ನಿವೃತ್ತ ಕೃಷಿ ಅಧಿಕಾರಿ ಬೀಳಗಿಗೆ ಬೀಳ್ಕೊಡುಗೆ

Farewell to retired agriculture officer Bilagi

ತಾಳಿಕೋಟಿ 01: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತರಾದ ಎಮ್‌.ಎಚ್‌. ಬೀಳಗಿ ಇವರನ್ನು ಇಲಾಖೆ ವತಿಯಿಂದ ಶನಿವಾರ ಸನ್ಮಾನಿಸಿ ಬೀಳ್ಕೊಡಲಾಯಿತು.  

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ ಅವರು ಮಾತನಾಡಿ ಸರ್ಕಾರಿ ನೌಕರರ ನಿವೃತ್ತಿ ಮತ್ತು ಪದೋನ್ನತಿ ಒಂದು ಸಹಜ ಪ್ರಕ್ರಿಯೆಯಾಗಿದೆ ಆದರೆ ನಾವು ನಮ್ಮ ಸೇವಾ ಅವಧಿಯಲ್ಲಿ ಎಷ್ಟು ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಈ ಇಲಾಖೆಯಲ್ಲಿ 38 ವರ್ಷಗಳ ಸೇವೆಯನ್ನು ಸಲ್ಲಿಸಿದ ಎಂ.ಎಚ್‌. ಬೀಳಗಿಯವರು ಇಲಾಖೆ ಅಭಿಮಾನ ಪಡುವ ರೀತಿಯಲ್ಲಿ ಸೇವೆಯನ್ನು ಸಲ್ಲಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಅವರ ವಿಶ್ರಾಂತ ಬದುಕು ಸುಖಕರವಾಗಿರಲೆಂದು ಹಾರೈಸುತ್ತೇನೆ ಎಂದರು.  

ಇಲಾಖೆಯ ನಿವೃತ್ತ ನೌಕರ ಹೆಚ್‌.ವೈ.ಮಸರಕಲ್ಲ ಮಾತನಾಡಿ ಎಂ.ಎಚ್‌.ಬೀಳಗಿ ಅವರು ಕಡು ಬಡತನದ ಕುಟುಂಬದ ಹಿನ್ನೆಲೆಯಿಂದ ಬಂದವರು ಬಹಳ ಕಷ್ಟಪಟ್ಟು ಓದಿ ಸರ್ಕಾರಿ ನೌಕರಿಯನ್ನು ಪಡೆದು ಈ ಇಲಾಖೆಯಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ ಅವರ ಆದರ್ಶ ಬದುಕು ಹಾಗೂ ಸೇವಾ ನಿಷ್ಠೆ ಇಂದಿನ ಯುವಕರಿಗೆ ಮಾದರಿಯಾಗಿದೆ. ಅವರ ವಿಶ್ರಾಂತ ಬದುಕು ನೆಮ್ಮದಿದಾಯಕ ವಾಗಿರಲೆಂದು ಹಾರೈಸುತ್ತೇನೆ ಎಂದರು.  

ಸಾಮಾಜಿಕ ಕಾರ್ಯಕರ್ತ ಎಸ್‌.ಎ.ನಾಲಬಂದ, ನಿವೃತ್ತ ಶಿಕ್ಷಕಿ ಲಾಲಬಿ ಎಂ.ಬೀಳಗಿ,ರಾಜು ರುದ್ರವಾಡಿ,ಸಂಗಮೇಶ ಪಾಟೀಲ,ಲತೀಫ್ ಬೀಳಗಿ, ಎಂ. ಎಸ್‌.ಖಾಜಿ,ಎಂ.ಎಸ್‌.ಕೋರವಾರ, ಎನ್‌.ಎ.ಖಾಜಿ,ಆಸೀಫ ಬೀಳಗಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ನಿವೃತ್ತ ಕೃಷಿ ಅಧಿಕಾರಿ ಬೀಳಗಿ ಮಾತನಾಡಿ ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿರುವೆ ನನ್ನ ಸೇವೆಯ ಉದ್ದಕ್ಕೂ ಸಂಘದ ಅಧ್ಯಕ್ಷರಾದ ಅರವಿಂದ ಹೂಗಾರ ನನ್ನ ಸಹೋದ್ಯೋಗಿಗಳು ಹಾಗೂ ಒಳ್ಳೆಯ ಮಿತ್ರರ ಸಹಕಾರ ಮಾರ್ಗದರ್ಶನ ದಿಂದಾಗಿ ನಾನು ನನ್ನ ಸೇವೆಯನ್ನು ಪ್ರಮಾಣಿಕತೆಯಿಂದ ಮಾಡಲು ಸಾಧ್ಯವಾಗಿದೆ ಅವರಿಗೆ ನಾನು ಚಿರಋಣಿಯಾಗಿರುವೆ ಎಂದರು.  

ನಿವೃತ್ತ ಕೃಷಿ ಅಧಿಕಾರಿ ಬೀಳಗಿ ಅವರಿಗೆ ಇಲಾಖೆ ವತಿಯಿಂದ ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕೃಷಿ ಅಧಿಕಾರಿ ಮಹೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಸಂಗಮೇಶ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಬಾಗವಾನ ಜಮಾತ್ ಅಧ್ಯಕ್ಷ ಸದ್ದಾಂ ಬೀಳಗಿ, ಕೊಹಿನೂರ ಸಂಘದ ಅಧ್ಯಕ್ಷ ಕಾಸೀಮಸಾಬ ಜಕಾತಿ, ಅಬ್ಬಾಸಲಿ ನಿಡಗುಂದಿ, ಮೈನು ಕೊರ್ತಿ, ಆದಮಸಾಬ ಢಾಲಾಯತ್, ಮೋದಿನ ಹೊನ್ನುಟಗಿ, ರಾಜಅಹ್ಮದ್ ಬೆಣ್ಣೂರ, ಮಶಾಕ್ ಮುರಾಳ ಹಾಗೂ ಇಲಾಖೆಯ ಸಿಬ್ಬಂದಿಗಳು ಇದ್ದರು.