ಜಾತಿ ಸಮೀಕ್ಷೆ ಯಶಸ್ಸಿಗೆ ಸರ್ಕಾರದೊಂದಿಗೆ ಜನರು ಕೈಜೋಡಿಸಿ : ಚಂದ್ರಶೇಖರ ಕೊಡಬಾಗಿ

People should join hands with the government for the success of the caste survey: Chandrashekar Koda

ವಿಜಯಪುರ 26 :  ಜಾತಿ ಗಣತಿಯ ಸಂದರ್ಭದಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ  ಆಂಧ್ರ ಜಾತಿಗಳನ್ನು ಹೊರತುಪಡಿಸಿ ಪಟ್ಟಿಯಲ್ಲಿರುವ ಹೊಲೆಯ, ಬಲಗೈ, ಛಲವಾದಿ, ಮಹರ್, ಪರಯ್ಯ, ಮಾಲಾ ಗುಂಪಿಗೆ ಸಂಬಂಧಿಸಿದ ನಿಮ್ಮ ನಿಮ್ಮ ಸಮಾನಾಂತರ ಸ್ಥಳೀಯವಾಗಿ ಆಡು ಭಾಷೆಯಲ್ಲಿ ಕರೆಯಿಸಿಕೊಳ್ಳುವ ಮೂಲ ಜಾತಿಯನ್ನು ಕಡ್ಡಾಯವಾಗಿ ಹಾಗೂ ನಿಖರವಾಗಿ ನಮೂದಿಸಬೇಕು ಎಂದು ಜಿಲ್ಲೆಯ ಹಿರಿಯ ದಲಿತ ಮುಖಂಡರೂ ಆಗಿರುವ ಚಂದ್ರಶೇಖರ ಕೊಡಬಾಗಿ ಅವರು ಸಲಹೆ ನೀಡಿದ್ದಾರೆ. ನಗರದ ವಾರ್ಡ್‌ ನಂ. 2ರ ದರ್ಗಾದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ವತಿಯಿಂದ ಜಾತಿ ಗಣತಿಯ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲು ಅವಕಾಶವಾಗುವಂತೆ ಸರಿಯಾದ ಮಾಹಿತಿಯನ್ನು ನೀಡಿ ಸರ್ಕಾರದೊಂದಿಗೆ ಕೈ ಜೋಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಕರೆ ನೀಡಿದ್ದಾರೆ. 

ಬಳಿಕ ಮಹಾನಗರ ಪಾಲಿಕೆ ಸದಸ್ಯೆಯೂ ಆಗಿರುವ ಕಾಂಗ್ರೆಸ್ ಯುವ ನಾಯಕಿ ಕು.ಆರತಿ ಶಹಾಪೂರ ಅವರು ಮಾತನಾಡಿ ಕಾಂಗ್ರೆಸ್ ಸರ್ಕಾರದ ಈ ಮಹತ್ವಕಾಂಕ್ಷಿ ಜಾತಿ ಗಣತಿ ಕಾರ್ಯಕ್ರಮದ ಯಶಸ್ಸಿಗೆ ಮಹಿಳೆಯರು ಕೂಡ ಸಹಕರಿಸಬೇಕು ಎಂದು ಮನವಿ ಮಾಡಿದರು. ಸರ್ಕಾರದ ಜಾತಿ ಸಮೀಕ್ಷೆಯ ಯಶಸ್ಸಿಗೆ ಮಹಿಳೆಯರ ಪಾತ್ರವೂ ಪ್ರಮುಖವಾಗಿದ್ದು, ಗಣತಿದಾರರು ಪರಿಶಿಷ್ಟ ಜಾತಿಗೆ ಸೇರಿದವರ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಒಂದು ವೇಳೆ ಮನೆಯಲ್ಲಿ ಗಂಡು ಮಕ್ಕಳು ಇಲ್ಲದೇ ಇದ್ದರೂ ಕೂಡ ಮಹಿಳೆಯರೇ ಮುಂದುವರೆದು ಗಣತಿದಾರರಿಗೆ ಸರಿಯಾದ ಮಾಹಿತಿಯನ್ನು ಒದಗಿಸಬೇಕು ಎಂದು ಹೇಳಿದರು. ಜಾತಿಗಣತಿ ಸಮೀಕ್ಷೆಯಲ್ಲಿ ಎಲ್ಲರೂ ತಪ್ಪದೇ ಕಡ್ಡಾಯವಾಗಿ ಪಾಲ್ಗೊಂಡು ಸರಿಯಾದ ಮಾಹಿತಿಯನ್ನು ಒದಗಿಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು.  

ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ಉಪಜಾತಿ ಕಾಲಂನಲ್ಲಿ ಹೊಲೆಯ ಅಥವಾ ಚಲವಾದಿ ಎಂದು ಯಾವುದಾದರೂ ಒಂದು ಸ್ಪಷ್ಟವಾಗಿ ನಮೂದಿಸದಿದ್ದರೆ ಈ ಜಾತಿಗಳಿಗೆ ಸೇರಿದವರ ಸಂಖ್ಯೆಯಲ್ಲಿ ಏರುಪೇರಾಗಿ ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ, ಉದ್ಯೋಗ ಸೇರಿದಂತೆ ಸರ್ಕಾರದ ವಿವಿಧ ಯೋಜನೆ ಹಾಗೂ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಆದ್ದರಿಂದ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜನರು ಬಹಳ ಎಚ್ಚರಿಕೆಯಿಂದ ಉಪಜಾತಿಯನ್ನು ನಮೂದಿಸಬೇಕು ಎಂದರು. ಜಾತಿಗಣತಿಯ ಬಗ್ಗೆ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜನರಿಗೆ ಇನ್ನಷ್ಟು ಅರಿವು ಮೂಡಿಸುವ ನಿಟ್ಟಿನಲ್ಲಿ ಸಮುದಾಯದ ಹಿರಿಯರು ಹಾಗೂ ಮುಖಂಡರು ಮನೆಮನೆಗಳಿಗೆ ಹಾಗೂ ಓಣಿಗಳಿಗೆ ಭೇಟಿ ನೀಡಿ ಸರಿಯಾದ ಮಾಹಿತಿ ಒದಗಿಸುತ್ತಿರುವುದು ಶ್ಲಾಘನೀಯ ಎಂದರು. ಗಣತಿದಾರರು ಮಾಹಿತಿ ಸಂಗ್ರಹಿಸಲು ಮನೆಗೆ ಬಂದಾಗ ಮಾಹಿತಿ ಕೊಡಲು ಸಾಧ್ಯವಾಗದಿದ್ದರೆ ಅಥವಾ ಮನೆಯಲ್ಲಿ ಇಲ್ಲದಿದ್ದರೆ ಸ್ಥಳೀಯವಾಗಿ ವ್ಯವಸ್ಥೆ ಮಾಡಿರುವ ಬೂತ್ ಕಚೇರಿಗೆ ಹೋಗಿ ಮಾಹಿತಿ ನೀಡಬೇಕು. ಅಥವಾ ಮೊಬೈಲ್ ಆಪ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಕೀಲ ಸುನಿಲ್ ಉಕ್ಕಲಿ, ಸಮಾಜ ಸೇವಕ ಮಂಜುನಾಥ. ಎಸ್‌. ಕಟ್ಟಿಮನಿ ಸೇರಿದಂತೆ ಸಮಾಜದ ಹಿರಿಯರು, ಮುಖಂಡರು, ಮಹಿಳೆಯರು, ಯುವಕರು ಹಾಗೂ ಇನ್ನಿತರರು ಇದ್ದರು. 


ಇತ್ತೀಚಿನ ಸುದ್ದಿ