ಮೈಕ್ರೋ ಫೈನಾನ್ಸಗಳಿಂದ ಬಡವರಿಗೆ ತೊಂದರೆಯಾಗಬಾರದು - ಸಚಿವ ಶಿವರಾಜ ತಂಗಡಗಿ
ಕೊಪ್ಪಳ 01 : ಮೈಕ್ರೋ ಫೈನಾನ್ಸಗಳು ನಿಯಮ ಉಲ್ಲಂಘನೆ ಮಾಡಿ ಬಡವರಿಗೆ ಅನಾವಶ್ಯಕವಾಗಿ ತೊಂದರೆ ನೀಡಿ ಹಣ ವಸೂಲಿಮಾಡುವ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದರೆ ಅಧಿಕಾರಿಗಳು ತಕ್ಷಣ ಅಂತವರ ಮೇಲೆ ಕ್ರಮ ಜರುಗಿಸಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.
ಅವರು ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸಗಳ ಹಾವಳಿ ತಡೆಗಟ್ಟುವ ಕುರಿತು ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಎಷ್ಟು ಮೈಕ್ರೋ ಫೈನಾನ್ಸಗಳು ರಜಿಸ್ಟರ್ ಆಗಿವೆ, ರಜಿಸ್ಟರ್ ಆಗದೆ ಇರುವವು ಎಷ್ಟು, ಅವುಗಳು ಕಾನೂನು ಚೌಕಟ್ಟಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆಯೆ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆಯಬೇಕು. ಇಲ್ಲಿಯವರೆಗೆ ಈ ಕುರಿತು ಯಾವುದಾದರು ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದರೆ ಮಾಹಿತಿ ನೀಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಿದರು.ಕೆಲವೊಂದು ಫೈನಾನ್ಸಗಳು ನಿಯಮ ಉಲ್ಲಂಘನೆ ಮಾಡಿ ಹಣ ವಸೂಲಿ ಹಾಗೂ ದಿನದ ಬಡ್ಡಿ ಹಾಕುವವರು ಇದ್ದಾರೆ ಅಂಥವರ ಮೇಲೆ ಒಂದು ಕಣ್ಣು ಇಡಿ ಇದು ವಿಶೇಷವಾಗಿ ನೀರಾವರಿ ಭಾಗದ ಗಂಗಾವತಿ. ಕಾರಟಗಿ ಸೇರಿದಂತೆ ಇತರೆ ಕಡೆ ಹೆಚ್ಚಾಗಿ ಕಂಡು ಬರುತ್ತದೆ. ವ್ಯಾಪಾರ ವಹಿವಾಟಿಗೆ ಬ್ಯಾಂಕ್ ಮತ್ತು ಫೈನಾನ್ಸಗಳು ಬೇಕು ಆದರೆ ಅವು ತಮ್ಮ ಇತಿಮಿತಿ ಹಾಗೂ ನಿಯಮ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಬಡವರಿಗೆ ತೊಂದರೆ ನೀಡಿ ಹಣ ವಸೂಲಿ ಮಾಡುವ ಫೈನಾನ್ಸಗಳಿಗೆ ಎಚ್ಚರಿಕೆ ನೀಡಬೇಕೆಂದು ಹೇಳಿದರು.ನಮ್ಮ ಜಿಲ್ಲೆಯಲ್ಲಿ ಇಂಥ ಯಾವುದೇ ಪ್ರಕರಣಗಳು ಕಂಡು ಬರಬಾರದು ಫೈನಾನ್ಸಗಳಿಂದ ಕಿರುಕೂಳ ಪ್ರಕರಣಗಳ ವರದಿಯಾದಲ್ಲಿ ಅದನ್ನು ಪೊಲೀಸ್ ಅಧಿಕಾರಿಗಳು ಪರೀಶೀಲನೆ ನಡೆಸಿ ಒಂದು ವೇಳೆ ಕಿರುಕುಳ ನೀಡುತ್ತಿರುವುದು ನಿಜ ಎಂದು ಕಂಡು ಬಂದರೆ ಅಂತವುಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕೆಂದರು.ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಮಾತನಾಡಿ ಸಾರ್ವಜನಿಕರು ಮೈಕ್ರೋ ಫೈನಾನ್ಸಗಳಿಂದ ಸಾಲ ಪಡೆಯುವ ಮುಂಚೆ ಫೈನಾನ್ಸಗಳ ಬಡ್ಡಿದರ. ಇಎಂಐ ಮತ್ತು ಮರು ಪಾಯತಿ ನಿಯಮಗಳ ಮಾಹಿತಿಯನ್ನು ಮೊದಲು ಸಂಪೂರ್ಣವಾಗಿ ತಿಳಿದುಕೊಂಡ ನಂತರ ತಮಗೆ ಸರಿ ಅನಿಸಿದಾಗ ಮಾತ್ರ ಅವರಿಂದ ಸಾಲ ಪಡೆಯಬೇಕು ಮತ್ತು ತಮಗೆ ಎಷ್ಟು ಬೇಕು ಅಷ್ಟನ್ನೆ ಪಡೆಯಬೇಕು. ತಮ್ಮ ಸಾಲ ಮರುಪಾವತಿ ಮಾಡಲು ಅನುಕೂಲಕರವಾಗುವ ರೀತಿಯಲ್ಲಿ ಇದ್ದಾಗ ಮಾತ್ರ ಅದನ್ನು ಹಿಂದಿರುಗಿಸಲು ಸಾಧ್ಯ. ಯಾವುದೇ ಫೈನಾನ್ಸ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾದಾಗ ಅವರು ತಮ್ಮ ನಿಯಮಗಳು ಪಾಲನೆ ಮಾಡಿದ್ದಾರೆಯೆ ಹಾಗೂ ಅವರ ಮೈಕ್ರೋ ಫೈನಾನ್ಸಗಳ ನಿಯಮ ಏನಿವೆ ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ಪರೀಶೀಲನೆ ಮಾಡುವ ಕೆಲಸ ಮೊದಲು ಮಾಡಬೇಕು ಅಂದಾಗ ನಿಜವಾದ ಮಾಹಿತಿ ತಮಗೆ ಸಿಗುತ್ತದೆ ಎಂದು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತ ಕುಮಾರ್, ಲೀಡ್ ಬ್ಯಾಂಕ್ ಮಾನೇಜರ್ ವೀರೇಂದ್ರ ಕುಮಾರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನ ತಹಶಿಲ್ದಾರರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.