ರೇಣುಕಾಚಾರ್ಯ ವಿರುದ್ಧ ಎಸ್‍ಡಿಪಿಐಯಿಂದ ಕ್ರಿಮಿನಲ್ ಪ್ರಕರಣ ದಾಖಲು

ಬೆಂಗಳೂರು,  ಜ.25, "ನನ್ನ ಕ್ಷೇತ್ರದಲ್ಲಿರುವ ಮುಸ್ಲಿಮರ ಅಭಿವೃದ್ಧಿಗಾಗಿ ಕೆಲಸ ಮಾಡುವುದಿಲ್ಲ. ಅವರು  ನನಗೆ ಮತ ಹಾಕಲಿಲ್ಲ. ಮಸೀದಿ, ಮದರಸಗಳಲ್ಲಿ ಶಸ್ತ್ರಾಸ್ತಗಳನ್ನು ಸಂಗ್ರಹಿಸಿಡಲಾಗಿದೆ.  ಮದರಸಗಳಲ್ಲಿ ಭಯೋತ್ಪಾದನೆ ಪೋಷಿಸಲಾಗುತ್ತಿದೆ" ಎಂದು ಇತ್ತೀಚೆಗೆ ವಿಕಾಸಸೌಧದಲ್ಲಿ  ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಹೇಳಿಕೆ ನೀಡಿರುವ ಹೊನ್ನಾಳಿ ಶಾಸಕ  ಎಂ.ಪಿ. ರೇಣುಕಾಚಾರ್ಯ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್  ಇಂಡಿಯಾ-ಎಸ್‍ಡಿಪಿಐ  ಜನವರಿ 23ರಂದೇ ಬೆಂಗಳೂರಿನಲ್ಲಿ ಕ್ರಿಮಿನಲ್ ದೂರು ದಾಖಲಿಸಿದೆ. 

ಎಸ್‍ಡಿಪಿಐ  ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್, ಬೆಂಗಳೂರಿನ ವಿಧಾನಸೌಧ ಪೊಲೀಸ್  ಠಾಣೆಯಲ್ಲಿ ದೂರು ದಾಖಲಿಸಿದ್ದು, ರೇಣುಕಾಚಾರ್ಯ ಧರ್ಮಗಳ ನಡುವೆ ದ್ವೇಷ ಹಾಗೂ ಅಪನಂಬಿಕೆ  ಹುಟ್ಟಿಸುತ್ತಿದ್ದು  ಮತೀಯ ಹಿಂಸಾಚಾರಗಳಿಗೆ ಪ್ರಚೋದನೆ ನೀಡಿದ್ದಾರೆ. ಮತ ಹಾಕದ  ಮುಸ್ಲಿಮರ ಅಭಿವೃದ್ಧಿ ಮಾಡುವುದಿಲ್ಲ ಎನ್ನುವುದು ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ  ಮಾಡಿದ ಅವಮಾನವಾಗಿದೆ. ಹಾಗಾಗಿ ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಕಠಿಣ ಕಾನೂನು  ಕ್ರಮಕ್ಕೆ ಒಳಪಡಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ ಎಂದು ಎಸ್‍ಡಿಪಿಐ  ಪ್ರಕಟಣೆಯಲ್ಲಿ ತಿಳಿಸಿದೆ.