ದೇಹದ ಆರೋಗ್ಯಕ್ಕೆ ಹಲ್ಲುಗಳು ತುಂಬಾ ಅಗತ್ಯ: ಡಾ. ಪತ್ತಾರ
‘ಹಲ್ಲುಗಳ ಆರೋಗ್ಯ’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ವಿದ್ಯಾಧರ ಪತ್ತಾರ ಮಾತನಾಡಿದರು.
ಜಮಖಂಡಿ 26: ಆಹಾರ ನುರಿಸಲು, ಮಾತನಾಡಲು, ಚೆನ್ನಾಗಿ ನಗಲು, ಮುಖದ ಸೌಂದರ್ಯ ಹಾಗೂ ದೇಹದ ಆರೋಗ್ಯಕ್ಕೆ ಹಲ್ಲುಗಳು ತುಂಬಾ ಅಗತ್ಯ. ಆದ್ದರಿಂದ ಬೆಳಿಗ್ಗೆ ಮತ್ತು ಸಂಜೆ ದಿನಕ್ಕೆ ಎರಡು ಬಾರಿ ಎರಡು ನಿಮಿಷಗಳ ಕಾಲ ಸರಿಯಾದ ವಿಧಾನದಿಂದ ಹಲ್ಲುಗಳನ್ನು ಉಜ್ಜಿ ಸ್ವಚ್ಛಗೊಳಿಸಿಕೊಳ್ಳಬೇಕು. ಊಟ, ಉಪಹಾರ ಮಾಡಿದ ಬಳಿಕ ನೀರು ಮುಕ್ಕಳಿಸಿ ಉಗಳಬೇಕು ಎಂದು ಡಾ.ವಿದ್ಯಾಧರ ಪತ್ತಾರ ಹೇಳಿದರು.
ನಗರದ ಬಸವಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಶ್ರಯದಲ್ಲಿ ಸ್ಮೈಲ್ ಕೇರ್ ಹಲ್ಲಿನ ದವಾಖಾನೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಹಲ್ಲುಗಳ ಆರೋಗ್ಯ’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಹಲ್ಲುಗಳನ್ನು ಉಜ್ಜುವ ವಿಧಾನ ಕುರಿತು ಪ್ರಾತ್ಯಕ್ಷಿಕೆ ನೀಡಿ ಅವರು ಮಾತನಾಡಿದರು.
ಆರೋಗ್ಯದ ದೃಷ್ಟಿಯಿಂದ ಹಲ್ಲುಗಳ ಬಗೆಗಿನ ಮೂಢನಂಬಿಕೆಗಳಿಗೆ ಬಲಿಯಾಗಬಾರದು. ಚಾಕಲೇಟ್, ಚ್ಯುವಿಂಗ್ ಗಮ್ನಂತಹ ಜಿಗುಟು ಪದಾರ್ಥಗಳ ಸೇವನೆ ಮಾಡಬಾರದು. ಕುರಕುರೆ ಸೇವಿಸಬಾರದು. ತಂಬಾಕು, ಗುಟ್ಕಾ ಅಗಿಯಬಾರದು. ಸಿಗಾರೇಟ್ ಸೇದಬಾರದು. ಪ್ರತಿ ಎರಡು ತಿಂಗಳಿಗೊಮ್ಮೆ ಹಲ್ಲುಜ್ಜುವ ಬ್ರಷ್ಅನ್ನು ಬದಲಾಯಿಸಬೇಕು ಎಂದು ಸಲಹೆ ನೀಡಿದರು.
ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದ ನಿಮಿತ್ತ ಚಾಕಲೇಟ್ ವಿತರಿಸುವ ಬದಲಾಗಿ ತಂದೆ-ತಾಯಿ ಹಾಗೂ ಶಿಕ್ಷಕರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು. ಸ್ನೇಹಿತರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡು ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಹಲ್ಲುಗಳನ್ನು ಉಜ್ಜಿದ ಬಳಿಕ ತೋರು ಬೆರಳಿನಿಂದ ವಸಡುಗಳ ಮೇಲೆ ಉಜ್ಜಿಕೊಳ್ಳುವುದರಿಂದ ರಕ್ತ ಪರಿಚಲನೆ ಸುಗಮಗೊಳ್ಳುತ್ತದೆ. ಅದರಿಂದ ವಸಡು ಮತ್ತು ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಆಗುತ್ತದೆ ಎಂದರು.
ಸ್ಮೈಲ್ ಕೇರ್ ಹಲ್ಲಿನ ದವಾಖಾನೆಯ ಡಾ.ಶಿಲ್ಪಾ ಬೆಳಗಲಿ, ಕಲ್ಯಾಣಿ ಪನಾಳಕರ, ಸವಿತಾ ಜಾಪಳಮಠ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 