ಧಾರವಾಡ 02: ಧಾರವಾಡ ಶಿವಗಿರಿಯ ನಿವಾಸಿ ಗಣೇಶ ಶೆಟ್ಟಿ ಎಂಬುವವರು ಎದುರುದಾರ, ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಯಲ್ಲಿ ವಿಮೆಯನ್ನು ಮಾಡಿಸಿದ್ದರು. ಅವರು ತಮ್ಮ ಕಣ್ಣಿನ ಸಮಸ್ಯೆ ಇದ್ದ ಕಾರಣ ಧಾರವಾಡದ ಎಮ್.ಎಮ್.ಜೋಶಿ ಆಸ್ಪತ್ರೆಯಲ್ಲಿ ಕ್ಯಾಟರಾಕ್ಟ್ ಚಿಕಿತ್ಸೆಯನ್ನು ಪಡೆದಿದ್ದರು. ಚಿಕಿತ್ಸೆಗಾಗಿ ಅವರು ಒಟ್ಟು ರೂ.32,561 ಪಾವತಿಸಿದ್ದರು. ವಿಮೆ ಚಾಲ್ತಿಯಲ್ಲಿರುವುದರಿಂದ ಅದರ ಹಣವನ್ನು ಭರಿಸುವಂತೆ ಎದುರುದಾರ ವಿಮಾ ಕಂಪನಿಗೆ ವಿನಂತಿಸಿದ್ದರು. ಆದರೆ ಎದುರುದಾರ, ವಿಮಾಕಂಪನಿಯವರು ದೂರುದಾರರ ಕೋರಿಕೆಯನ್ನು ಪರಿಗಣಿಸಿರಲಿಲ್ಲ. ಅಂತಹ ಎದುರುದಾರರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ಮೇಲೆ ಕ್ರಮಕೈಗೊಂಡು ಪರಿಹಾರಕೊಡಿಸುವಂತೆ ದೂರುದಾರರು ದಿ.23/08/2023 ರಂದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಎದುರುದಾರರಲ್ಲಿ 2010 ರಿಂದ ಆರೋಗ್ಯ ವಿಮೆ ಪಾಲಸಿ ಮಾಡಿಸುತ್ತಾ ಬಂದಿದ್ದಾರೆ. ಅದಕ್ಕೆ ದೂರುದಾರರು ಪೂರಕವಾದ ಪ್ರೀಮಿಯಮ್ ಹಣ ಕಟ್ಟಿದ್ದಾರೆ. ಕಾರಣ ದೂರುದಾರರು ಎದುರುದಾರ ವಿಮಾ ಕಂಪನಿಯ ಗ್ರಾಹಕನಾಗಿರುತ್ತಾರೆ. ಈ ಸಂಗತಿ ದಾಖಲೆಗಳಿಂದ ಸ್ಪಷ್ಟವಾಗಿ ಕಂಡು ಬರುತ್ತದೆ. ಕಣ್ಣಿನ ಚಿಕಿತ್ಸೆಯ ಸಮಯದಲ್ಲಿ ಪಾಲಸಿಯು ಚಾಲ್ತಿಯಲ್ಲಿರುತ್ತದೆ. ದೂರುದಾರರು ಚಿಕಿತ್ಸೆಯ ಒಟ್ಟು ಮೊತ್ತ ರೂ.32,561 ಪಾವತಿಸಿರುವುದಕ್ಕೆ ರಸೀದಿಗಳನ್ನು ವಿಮಾ ಕಂಪನಿಗೆ ಸಲ್ಲಿಸಿದ್ದರು. ಆದರೆ ಎದುರುದಾರ ವಿಮಾ ಕಂಪನಿಯವರು ದೂರುದಾರರ ಕ್ಲೇಮನ್ನು ನಿರಾಕರಿಸಿರುವುದು ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗಿದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ು ನೀಡಿದೆ. ದೂರುದಾರರು ಆಸ್ಪತ್ರೆಗೆ ಖರ್ಚು ಮಾಡಿದ ರೂ.32,561 ಮತ್ತು ಅದರ ಮೇಲೆ ಶೆ.10 ರಂತೆ ಬಡ್ಡಿ ಸಮೇತಕೊಡುವಂತೆ ಆಯೋಗ ಆದೇಶಿಸಿದೆ. ಅಲ್ಲದೇ ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗೆ ರೂ.50,000 ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000 ಕೊಡುವಂತೆ ಎದುರುದಾರರಾದ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಗೆ ಆಯೋಗ ನಿರ್ದೇಶಿಸಿದೆ.