ವಿಜಯಪುರ 26 : ಜಾತಿಗಣತಿ ಸಮೀಕ್ಷೆಯಲ್ಲಿ ಎಲ್ಲರೂ ತಪ್ಪದೇ ಕಡ್ಡಾಯವಾಗಿ ಪಾಲ್ಗೊಂಡು ಸರಿಯಾದ ಮಾಹಿತಿಯನ್ನು ಒದಗಿಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲೆಯ ಅಂಬೇಡ್ಕರ್ವಾದಿಯೂ ಆಗಿರುವ ಸಮಾಜಸೇವಕರಾದ ಮಂಜುನಾಥ್.ಎಸ್. ಕಟ್ಟಿಮನಿ ಅವರು ಮನವಿ ಮಾಡಿದ್ದಾರೆ. ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ಉಪಜಾತಿ ಕಾಲಂನಲ್ಲಿ ಹೊಲೆಯ ಅಥವಾ ಚಲವಾದಿ ಎಂದು ಯಾವುದಾದರೂ ಒಂದು ಸ್ಪಷ್ಟವಾಗಿ ನಮೂದಿಸದಿದ್ದರೆ ಈ ಜಾತಿಗಳಿಗೆ ಸೇರಿದವರ ಸಂಖ್ಯೆಯಲ್ಲಿ ಏರುಪೇರಾಗಿ ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ, ಉದ್ಯೋಗ ಸೇರಿದಂತೆ ಸರ್ಕಾರದ ವಿವಿಧ ಯೋಜನೆ ಹಾಗೂ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ.
ಆದ್ದರಿಂದ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜನರು ಬಹಳ ಎಚ್ಚರಿಕೆಯಿಂದ ಉಪಜಾತಿಯನ್ನು ನಮೂದಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಜಾತಿಗಣತಿಯ ಬಗ್ಗೆ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜನರಿಗೆ ಇನ್ನಷ್ಟು ಅರಿವು ಮೂಡಿಸುವ ನಿಟ್ಟಿನಲ್ಲಿ ಸಮುದಾಯದ ಹಿರಿಯರು ಹಾಗೂ ಮುಖಂಡರು ಮನೆಮನೆಗಳಿಗೆ ಹಾಗೂ ಓಣಿಗಳಿಗೆ ಭೇಟಿ ನೀಡಿ ಸರಿಯಾದ ಮಾಹಿತಿ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಗಣತಿದಾರರು ಮಾಹಿತಿ ಸಂಗ್ರಹಿಸಲು ಮನೆಗೆ ಬಂದಾಗ ಮಾಹಿತಿ ಕೊಡಲು ಸಾಧ್ಯವಾಗದಿದ್ದರೆ ಅಥವಾ ಮನೆಯಲ್ಲಿ ಇಲ್ಲದಿದ್ದರೆ ಸ್ಥಳೀಯವಾಗಿ ವ್ಯವಸ್ಥೆ ಮಾಡಿರುವ ಬೂತ್ ಕಚೇರಿಗೆ ಹೋಗಿ ಮಾಹಿತಿ ನೀಡಬೇಕು. ಅಥವಾ ಮೊಬೈಲ್ ಆಪ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.