಚ್ಚು ಆಸಕ್ತಿ ವಹಿಸಿ ಎಂದು ಸಲಹೆ ನೀಡಿದರು. ಘಟಕದ ಸಿಬ್ಬಂದಿ ಮೇಲ್ವಿಚಾರಕ ಬಿ.ಬಿ. ಚೋಕಾವಿ ಅವರು ಮಾತನಾಡಿ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವುದೇ ಒಂದು ದೊಡ್ಡ ಸಾಧನೆ ಯಾಗಿದೆ ಏಕೆಂದರೆ ಇಲ್ಲಿ ಹೆಜ್ಜೆ ಹೆಜ್ಜೆಗೂ ಸಮಸ್ಯೆ ಹಾಗೂ ಸವಾಲುಗಳಿವೆ ಅದರಲ್ಲಿಯೂ ಚಾಲಕರ ಕಾರ್ಯ ಅತಿ ಹೆಚ್ಚು ಜವಾಬ್ದಾರಿಯಿಂದ ಕೂಡಿದ್ದಾಗಿದೆ, ಅವರು ತಮ್ಮ ಜೀವದ ರಕ್ಷಣೆಗಿಂತಲೂ ಪ್ರಯಾಣಿಕರ ಜೀವದ ರಕ್ಷಣೆಗೆ ಹೆಚ್ಚು ಗಮನಕೊಟ್ಟು ಕೆಲಸ ಮಾಡಬೇಕಾಗುತ್ತದೆ ಅವರು ತಮ್ಮ ಕುಟುಂಬದ ಸದಸ್ಯರ ಜೊತೆ ಸಮಯ ಕಳೆಯಲ್ಲಿಕ್ಕೂ ಸಾಧ್ಯವಾಗುವುದಿಲ್ಲ ಇಂಥಹ ಸಂದಿಗ್ಧ ಸ್ಥಿತಿಯಲ್ಲಿಯೂ ಅವರು ತಾಳ್ಮೆಯನ್ನು ಕಳೆದುಕೊಳ್ಳದೆ ಇಷ್ಟೊಂದು ಸುದೀರ್ಘವಾದ ಸೇವೆಯನ್ನು ಮಾಡಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ.

ಅವರನ್ನು ಘಟಕದ ವತಿಯಿಂದ ಅಭಿನಂದಿಸುತ್ತೇನೆ ಅವರ ಮುಂದಿನ ವಿಶ್ರಾಂತ ಜೀವನ ನೆಮ್ಮದಿಯಿಂದ ಕೂಡಿರಲಿ ಎಂದರು. ಶಿಕ್ಷಕ ಎಲ್‌.ಜಿ. ಶಿವಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.ಇದೇ ಸಂದರ್ಭದಲ್ಲಿ ನಿವೃತ್ತರಾದ ಕಲ್ಲಪ್ಪ ಗೋಳ, ತಾಳಿಕೋಟಿ ಹಾಗೂ ಮನಿಯಾರ ಇವರನ್ನು ಸಾರಿಗೆ ಘಟಕ ನೌಕರರ ಸಂಘ, ಇಂಟೆಕ್ ಯೂನಿಯನ್, ನೌಕರರ ಒಕ್ಕೂಟ, ಎಸ್ಸಿ ಎಸ್ಟಿ ವಿಭಾಗ, ಬಿಎಂಎಸ್ ವಿಭಾಗ, ಮುಸ್ಲಿಂ ಯೂನಿಯನ್, ಸಾರಿಗೆ ಸಂಸ್ಥೆ ನಿವೃತ್ತ ನೌಕರರು,ನಿವೃತ್ತ ನೌಕರರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಚಾರಿ ನೀರೀಕ್ಷಕರಾದ ನಿಂಗನಗೌಡ,ಎಸ್‌.ಪಿ.ಆಲ್ಯಾಳ, ಪಾರು ಪತ್ತೆಗಾರರಾದ ಎಸ್‌.ಬಿ.ಬಿದರಕುಂದಿ, ಟಿ.ಬಿ.ರಾಠೋಡ, ಯೂನಿಯನ್ ಪದಾಧಿಕಾರಿಗಳಾದ ಜಿ.ಜಿ.ಬಿರಾದಾರ, ಎಸ್ ಬಿ ಅಸ್ಕಿ, ಎಂ.ಎಂ.ಚಲವಾದಿ,ಕೆ.ಕೆ.ಗಣಾಚಾರಿ,ಎ.ಎಂ.ಅವಟಿ, ಘಟಕದ ಸಿಬ್ಬಂದಿಗಳು ಹಾಗೂ ನಿವೃತ್ತರ ಕುಟುಂಬದ ಸದಸ್ಯರು ಮತ್ತಿತರರು ಇದ್ದರು.