ಜಮ್ಮು-ಕಾಶ್ಮೀರ 06: ಚಿನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ವಿಶ್ವದ ಅತೀ ಎತ್ತರದ ರೈಲ್ವೆ ಕಮಾನು ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸುವ ಮೂಲಕ ಕಾಶ್ಮೀರ ಕಣಿವೆಗೆ ಇನ್ನು ದೇಶದ ಇತರ ಭಾಗದ ಸಂಪರ್ಕ ಕಲ್ಪಿಸಿದಂತಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಉಧಾಂಪುರ್ ನಲ್ಲಿರುವ ಏರ್ ಫೋರ್ಸ್ ಸ್ಟೇಷನ್ ಗೆ ಆಗಮಿಸಿದ ನಂತರ ವಾಯು ಮಾರ್ಗದ ಮೂಲಕ ಚಿನಾಬ್ ಸೇತುವೆ ಸ್ಥಳಕ್ಕೆ ಆಗಮಿಸಿ, ರೈಲ್ವೆ ಕಮಾನು ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಭಾರತದ ಸೇನೆ ಪ್ರತೀಕಾರವಾಗಿ ಪಾಕ್ ಮೇಲೆ ಆಪರೇಶನ್ ಸಿಂದೂರ ಕಾರ್ಯಾಚರಣೆ ನಡೆಸಿದ ನಂತರ ಪ್ರಧಾನಿ ಮೋದಿ ಅವರು ನೀಡಿದ ಮೊದಲ ಭೇಟಿ ಇದಾಗಿದೆ.
ಸುಮಾರು 1,400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಚಿನಾಬ್ ಸೇತುವೆಯು ವಿಶ್ವದ ಅತೀ ಎತ್ತರದ ರೈಲು ಮತ್ತು ಕಮಾನು ಸೇತುವೆಯಾಗಿದ್ದು, ನದಿಯ ತಳದಿಂದ 359 ಮೀಟರ್ ಎತ್ತರವಿದೆ. ಇದು ಪ್ಯಾರಿಸ್ ನ ಐಫೆಲ್ ಟವರ್ ಗಿಂತ 35 ಮೀಟರ್ ಎತ್ತರವಾಗಿದೆ. 1,315 ಮೀಟರ್ ಉದ್ದದ ಸೇತುವೆ ಇದಾಗಿದೆ. ಇದು ಸಿವಿಲ್ ಇಂಜಿನಿಯರಿಂಗ್ ನಲ್ಲಿನ ದೇಶದ ಅದ್ಭುತ ಸೇತುವೆ ಎಂದು ಪರಿಗಣಿಸಲಾಗಿದೆ.
ಈ ಸಂದರ್ಭದಲ್ಲಿ ಕಟ್ರಾದ ಶ್ರೀಮಾತಾ ವೈಷ್ಣೋ ದೇವಿ ಮತ್ತು ಶ್ರೀನಗರ ನಡುವಿನ ಎರಡು ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ.
ಕಟ್ರಾ-ಶ್ರೀನಗರ್ ನಡುವಿನ ವಂದೇಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಿದ್ದಾರೆ. ಈ ಮಾರ್ಗವು 272 ಕಿಲೋ ಮೀಟರ್ ಉದ್ದದ ಉಧಾಂಪುರ್-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕ ಯೋಜನೆಯ ಬಹುಮುಖ್ಯ ಭಾಗವಾಗಿದೆ.
ಇದು 12.7 ಕಿಲೋ ಮೀಟರ್ ಉದ್ದವಿದ್ದು, ಭಾರತದ ಅತಿ ಉದ್ದನೆಯ ರೈಲ್ವೆ ಸುರಂಗ ಟಿ-50ಮೂಲಕ ಸಂಚರಿಸಲಿದೆ. ಜಮ್ಮುವಿನ ಕಾಟ್ರಾದಿಂದ ಶ್ರೀನಗರ ನಡುವಿನ ಸಂಚಾರವು ವಂದೇ ಭಾರತ್ ನಿಂದಾಗಿ 3ಗಂಟೆಗಳಷ್ಟು ಇಳಿಕೆಯಾಗಲಿದೆ.
ವಂದೇ ಭಾರತ್ ರೈಲು ಮಾರ್ಗದಲ್ಲಿ 943 ಸೇತುವೆಗಳು, 36 ಪ್ರಮುಖ ಸುರಂಗಗಳು ಇದ್ದು, ಇದು ರೈಲು ಮಾರ್ಗದ ನಡುವಿನ ವಿಶೇಷತೆಯಾಗಿದೆ. ಈ ವಂದೇ ಭಾರತ್ ರೈಲಿನಲ್ಲಿ ವಾತಾವರಣಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವ ಅತ್ಯಾಧುನಿಕ ಹೀಟರ್ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೇ ಹಿಮಪಾತದಿಂದ ತಾಪಮಾನವು ಮೈನಸ್ ಡಿಗ್ರಿ ಸೆಲ್ಸಿಯಸ್ ಗೆ ತಲುಪಿದ್ದಾಗಲೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೀಟರ್ ಗಳಿಂದ ರಕ್ಷಣೆ ಪಡೆಯುವ ವ್ಯವಸ್ಥೆ ಇದರಲ್ಲಿದೆ.