ರಾಣೇಬೆನ್ನೂರು 11 : ಮನುಜರಿಗಿಂತ ಗಿಡ ಮರಗಳು ಪ್ರಕೃತಿಯ ಜೀವನಾಡಿಗಳು, ಜಿಲ್ಲೆಯಲ್ಲಿ ವಾಣಿಜ್ಯೋದ್ಯಮ ನಗರವಾಗಿ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿರುವ ನಗರವು ಸಸ್ಯ ಶ್ಯಾಮಲೆಯಾಗಬೇಕಾಗಿದ ಇಂದಿನ ಅಗತ್ಯವಿದೆ ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ಪ್ರಕಾಶಾನಂದಿಜಿ ಮಹಾರಾಜ್ ಹೇಳಿದರು ಅವರು.
ಮಾಗೋಡ ರಸ್ತೆ ರಾಮಕೃಷ್ಣ ಆಶ್ರಮದಲ್ಲಿ ಭಾರತ ಜ್ಞಾನ-ವಿಜ್ಞಾನ ಸಮಿತಿ ಸಾಮಾಜಿಕ ಅರಣ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಕೃಷ್ಣಮೃಗ ಅಭಯಾರಣ್ಯವು ಅತ್ಯಂತ ಸುಂದರ ಮತ್ತು ಸುಶಿಜ್ಜಿತವಾಗಿದೆ, ಸುತ್ತಮುತ್ತಲು ರಕ್ಷಿತ ಅಭಯಾರಣ್ಯ ಪ್ರದೇಶವಿದ್ದರೂ ಸಹಾ ನಾಗರಿಕರು ಬಿಸಿಲಿನಿಂದ ಬಳಲುವಂತಾಗಿದೆ. ಇದು ಅತ್ಯಂತ ವಿಷಾದಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು. ಸುಂದರ ಪರಿಸರ ನಿರ್ಮಾಣಕ್ಕೆ, ಪರಿಸರ ಉಳಿವು ಮತ್ತು ಬೆಳವಣಿಗೆಗೆ ಅರಣ್ಯ ಇಲಾಖೆ ಅನೇಕ ಯೋಜನೆಗಳಲ್ಲಿ ಶಶಿಗಳನ್ನು ವಿತರಣೆಗೆ ಮುಂದಾಗಿದೆ ನಾಗರಿಕರು ತಮ್ಮ, ತಮ್ಮ ಮನೆಗಳ ಮುಂದೆ ನೆರಳು ಕೊಡುವ ಗಿಡಮರಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಲು ಮುಂದಾಗಬೇಕು ಎಂದು ಶ್ರೀಗಳು ಕರೆ ನೀಡಿದರು. ಪ್ರಸ್ತಾವಿಕವಾಗಿ ಮಾತನಾಡಿದ ಭಾರತ್ ಜ್ಞಾನ ವಿಜ್ಞಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ ಮಳೆಮಠ ವಿದ್ಯಾರ್ಥಿಗಳಲ್ಲಿ, ಸಾಮಾನ್ಯ ಜನರಲ್ಲಿ, ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಉದ್ದೇಶದಿಂದ ಭಾರತ್ ಜ್ಞಾನ ವಿಜ್ಞಾನ ಸಮಿತಿಯು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.ಪ್ರಾಕೃತಿಕ ಬದಲಾವಣೆಗಳನ್ನು ವೈಜ್ಞಾನಿಕ ಮನೋಭಾವದಿಂದ ನೋಡುವ ಅವಶ್ಯಕತೆ ಇದೆ. ಕಾಲಕ್ಕೆ ತಕ್ಕಂತೆ ಬದಲಾಗುವ ಪ್ರಕೃತಿಗೆ ಹೊಂದಿಕೊಳ್ಳುವ ಜೀವಿಗಳು ನಾಲ್ಕು ದಿನ ಹೆಚ್ಚು ಕಾಲ ಬದುಕುತ್ತವೆ ಎಂದರು. ತಾಲ್ಲೂಕಿನ ಡಿ. ಆರ್. ಎಫ್. ಪರಮೇಶ ಆನವಟ್ಟಿ ಅವರು ಮಾತನಾಡಿ,ಮೂರನೇ ಒಂದು ಭಾಗದಷ್ಟಿರಬೇಕಾದ ಅರಣ್ಯವು ಇಂದು ಹತ್ತನೇ ಒಂದು ಭಾಗದಷ್ಟು ಕೂಡ ಇಲ್ಲ. ಇಲಾಖೆಯು ಸಾಮಾಜಿಕ ಅರಣ್ಯವನ್ನು ಬೆಳೆಸುವಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ನಾಗರಿಕ ಸಮುದಾಯವು ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಬೇಕಾದ ಅಗತ್ಯವಿದೆ ಎಂದರು.
ಸಮಿತಿಯ ಗೌರವ ಅಧ್ಯಕ್ಷ ಆರ್. ಎಸ್. ಪಾಟೀಲ್, ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ, ವರ್ತಕ ಉಮೇಶ ಗುಂಡಗಟ್ಟಿ, ಸಮಿತಿ ಅಧ್ಯಕ್ಷ ಇಂದಿರಾ ಬಾರಂಗಿ, ಕೋಶಾಧ್ಯಕ್ಷ ಹೆಚ್. ಹೆಚ್. ಜಾಡರ, ಸಾಂಸ್ಕೃತಿಕ ಸಂಘಟನಾ ಕಾರ್ಯದರ್ಶಿ ವಿದ್ಯಾವತಿ ಮಳಿಮಠ, ನಗರಸಭಾ ಸದಸ್ಯ ಗಂಗಮ್ಮ ಹಾವನೂರ, ಸ್ವಾ ಟಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೆಂಕಟೇಶ್ ಈಡಿಗರ, ಕಸಾಪ ಕಾರ್ಯದರ್ಶಿ ಚಂದ್ರಶೇಖರ ಮಡಿವಾಳರ, ಪರಶುರಾಮ ಕುರವತ್ತಿ, ಪ್ರಶಿಕ್ಷಣಾರ್ಥಿ ಸೋಮಶೇಖರ ಪೂಜಾರ, ಸೇರಿದಂತೆ ಮತ್ತಿತರ ಗಣ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.