ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳ ಅವಲೋಕನ ಸಭೆ
ಗದಗ 01: ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಸಾವಿತ್ರಿಬಾಪುಲೆ ಮಹಿಳಾ ಸಂಘಟನೆ ಸಹಕಾರದಲ್ಲಿ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ವಿಭಾಗ ಮಟ್ಟದ ಸ್ಲಂ ಜನರ ಸಮಾವೇಶ ಮತ್ತು ಸಾಂಸ್ಕೃತಿ ಹಬ್ಬ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತ್ತು, ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕಾದರೆ ಸ್ಲಂ ಸಮಿತಿ ಪದಾಧಿಕಾರಿಗಳು ಕಳೆದ ಒಂದು ತಿಂಗಳಗಳಿಂದ ನಿರಂತರವಾಗಿ ಸ್ಲಂಗಳಲ್ಲಿ ಸಭೆಗಳನ್ನು ನಡೆಸಿ ಸಮಾವೇಶದ ಮಾಹಿತಿಯನ್ನು ನೀಡಿ ಕಾರ್ಯಕ್ರಮಕ್ಕೆ ಸಾವಿರಾರು ಜನರನ್ನು ಸೇರಿಸಲು ಸಾಧ್ಯವಾಗಿದೆ, ವಿಭಾಗ ಮಟ್ಟದ ಸ್ಲಂ ಜನರ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದ ಯಶಸ್ವಿಗಾಗಿ ಹಗಲಿರಳು ದುಡಿದ ನಮ್ಮ ಸ್ಲಂ ಸಮಿತಿ ಮುಖಂಡರಿಗೆ ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ ಆರ್ ಮಾನ್ವಿ ಧನ್ಯವಾದಗಳನ್ನು ಸಲ್ಲಿಸಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಸ್ಲಂ ಜನರ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದ ಅವಲೋಕನ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸ್ಲಂ ಜನರಿಗೆ ಸಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಹಾಗೂ ಸ್ಲಂ ಜನರ ಭೂಮಿ ಹಕ್ಕು ಮತ್ತು ವಸತಿ ಹಕ್ಕು ಖಾತ್ರಿಗೊಳಿಸಲು ಆಗ್ರಹಿಸಿ ವಿಭಾಗ ಮಟ್ಟದ ಕಾರ್ಯಕ್ರಮ ನಡೆಸಲಾಗಿದ್ದು, ನಮ್ಮ ಸಮಾವೇಶದ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ನಮ್ಮ ಭಾಗದ ಜನಪ್ರತಿನಿಧಿಗಳಿಗೆ ಸ್ಲಂ ಜನರ ಬೇಡಿಕೆಗಳಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಲಾಗಿದೆ, ಸಮಾವೇಶದ ಹಕ್ಕೋತ್ತಾಯಗಳನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಹಾಗೂ ನಮ್ಮ ಭಾಗದ ಸ್ಥಳೀಯ ಶಾಸಕರು ಗಂಭೀರವಾಗಿ ಪರಿಗಣಿಸಬೇಕಂದು ಒತ್ತಾಯಿಸಿದರು.
ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ ಮಾತನಾಡಿ ಸ್ಲಂ ಜನರ ಸಮಾವೇಶ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗಿದೆ, ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಕಳೆದ 18 ವರ್ಷಗಳಲ್ಲಿ ಅನೇಕ ಜನಪರವಾದ ಹೋರಾಟಗಳನ್ನು ನಡೆಸುವ ಮೂಲಕ ಯಶಸ್ವಿ ಕಂಡಿದ್ದೇವೆ, ಸ್ಲಂ ಜನರಿಗೆ ಭೂಮಿ ಹಕ್ಕು ಒದಗಿಸಿ ಕೊಡುವಲ್ಲಿ ನಮ್ಮ ಸ್ಲಂ ಸಮಿತಿ ಪ್ರಮುಖ ಪಾತ್ರ ವಹಿಸಿದೆ, ನಿರಂತರ ಹೋರಾಟಗಳ ಫಲವಾಗಿ ನಗರದ ಅನೇಕ ಕೊಳಚೆ ಪ್ರದೇಶದ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿ ಸ್ಲಂ ನಿವಾಸಿಗಳಿಗೆ ಭೂ ಮಾಲಿಕರಾಗಿ ಮಾಡಲಾಗಿದೆ, ಸ್ಲಂ ಪ್ರದೇಶಗಳ ಅಭಿವೃಧ್ದಿಗಾಗಿ ಸ್ಥಳೀಯ ಜನಪ್ರತಿನಿಧಿಗಳು ಅನುದಾನವನ್ನು ಮಂಜೂರು ಮಾಡಿ ಕೊಳಚೆ ಪ್ರದೇಶಗಳ ಜ್ವಲಂತ ಸಮಸ್ಯಗಳಿಗೆ ಪ್ರಮಾಣಿಕವಾಗಿ ಸ್ಪಂದಿಸಬೇಕೆಂದು ಹೇಳಿದರು, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ ಮಾತನಾಡಿ ಸುಮಾರು ದಿನಗಳಿಂದ ಸ್ಲಂ ಜನರ ಸಮಾವೇಶ ಹಾಗೂ ಸ್ಲಂ ಹಬ್ಬ ಕಾರ್ಯಕ್ರಮದ ಕುರಿತು ನಗರದ 30 ಕ್ಕೊ ಹೆಚ್ಚು ಸ್ಲಂಗಳಲ್ಲಿ ಸಭೆಗಳನ್ನು ನಡೆಸಿ ಜನರಿಗೆ ಕಾರ್ಯಕ್ರಮದ ರೂಪರೇಷಗಳ ಕುರಿತು ಮಾಹಿತಿ ನೀಡಲಾಗಿತ್ತು, ಸ್ಲಂ ಜನರ ಹಾಗೂ ವಸತಿರಹಿತರ ಬೇಡಿಕೆಗಳ ಕುರಿತು ಸಮಾವೇಶದ ಮೂಲಕ ನಮ್ಮ ಜನಪ್ರತಿನಿಧಿಗಳಿಗೆ ಮಾಹಿತಿಯನ್ನು ನೀಡಲಾಗಿದೆ, ಕೊಡಲೇ ಸಮಾವೇಶದಲ್ಲಿ ಕೈಗೊಂಡಿರುವ ನಿರ್ಣಯದಂತೆ ನಮ್ಮ ಸಚಿವರು ವಸತಿರಹಿತ ಕುಟುಂಬಗಳಿಗೆ ಮನೆಗಳನ್ನು ಹಂಚಿಕೆ ಮಾಡಬೇಕು, ಸಮಾವೇಶದಲ್ಲಿ ಹಚ್ಚಿನ ಸಂಖ್ಯೆಯಲ್ಲಿ ನಮ್ಮ ಸ್ಲಂ ಪ್ರದೇಶದ ಮಹಿಳೆಯರು ಭಾಗವಹಿಸಿದ್ದರಿಂದ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.
ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾವೇಶ ಹಾಗೂ ಸ್ಲಂ ಹಬ್ಬ ಕುರಿತು ವಿವರಿಸಿದರು, ಪೌರಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ ರಾಮು.ಪಿ.ಬಳ್ಳಾರಿ, ಸ್ಲಂ ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಶರಣಪ್ಪ ಸೂಡಿ, ಖಾಜಾಸಾಬ ಇಸ್ಮಾಯಿಲನವರ, ಸಲೀಂ ಹರಿಹರ, ಮಹರುನಿಸಾ ಡಂಬಳ, ಸಾಕ್ರುಬಾಯಿ ಗೋಸಾವಿ, ಮೈಮುನ ಬೈರಕದಾರ, ಮುನ್ನಾ ಅಗಡಿ, ರೇಷ್ಮಾ ಢಾಲಾಯತ, ಜಂದಿಸಾಬ ಬಳ್ಳಾರಿ ಹಾಗೂ ಸ್ಲಂ ಸಮಿತಿ ಮುಖಂಡರು ಉಪಸ್ಥಿತರಿದ್ದರು.