ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ : ಶಾಸಕ ಆಸೀಫ್ ಸೇಠ್

ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ : ಶಾಸಕ ಆಸೀಫ್ ಸೇಠ್ Environmental protection is everyone's responsibility: MLA Asif Seth

ಲೋಕದರ್ಶನ ವರದಿ 

ಬೆಳಗಾವಿ, ಜೂನ್ 05 : ಸಕಲ ಜೀವಿಗಳ ಜೀವನಾಡಿಯಾಗಿರುವ ಪರಿಸರವನ್ನು ಸಂರಕ್ಷಣೆಮಾಡುವುದು ಪ್ರತಿಯೊಬ್ಬ ನಾಗರಿಕನ ಪ್ರಮುಖ ಕರ್ತವ್ಯವಾಗಿದೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ ಹೇಳಿದರು. ಬೆಳಗಾವಿ ಉತ್ತರ ಕ್ಷೇತ್ರದ ನಂದಿನಿ ಮಾರ್ಗದಲ್ಲಿರುವ ವಾರ್ಡ್‌ ನಂಬರ್ 35 ಗಾಜಿನ ಮನೆ ಆವರಣದಲ್ಲಿ ಮಹಾನಗರ ಪಾಲಿಕೆಯ ಯೋಜನೆಯಾಗಿರುವ "ಮಿಯಾವಾಕಿ" ಉದ್ಯಾನ ನಿರ್ಮಾಣಕ್ಕೆ ಸಸಿ ನೆಡುವುದರ ಮೂಲಕ ಚಾಲನೆ ನೀಡಿ,

ನಂತರ ನಡೆದ "ವಿಶ್ವ ಪರಿಸರ ದಿನ" ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರವು ಪರಿಸರ ರಕ್ಷಣೆಗಾಗಿ ಅನುದಾನ ನೀಡುವ ಮೂಲಕ ಅನೇಕ ಯೋಜನೆಗಳನ್ನು ತಂದಿದೆ. ಪಾಲಿಕೆ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅವುಗಳನ್ನು ಸಾಕಾರಗೊಳಿಸಬೇಕು. ಈ ಹಿನ್ನೆಲೆಯಲ್ಲಿ ಜಪಾನ ದೇಶದಮಿಯಾವಾಕಿ ಕಲ್ಪನೆಯಲ್ಲಿ ಪಾಲಿಕೆಯು ಇಲ್ಲಿಯ ಉದ್ಯಾನ ನಿರ್ಮಿಸುತ್ತಿರುವುದು ಸಂತಸದ ವಿಷಯ. ಭವಿಷ್ಯದಲ್ಲಿ ಇಲ್ಲಿ ಉತ್ತಮ ಪರಿಸರ ನಿರ್ಮಾಣವಾಗಲಿದೆ ಎಂದು ಹೇಳಿದರು.  

ಪ್ರಾಸ್ತಾವಿಕವಾಗಿ ಮಾತನಾಡಿದ ಪಾಲಿಕೆಯ ಪರಿಸರ ವಿಭಾಗದ ಅಭಿಯಂತರ ಹಣಮಂತ ಕಲಾದಗಿ ಅವರು, ಸರ್ಕಾರ ಆಯವ್ಯಯದಲ್ಲಿ ಘೋಷಿಸಿರುವ ನೂರು ಸ್ಥಳೀಯ ಸಂಸ್ಥೆಗಳಲ್ಲಿ ಶಾಸಕರಾದ ಆಸೀಫ್ ಸೇಠ ಅವರ ವಿಶೇಷ ಪ್ರಯತ್ನದಿಂದಾಗಿ ಬೆಳಗಾವಿ ಮಹಾನಗರ ಪಾಲಿಕೆಯೂ ಆಯ್ಕೆಯಾಗಿದ್ದು, ಈ ಹಿನ್ನಲೆಯಲ್ಲಿ ಉತ್ತರ ಮತಕ್ಷೇತ್ರದ ವಾರ್ಡ್‌ 35ರ ನಂದಿನಿ ಮಾರ್ಗದ ಉದ್ಯಾನದಲ್ಲಿ ಮಿಯಾವಾಕಿ ಮಾದರಿಯ ನಗರ ಅರಣ್ಯ ಉದ್ಯಾನವನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.  

ಅತಿಥಿಗಳಾಗಿದ್ದ ನಿವೃತ್ತ ಪ್ರಾಚಾರ್ಯ ಹಿರೇಮಠ ಮಾತನಾಡಿದರು. ನಗರಸೇವಕ ಶ್ರೇಯಸ್ ನಾಕಾಡಿ , ಸಮಾಜ ಸೇವಕ ಮಹಾದೇವ ರಾಥೋಡ್, ಎಚ್‌.ಎಚ್‌. ಬಂಕದಮನಿ,ಎಸ್‌.ವಿ. ಬೆಂಡಿಗೇರಿ,ಎಂ.ಎಂ. ಜಮಾದಾರ, ಶೈಲಜಾ ಮಠಪತಿ, ಅನುರಾಧಾ ಹಾದಿಮನಿ ಇತರ ಗಣ್ಯರು ವೇದಿಕೆಯಲ್ಲಿದ್ದರು. ಇದಕ್ಕೂ ಮೊದಲು ಉದ್ಯಾನದಲ್ಲಿ ಶಾಸಕರು ಹಾಗೂ ಇತರ ಗಣ್ಯರಿಂದ ವನ ಮಹೋತ್ಸವ ನಡೆಯಿತು. ಸ್ಥಳೀಯ ನಾಗರಿಕರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಭಿಯಂತರ ಹಣಮಂತ ಕಲಾದಗಿ ಸ್ವಾಗತಿಸಿ ನಿರೂಪಿಸಿದರು.