ಮಾಧ್ಯಮಗಳಲ್ಲಿ ಮೌಢ್ಯ ಬಿತ್ತನೆ ನಿಲ್ಲಲಿ: ಡಾ.ಲಿಂಗರಾಜ ರಾಮಾಪೂರ

ಕಲಘಟಗಿ 27: ಗ್ರಹಣ ಒಂದು ನಿಸರ್ಗದ ವಿದ್ಯಮಾನ. ಸೂರ್ಯ, ಚಂದ್ರ, ಭೂಮಿಯ ಚಲನೆಯ ಆಟ. ಇದರ ವೀಕ್ಷಣೆ ಒಂದು ರೋಚಕ ಅನುಭವ ನೀಡಬಲ್ಲದು. ಆದರೆ ಕೆಲ ಮಾಧ್ಯಮಗಳು ಮೌಡ್ಯಬಿತ್ತನೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ ಜನರಲ್ಲಿ ಭಯವನ್ನು ಹುಟ್ಟಿಸುತ್ತಿವೆ. ಮಾಧ್ಯಮಗಳೂ ಜನಪ್ರಿಯತೆಯನ್ನು ಅಶ್ರಯಿಸದೇ ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಬೇಕು. ಸತ್ಯಾಸತ್ಯತೆಯನ್ನು ಜನರೆಡೆಗೆ ಇಡಬೇಕು ಎಂದು ರಾಜ್ಯ ವಿಜ್ಞಾನ ಪರಿಷತ್ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಸಂವಹನಕಾರ ಡಾ.ಲಿಂಗರಾಜ ರಾಮಾಪೂರ ಅಭಿಪ್ರಾಯಪಟ್ಟರು.

ಕಲಘಟಗಿ ತಾಲೂಕಿನ ಮಿಶ್ರೀಕೋಟಿಯ ಎಸ್.ಜೆ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಗ್ರಹಣೋತ್ಸವ-ಸೂರ್ಯಗ್ರಹಣ ವೀಕ್ಷಿಸುತ್ತ ಉಪಹಾರ ಸೇವನೆ ಕಾರ್ಯಕ್ರಮದ ನಂತರ ಅವರು ಮಾತನಾಡಿದರು.

ವೈದ್ಯರು ಔಷಧಿ ಕೊಡುವ ಮುನ್ನ ಪ್ರಶ್ನೆ, ವೀಕ್ಷಣೆ, ಪರೀಕ್ಷೆ ಮೂಲಕ ರೋಗವನ್ನು ನಿರ್ಧರಿಸುವ ತೀರ್ಮಾ ನಕ್ಕೆ ಬರುವ ಹಾಗೆ ವಿದ್ಯಾರ್ಥಿ ಗಳು ತಮ್ಮ ಜೀವನದಲ್ಲಿ ಪ್ರಶ್ನೆ, ವೀಕ್ಷಣೆ, ಪರೀಕ್ಷೆ ಈ ಮೂರು ಅಂಶಗಳನ್ನು ಅಳವಡಿಸಿಕೊಂಡು ಒಂದು ತೀರ್ಮಾ ನಕ್ಕೆ ಬರುವುದನ್ನು ರೂಢಿಸಿಕೊಳ್ಳಬೇಕು. ಆಗ ವೈಜಾನಿಕ, ಚಿಕಿತ್ಸಕ ಬುದ್ಧಿ ತಾನೇ ಕರಗತವಾಗುವುದು. ನಾವೀಗ ಚಂದ್ರನ ಮೇಲೆ ನಡೆದಾಡುವ ಕಾಲಘಟ್ಟದಲ್ಲಿ ಮೂಢನಂಬಿಕೆ ಇಟ್ಟುಕೊಳ್ಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಮ್.ಮರಿಲಿಂಗಣ್ಣವರ ದೇಶದ ಅಭಿವೃದ್ಧಿಗೆ ವೈಜ್ಞಾನಿಕ ಮನೋಭಾವ ತುಂಬಾ ಅವಶ್ಯಕ. ಹಲ್ಲಿ ನುಡಿಯುವುದು, ಬೆಕ್ಕು ಅಡ್ಡಲಾಗಿ ಬರುವುದು, ಶವ ಎದುರಿಗೆ ಬರುವುದು ಇವ್ಯಾವೂ ಅಪಶಕುನದ ಸಂಕೇತಗಳಲ್ಲ. ಒಳ್ಳೆ ಉದ್ದೇಶವಿದ್ದು ಮಾಡುವ ಕಾರ್ಯಗಳಿಗೆ ಮಾಟ, ಮಂತ್ರ ಯಾವುದೂ ಪರಿಣಾಮ ಬೀರದು. ಇವು ಕೆಲ ಜನರ ಉದ್ಯೋಗವಷ್ಟೆ. ಇವುಗಳನ್ನು ತಡೆಯುವಲ್ಲಿ ಕಠಿಣ ಕಾನೂನು ಅವಶ್ಯಕ ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ್ದ ಸಮೂಹ ಸಂಪನ್ಮೂಲ ವ್ಯಕ್ತಿ ಈಶ್ವರಪ್ಪ ಜವಳಿ ಮಾತನಾಡಿ ಶಿಕ್ಷಣ ಸಂಸ್ಥೆಗಳಲ್ಲಿ ಮೌಢ್ಯಾಚರಣೆ ತಪ್ಪು. ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಜೀವನದಲ್ಲಿ ಭರವಸೆ ಮೂಡಿಸಬಲ್ಲದು. ವಿಜ್ಞಾನದ ಜ್ಞಾನ ದೇಶದ ಅಭಿವೃದ್ಧಿಗೆ ಇರಬೇಕೆ ವಿನಃ ಅದು ಕೇವಲ ಅಂಕಗಳಿಕೆಯ ವಿಷಯವಾಗಬಾರದು ಎಂದು ಹೇಳಿದರು.

ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿ.ಬಿ.ಗುಡಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ನಿದರ್ೇಶಕ ತವನಪ್ಪ ಮನಸಾಲಿ, ಉಪನ್ಯಾಸಕರಾದ ಪಿ.ಟಿ.ಲಮಾಣಿ, ಜೆ.ವಿ.ಕುನ್ನೂರ, ಬಳಿಗೇರ. ಎಚ್.ಎಸ್.ದಾನಣ್ಣನವರ, ಎಮ್.ಬಿ.ಹುಲಿಮನಿ ಮುಂತಾದವರು ಉಪಸ್ಥಿತರಿದ್ದರು.

ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಗೀತಾ ದೀಕ್ಷಿತ ಸ್ವಾಗತಿಸಿದರು. ಗಿರಿಜಾ ಕಳ್ಳೀಮನಿ ವಂದಿಸಿದರು. ಯಲ್ಲಮ್ಮ ಅಕ್ಕಿ ಕಾರ್ಯಕ್ರಮ ನಿರ್ವಹಿಸಿದರು.