ಇಥೆನಾಲ್ ಘಟಕ ಸ್ಥಳಾಂತರಕ್ಕೆ ಆಗ್ರಹ: ಪರಿಸರ ಹೋರಾಟಗಾರರ ಸ್ಪಷ್ಟನೆ

ಇಥೆನಾಲ್ ಘಟಕ ಸ್ಥಳಾಂತರಕ್ಕೆ ಆಗ್ರಹ: ಪರಿಸರ ಹೋರಾಟಗಾರರ ಸ್ಪಷ್ಟನೆ  Demand to relocate ethanol plant: Environmental activists clarify

ಕಾಗವಾಡ 01 :  ಉಗಾರ ಸಕ್ಕರೆ ಕಾರ್ಖಾನೆಯ ವಿರುದ್ಧದ ತಮ್ಮ ಹೋರಾಟ ಸ್ವಂತ ಲಾಭಕ್ಕಾಗಿ ಅಲ್ಲ, ಇಥೆನಾಲ್ ಘಟಕದಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ಹಾಗೂ ಆರೋಗ್ಯ ಸಮಸ್ಯೆಗಳ ವಿರುದ್ಧವಾಗಿದೆ ಎಂದು ಪರಿಸರ ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.   ಉಗಾರ ಖುರ್ದ ಪಟ್ಟಣದ ಪರಿಸರ ಹೋರಾಟಗಾರರಾದ ಚಂದ್ರಶೇಖರ ಗೂಳಪ್ಪನವರ, ಯೋಗೇಶ ಕುಂಬಾರ, ಮಹೇಶ ಮೆಡಕರಿ ಹಾಗೂ ಸುನೀಲ್ ಉನ್ಹಾಳೆ ಅವರು ಶನಿವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.   ಕಾರ್ಖಾನೆ ಮುಚ್ಚಿಸುವ ಉದ್ದೇಶದಿಂದ ಹೋರಾಟ ನಡೆಸುತ್ತಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ.

ತಮ್ಮ ಹೋರಾಟವು 2023ರಲ್ಲಿ ಆರಂಭವಾದ ಇಥೆನಾಲ್ ಘಟಕದಿಂದ ಉಂಟಾಗುತ್ತಿರುವ ಪರಿಸರ ಸಮಸ್ಯೆಗಳ ವಿರುದ್ಧವಾಗಿದೆ ಎಂದು ಅವರು ಹೇಳಿದರು.  ಇಥೆನಾಲ್ ಘಟಕದ ಕುರಿತು ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಪರೀಶೀಲನೆ ನಡೆಸಿ ವರದಿ ಸಲ್ಲಿಸಿದ್ದರೂ, ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಘಟಕವನ್ನು ಬೇರೆಡೆಗೆ ಸ್ಥಳಾಂತರಿಸುವವರೆಗೆ ಕಾನೂನು ಹೋರಾಟ ಮುಂದುವರಿಸುವುದಾಗಿ ತಿಳಿಸಿದರು. ಈ ಕುರಿತು ಕಾರ್ಖಾನೆ ಆಡಳಿತದೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧವಿದ್ದು, ಅಗತ್ಯವಿದ್ದರೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೋರಾಟಗಾರರು ಹೇಳಿದರು.