ವಿಜಯಪುರ 17: ಇಂದಿನ ಡಿಜಿಟಲ್ ಯುಗದಲ್ಲಿ ಸಾಕ್ಷ್ಯಚಿತ್ರ, ಚಲನಚಿತ್ರ, ಕಿರುಚಿತ್ರಗಳಿಗೆ ಅಪಾರ ಅವಕಾಶಗಳಿವೆ. ಪ್ರತಿಯೊಬ್ಬರಲ್ಲಿಯೂ ಇರುವ ಪ್ರತಿಭೆಯನ್ನು ಗುರುತಿಸಿ, ಪರಿಶ್ರಮದೊಂದಿಗೆ ಕನಸುಗಳತ್ತ ಪಯಣ ಮಾಡಿದರೆ ಯಶಸ್ಸು ಖಚಿತ ಎಂದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವುಮೆನ್ ಮೀಡಿಯಾ ಕ್ಲಬ್ ವತಿಯಿಂದ ಮಂಗಳವಾರ ಆಯೋಜಿಸಿರುವ ಸಾಕ್ಷ್ಯಚಿತ್ರ ನಿರ್ಮಾಣದ ತಂತ್ರಗಾರಿಕೆ ಎಂಬ ವಿಷಯದ ಕುರಿತ ಎರಡು ದಿನಗಳ ಕಾರ್ಯಾಗಾರದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಿನಿಮಾ ಕ್ಷೇತ್ರದಲ್ಲಿ ವೃತ್ತಿ ಜೀವನ ರೂಪಿಸಿಕೊಳ್ಳಲು ಬಯಸುವವರು ಅಗತ್ಯ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಜಯಪುರ ಕಲಾರಂಗ ಫಿಲ್ಮ್ ಸ್ಟುಡಿಯೋ ಮತ್ತು ಪ್ರೊಡಕ್ಷನ್ ಸಂಸ್ಥೆಯ ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ದೇವು ಕೆ. ಅಂಬಿಗಾ ಅವರು ಮಾತನಾಡಿ, ನಮ್ಮ ಅವಕಾಶಗಳನ್ನು ನಾವೇ ರೂಪಿಸಿಕೊಂಡು ಸಿನಿಮಾ, ಸಾಕ್ಷ್ಯಚಿತ್ರದಂತಹ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಬಹುದಾಗಿದೆ ಎಂದು ಹೇಳಿದರು.
ಸಿನಿಮಾ ಅಥವಾ ಸಾಕ್ಷ್ಯಚಿತ್ರ ಆರಂಭಿಸುವ ಮೊದಲು ಸೂಕ್ತ ಸಂಶೋಧನೆ, ಯೋಚನೆ ಹಾಗೂ ಯೋಜನೆಯು ಅತ್ಯವಶ್ಯಕ. ಕೇವಲ ಟ್ಯಾಲೆಂಟ್ ಇರುವವರು ಮಾತ್ರ ಈ ಕ್ಷೇತ್ರದಲ್ಲಿ ಹೆಚ್ಚು ಸಾಧಿಸಬಹುದು. ನಿರ್ವಹಣೆಯ ತಿಳುವಳಿಕೆ ಇದ್ದರೆ, ಶೂನ್ಯ ಬಜೆಟ್ನಲ್ಲಿಯೂ ಕೂಡ ಒಂದು ಉತ್ತಮ ಸಿನಿಮಾವನ್ನು ತಯಾರಿಸಬಹುದಾಗಿದೆ ಎಂದರು.
ಕಲಾರಂಗ ಫಿಲ್ಮ್ ಸ್ಟುಡಿಯೋ ಮತ್ತು ಪ್ರೊಡಕ್ಷನ್ ಸಂಸ್ಥೆಯ ಚಿತ್ರ ನಿರ್ದೇಶಕ ಹಾಗೂ ಚಿತ್ರ ಸಾಹಿತ್ಯ ಬರಹಗಾರ ವಿನೋದ್ ಪಿ. ರಾಠೋಡ ಮಾತನಾಡಿ, ಡೈರೆಕ್ಟರ್ ಮತ್ತು ಕ್ಯಾಮರಾಮ್ಯಾನ್ ಸಿನಿಮಾದ ಎರಡು ಕಣ್ಣುಗಳಿದ್ದಂತೆ. ಡೈರೆಕ್ಟರ್ ಬರೆದ ಕಥೆಗೆ ಜೀವ ತುಂಬಿ, ಅದನ್ನು ಪರದೆಯ ಮೇಲೆ ಜೀವಂತವಾಗಿ ಮೂಡಿಸುವವರು ಕ್ಯಾಮರಾಮ್ಯಾನ್ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ್ ನಾಯಕ್ ಮಾತನಾಡಿ, ಸಾಂಪ್ರದಾಯಿಕ ಮಾಧ್ಯಮಗಳ ಹೊರತಾಗಿಯೂ ಹೊಸ ಮಾಧ್ಯಮಗಳ ಪ್ರಭಾವ ಹಾಗೂ ಅದರ ಬಳಕೆಯ ಬಗ್ಗೆ ವಿದ್ಯಾರ್ಥಿನಿಯರು ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು. ವಿವಿಧ ಸೃಜನಶೀಲ ನೈಪುಣ್ಯಗಳು ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕೌಶಲಗಳ ಅವಶ್ಯಕತೆಯನ್ನು ವಿವರಿಸಿದರು.
ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ಸ್ನಾತಕೋತರ ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಜ್ಯೋತಿ ಎಸ್ ಸ್ವಾಗತಿಸಿದರು. ಮೇಘ ಪುಷ್ಪ ನಿರೂಪಿಸಿದರು. ಬಸಮ್ಮ ಹೀರೂರ್ ವಂದಿಸಿದರು.