ಗುರು ಪೂರ್ಣಿಮೆ: ಪಂತ ಬಾಳೇಕುಂದ್ರಿಯಲ್ಲಿ ಭಕ್ತಿ ಸಂಭ್ರಮ

ಗುರು ಪೂರ್ಣಿಮೆ: ಪಂತ ಬಾಳೇಕುಂದ್ರಿಯಲ್ಲಿ ಭಕ್ತಿ ಸಂಭ್ರಮ  Guru Purnima: Devotional fervor at Pant Balekundri

ಬೆಳಗಾವಿ, ಜು. 30: ತಾಲೂಕಿನ ಸುಕ್ಷೇತ್ರ ಪಂತ ಬಾಳೇಕುಂದ್ರಿಯಲ್ಲಿ ಗುರು ಪೂರ್ಣಿಮೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.  ಗುರು ಪೂರ್ಣಿಮೆ ಅಂಗವಾಗಿ ಶ್ರೀ ದತ್ತ ಮಹಾರಾಜರಿಗೆ ಅಭಿಷೇಕ, ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ಬುಧವಾರ ಸಂಜೆದಿಂದಲೇ ಪವಾಡ ಪುರುಷ ಶ್ರೀ ದತ್ತ ಮಹಾರಾಜರ ದರ್ಶನಕ್ಕಾಗಿ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ರಾತ್ರಿಯಿಂದಲೇ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳಿಗಾಗಿ ಪ್ರಾರ್ಥನೆ ಸಲ್ಲಿಸಿದರು.  

ಗುರುವಾರ ಬೆಳಗ್ಗಿನಿಂದಲೇ ಭಕ್ತರ ಆಗಮನ ಮತ್ತಷ್ಟು ಹೆಚ್ಚಾಗಿ, ಶ್ರೀ ದತ್ತ ಸಂಸ್ಥಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕರ್ನಾಟಕದ ವಿವಿಧ ಜಿಲ್ಲೆಗಳೊಂದಿಗೆ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ಗುರು ಪೂರ್ಣಿಮೆಯ ಪವಿತ್ರ ಆಚರಣೆಯಲ್ಲಿ ಭಾಗವಹಿಸಿದರು.  

ಪಂತ ಬಾಳೇಕುಂದ್ರಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರು ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗಿಯಾದರು. ಮಧ್ಯಾಹ್ನ ಭಕ್ತರಿಗೆ ಅನ್ನ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಭಕ್ತರು ಭಕ್ತಿಭಾವದಿಂದ ಮಹಾಪ್ರಸಾದ ಸ್ವೀಕರಿಸಿದರು.  

ಗುರು ಪೂರ್ಣಿಮೆಯ ಅಂಗವಾಗಿ ನಡೆದ ಕಾರ್ಯಕ್ರಮಗಳು ಶಾಂತಿ, ಸೌಹಾರ್ದತೆ ಹಾಗೂ ಆಧ್ಯಾತ್ಮಿಕ ವಾತಾವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಂತ ಬಾಳೇಕುಂದ್ರಿ ಗ್ರಾಮದ ಯುವಕರು ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಅನ್ನಪ್ರಸಾದ ವಿತರಿಸುವ ಮೂಲಕ ಸೇವಾಭಾವ ಮೆರೆದರು.