ಭಾರಿ ಮಳೆಯಿಂದ ರೈತರು ಮುಂಗಾರು ಬಿತ್ತನೆ ಪ್ರಾರಂಭ

Farmers begin monsoon sowing

ಸಂಬರಗಿ, 01 : ಗಡಿ ಭಾಗದಲ್ಲಿ ಭಾರಿ ಮಳೆಯಿಂದ ರೈತರು ಮುಂಗಾರಿ ಮಳೆಯ ಬಿತ್ತನೆಯನ್ನು ಪ್ರಾರಂಭ ಮಾಡಿದ್ದಾರೆ. ಅನಂತಪೂರ ಕೃಷಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ 24 ಗ್ರಾಮಗಳಲ್ಲಿ ಕಬ್ಬು ಸಹಿತ 35 ಸಾವಿರ ಹೆಕ್ಟರ್ ಮುಂಗಾರಿ ಬೆಳೆ ಬಿತ್ತನೆ ಮಾಡುವ ಗುರಿ ಹೊಂದಿದ್ದು, ಅದರಲ್ಲಿ 10 ಸಾವಿರ ಹೆಕ್ಟರ್ ಕಬ್ಬು ನಾಟಿ ಮಾಡಲು ರೈತರು ಸಜ್ಜಾಗಿದ್ದಾರೆ. ರೈತ ಸಂಪರ್ಕ ಕೇಂದ್ರದಲ್ಲಿ ಬೀಜ, ಗೊಬ್ಬರ ಖರೀದಿ ಮಾಡಲು ರೈತರು ಮುಗಿಬಿದ್ದಿದ್ದಾರೆ.  

2025-26ನೇ ವರ್ಷದಲ್ಲಿ ಮೇ ವರೆಗೆ 55 ಮಿಲಿ.ಮಿಟರ್ ಮಳೆಯಾಗುವ ಗುರಿ ಇದ್ದು, ಆದರೆ ಮೇ ವರೆಗೆ 205 ಮಿಲಿ.ಮಿಟರ್ ಮಳೆ ಬಿದ್ದಿದ್ದು, ಮೂರು ಪಟ್ಟು ಮಳೆ ಹೆಚ್ಚಾಗಿದೆ. ರೈತರಿಗೆ ಭಾರಿ ಅನುಕೂಲವಾಗಿದೆ, ಉದ್ದು, ಹೆಸರು, ತೊಗರಿ, ಗೊವಿನಜೋಳಗಳನ್ನು ರೈತರು ಬಿತ್ತನೆ ಮಾಡುತ್ತಿದ್ದಾರೆ. ಪ್ರತಿ ವರ್ಷ ರೈತರು ಬರಗಾಲದಲ್ಲಿ ಸಿಲುಕಿ ಮಳೆ ಇಲ್ಲದ ಕಾರಣ ಕಷ್ಟ ಎದುರಿಸುತ್ತಿದ್ದರು. ಮಳೆಗಾಗಿ ಗ್ರಾಮದ ದೇವರಿಗೆ ಹರಕೆ ಹೊತ್ತು ಕತ್ತೆ ಮದುವೆ ಮಾಡಿ, ವರುಣ ರಾಜನನ್ನು ಆಹ್ವಾನಿಸುತ್ತಿದ್ದರು. ಆದರೆ ಈ ವರ್ಷ ಕಷ್ಟ ಬರುವ ಮುಂಚಿತವಾಗಿ ಮಳೆಯಾಗಿದೆ. ಅಗ್ರಾಣಿ ನದಿ ಬಂದಾರಿಗೆ ನೀರು ಬಂದಿದ್ದು, ಈ ವರ್ಷ ಮಳೆ ಹೆಚ್ಚಾಯಿತು. ನಾಗನೂರ ಪಿ.ಎ ಗ್ರಾಮದ ಎರಡು ಬಾಲಕರು ನೀರಿನಲ್ಲಿ ಕೊಚ್ಚಿ ಹೋದರು. 

ಈ ವರ್ಷ ಗಡಿ ಭಾಗದಲ್ಲಿ ಮುಂಗಾರಿ ಬಿತ್ತನೆ ಮಾಡುವ ಗುರಿ 10 ಸಾವಿರ ಹೆಕ್ಟರ್ ಉದ್ದು, 12 ಸಾವಿರ ಹೆಕ್ಟರ್ ಗೋವಿನಜೋಳ, 1 ಸಾವಿರದ 5 ನೂರು ಹೆಕ್ಟರ್ ತೊಗರಿ, 1 ಸಾವಿರ ಹೆಕ್ಟರ್ ಹೆಸರು, 5 ನೂರು ಹೆಕ್ಟರ್ ಶೇಂಗಾ, 10 ಸಾವಿರ ಹೆಕ್ಟರ್ ನಾಟಿ ಕಬ್ಬು ಮಾಡಲು ಗುರಿಹೊಂದಿದ್ದಾರೆ. ರೈತರು ಕಬ್ಬಿನ ಬೀಜವನ್ನು 1 ಟನ್‌ಗೆ 3,500 ರೂಪಾಯಿ ದರ ನೀಡಿ ಕಬ್ಬಿನ ಬೀಜವನ್ನು ತರುತ್ತಿದ್ದಾರೆ. ಅದರಲ್ಲಿ 86032, 265, 94012 ಈ ಜಾತಿಯ ಕಬ್ಬನ್ನು ಲಾವಣಿ ಮಾಡುತ್ತಿದ್ದಾರೆ. ರೈತರು ಕಬ್ಬಿನ ಲಾವಣಿ ಬೀಜ ತರಲು ಹಲವಾರು ಸಂಘ, ಸಂಸ್ಥೆ ಹಾಗೂ ಬ್ಯಾಂಕ್‌ಗಳಿಂದ ಸಾಲ ಪಡೆಯುತ್ತಿದ್ದಾರೆ. ಆದರೆ ಯಾವುದೇ ಕಾರ್ಖಾನೆಗಳು ರೈತರಿಗೆ ಬೀಜ ನೀಡಲು ಮುಂದಾಗುತ್ತಿಲ್ಲ. ಹಾಗೂ ಕಬ್ಬು ಕಟಾವ ಮಾಡಲು ರೈತರ ಮನೆಯ ಬಾಗಿಲಿಗೆ ಬರುತ್ತಿದ್ದಾರೆ. ಆದರೆ ಬೀಜ ತೆಗೆದುಕೊಳ್ಳಿ ಎಂದು ಯಾವ ರೈತರ ಮನೆಗೆ ಬರುತ್ತಿಲ್ಲ. ಆ ಕಾರಣ ಬಡ ರೈತರು ಕಷ್ಟದಲ್ಲಿದ್ದಾರೆ. ಲಾಭಕ್ಕಾಗಿ ಎಲ್ಲರೂ ಬರುತ್ತಾರೆ. ಆದರೆ ಕಷ್ಟದಲ್ಲಿದ್ದಾಗ ಯಾರೂ ಬರುತ್ತಿಲ್ಲ ಎಂದು ಕೊರಗುತ್ತಿದ್ದಾರೆ.  

ಈ ಕುರಿತು ಕೃಷಿ ಅಧಿಕಾರಿ ಶಿವಪುತ್ರ ಗುಂಜಿಗಾಂವಿ ಇವರನ್ನು ಸಂಪರ್ಕಿಸಿದಾಗ ಕೃಷಿ ಕಾರ್ಯಾಲಯ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ರೈತರಿಗೆ ತೊಗರಿ, ಉದ್ದು, ಹೆಸರು, ಗೋವಿನಜೋಳ ಬೀಜ ಲಭ್ಯವಿದೆ. ರೈತರು ಆಧಾರ್ ಕಾಡ್, ಎಸ್‌.ಸಿ, ಎಸ್‌.ಟಿ ಇದ್ದರೆ ಜಾತಿ ಪ್ರಮಾಣ ಪತ್ರ, ಜಮೀನ ಉತಾರ ತೆಗೆದುಕೊಂಡು ಕಾರ್ಯಾಲಯದ ಅವಧಿಯಲ್ಲಿ ಸಂಪರ್ಕಿಸಬೇಕೆಂದು ಅವರು ವಿನಂತಿಸಿದ್ದಾರೆ.