13ರಂದು ಬೆಳಗಾವಿಯ ಸುವರ್ಣಸೌಧದ ಮುಂದೆ ಸ್ಲಂ ಸಂಘಟನೆ ಪ್ರತಿಭಟನೆ
ಗದಗ 10: ಸ್ಲಂ ನಿವಾಸಿಗಳನ್ನು ನಿರ್ಲಕ್ಷ್ಯದಿಂದ ರಾಜ್ಯ ಸರ್ಕಾರ ನೋಡುತ್ತಿದ್ದು, 2024-2025 ನೇ ಸಾಲಿನ ಬಜೆಟ್ನಲ್ಲಿ ಕೇವಲ 30 ಕೋಟಿ ರೂ.ಮಾತ್ರ ಸ್ಲಂಗಳ ಅಭಿವೃದ್ಧಿಗೆ ನೀಡಿರುವುದು ನಗರ ವಂಚಿತ ಸಮುದಾಯಗಳನ್ನು ಅಪಮಾನಿಸಿದಂತಾಗಿದೆ. ಸಾಮಾಜಿಕ ನ್ಯಾಯ ಸರ್ಕಾರದ ಧ್ಯೇಯವಾದರೂ ಸ್ಲಂ ಜನರನ್ನು ಒಂದು ಸಮುದಾಯವಾಗಿ ಗುರುತಿಸುವಲ್ಲಿ ವಿಫಲವಾಗಿದ್ದು, ಸರ್ಕಾರದ ಈ ಧೋರಣೆ ಖಂಡಿಸಿ ಡಿಸೆಂಬರ್ 13ರಂದು ಬೆಳಗಾವಿಯ ಸುವರ್ಣಸೌಧದ ಮುಂದೆ ಸ್ಲಂ ಜನಾಂದೋಲನ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಗದಗ ಜಿಲ್ಲಾಧ್ಯಕ್ಷ ಇಮ್ತಿಯಾಜ್ ಮಾನ್ವಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರ ಬಡಜನರಾಗಿರುವ ಸ್ಲಂ ನಿವಾಸಿಗಳ ಕಷ್ಟದ ಅನುಭವವಿಲ್ಲದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ರಿಯಲ್ ಎಸ್ಟೇಟ್ ಉದ್ಯಮಿಗಳ ಮತ್ತು ಬಿಲ್ಡರ್ಸ್ ಗಳ ಪರವಾದಂತಹ ನಿಲುವುಳ್ಳವರಾಗಿದ್ದಾರೆ. ಇದರಿಂದಾಗಿ ಸಂಪೂರ್ಣವಾಗಿ ಸ್ಲಂಗಳ ಅಭಿವೃದ್ಧಿ ನೆಲಕಚ್ಚಿದೆ. ಖಾಸಗಿ ಮಾಲೀಕತ್ವದ 710ಕ್ಕೂ ಹೆಚ್ಚು ಸ್ಲಂಗಳು ಘೋಷಣೆಯಾಗಿ 1.50 ಲಕ್ಷ ಕುಟುಂಬಗಳು ಜೀವನ ಸಾಗಿಸುತ್ತಿದ್ದು, ಇವುಗಳನ್ನು ಸಕ್ರಮಗೊಳಿಸಲು ಸರ್ಕಾರ ಬದ್ಧತೆ ಪ್ರರ್ದಶಿಸಿಲ್ಲ ಎಂದರು.
1973ರ ಸ್ಲಂ ಕಾಯ್ದೆ ವಿರುದ್ಧವಾಗಿ ಕಳೆದ 2 ವರ್ಷಗಳಿಂದ ಖಾಸಗಿ ಸ್ಲಂಗಳನ್ನು ಘೋಷಿಸುವುದನ್ನೇ ನಿಲ್ಲಿಸಲಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಬಡ ಜನರ ಪರವಾಗಿರುವ ಕಾಯಿದೆಯನ್ನು ಜಾರಿಗೊಳಿಸಲು ನಿರ್ಲಕ್ಷ್ಯ ಧೋರಣೆ ತಾಳಲಾಗಿದೆ. ರಾಜ್ಯದಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಲ್ಲಿ 1,80,253 ಮನೆಗಳನ್ನು ವಿವಿಧ ನಗರ ಪಟ್ಟಣಗಳಲ್ಲಿ ನಿರ್ಮಿಸಲಾಗುತ್ತಿದ್ದು, ಇದುವರೆಗೂ ಅಂದಾಜು 60,789 ಮನೆಗಳನ್ನು ಪೂರ್ಣಗೊಳಿಸಿ ಹಸ್ತಾಂತರ ಮಾಡಿದೆ ಎಂದರು.
ಉಳಿದ 1,20,000 ಕುಟುಂಬಗಳು ಅತಂತ್ರವಾಗಿ ಸರ್ವರಿಗೂ ಸೂರು ಕಲ್ಪಿಸುವ ಯೋಜನೆಯಲ್ಲಿ ಬೀದಿಗಳಲ್ಲಿ ಬದುಕುತ್ತಿದ್ದಾರೆ. 2020ರಲ್ಲಿ ಜಾರಿಗೆ ತಂದ ಕೊಳಗೇರಿ ನಿವಾಸಿಗಳಿಗೆ ಭೂ ಒಡೆತನ ನೀಡುವ ಹಕ್ಕುಪತ್ರ ಹಂಚಿಕೆ 3.36 ಲಕ್ಷ ಕುಟುಂಬಗಳ ಪೈಕಿ ಇದುವರೆಗೂ 1.14 ಲಕ್ಷ ಕುಟುಂಬಗಳಿಗೆ ಮಾತ್ರ ನೀಡಲಾಗಿದೆ. ಆದರೆ ಸೀಲ್ ಡೀಡ್ ನೀಡುವ ನೋಂದಣಿ ಪ್ರಕ್ರಿಯೆಯನ್ನು ಚುರುಕುಗೊಳಿಸಿಲ್ಲ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತಾ ಮಾಡಲು 20 ವರ್ಷಗಳ ತೆರಿಗೆ ಪಾವಾತಿಸುವಂತೆ ಹೇಳಿರುವುದು ಬಡಜನರಿಗೆ ಹೊರೆಯಲ್ಲವೇ ಅಂತ ಪ್ರಶ್ನಿಸಿದರು.
ಸ್ಲಂ ನಿವಾಸಿಗಳ ಜನಸಂಖ್ಯೆವಾರು ಬಜೆಟ್ ನೀಡಲು, ಭವಿಷ್ಯದ ನಗರೀಕರಣ ಆಯಾಮದಲ್ಲಿ ಹೊಸ ಸ್ಲಂ ಕಾಯಿದೆ ರಚನೆ, ನಿವೇಶನ ರಹಿತರಿಗೆ ವಸತಿ ಹಕ್ಕು ಕಾಯಿದೆ ಸೇರಿದಂತೆ ನಗರ ಲ್ಯಾಂಡ್ ಬ್ಯಾಂಕ್ ನೀತಿ ಜಾರಿಯಾಗಬೇಕಿದೆ. ಹಾಗಾಗಿ ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪರಿಹಾರ ನೀಡಬೇಕೆಂದರು ಡಿ.13 ರಂದು ಪ್ರತಿಭಟನೆ ಹಮ್ಮಿಕೊಂಡಿದೆ.
ಪ್ರಮುಖ ಬೇಡಿಕೆಗಳು 1. ಸ್ಲಂ ಜನರಿಗೆ ಹಕ್ಕುಪತ್ರ, ನೋಂದಣಿ, ಇ-ಖಾತಾ ಪ್ರಕ್ರಿಯೆಯನ್ನು ಚುರುಕು ಗೊಳಿಸಬೇಕು.2. ಖಾಸಗಿ ಸ್ಲಂಗಳ ಘೋಷಣೆಗೆ ತೊಡಕಾಗಿರುವ ವಸತಿ ಇಲಾಖೆ ಸುತ್ತೋಲೆಯನ್ನು ಹಿಂಪಡೆಯಬೇಕು. 3. 2025-2026ನೇ ಬಜೆಟ್ ನಲ್ಲಿ ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ ಅನುದಾನವನ್ನು ಮೀಸಲಿಡಬೇಕು.4.ವಸತಿ ಸಮುಚ್ಚಯಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು.5. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಒತ್ತಾಯವಿದೆ.
ಈ ಸಂದರ್ಭದಲ್ಲಿ ಅಶೋಕ ಕುಸಬಿ, ರವಿಕುಮಾರ ಬೆಳಮಕರ, ಇಬ್ರಾಹಿಂ ಮುಲ್ಲಾ, ಮೆಹಬೂಬಸಾಬ್ ಬಳ್ಳಾರಿ, ಪರವಿನಾಭಾನು ಹವಾಲ್ದಾರ, ಮಂಜುನಾಥ ಶ್ರೀಗಿರಿ, ಮೌಲಾಸಾಬ್ ಗಚ್ಚಿ, ಮಕ್ತುಂಸಾಬ್ ಮುಲ್ಲಾನವರ, ಖಾಜಾಸಾಬ್ ಇಸ್ಮಾಯಿಲನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.