ರಕ್ತದಾನ ಶ್ರೇಷ್ಠ ದಾನಗಳಲ್ಲಿ ಒಂದು : ಡಾ.ಶ್ರೀದೇವಿ ಪಾಟೀಲ

Blood donation is one of the greatest donations: Dr. Sridevi Patil

ಬೆಳಗಾವಿ 13: ಸಾಮಾಜಿಕ ಸೇವೆಯಲ್ಲಿ ರಕ್ತದಾನವು ಶ್ರೇಷ್ಠ ದಾನವಾಗಿದ್ದು ನಿಯಮಿತವಾಗಿ ಮಾಡಬೇಕು. ಜೀವಾಪಾಯದಲ್ಲಿರುವ ವ್ಯಕ್ತಿಯನ್ನು ಬದುಕಿಸಿದ ಪುಣ್ಯ ನಿಮ್ಮದಾಗುವುದು. ರಕ್ತದಾನದ ಮಹತ್ವವನ್ನು ಎಲ್ಲರೂ ಅರಿಯಬೇಕೆಂದು ವೈದ್ಯಾಧಿಕಾರಿ ಡಾ.ಶ್ರೀದೇವಿ ಪಾಟೀಲ ಹೇಳಿದರು.  

ಅವರು ವಿಶ್ವ ರಕ್ತದಾನಿಗಳ ದಿನ ಅಂಗವಾಗಿ ಲಿಂಗರಾಜ ಕಾಲೇಜಿನ ಎನ್‌ಸಿಸಿ ಘಟಕವು ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದು ರಕ್ತದಾನಿಗಳ ಅಗತ್ಯತೆ ಹೆಚ್ಚಾಗಿದ್ದು ರಕ್ತದಾನವನ್ನು ಮಾಡಬೇಕು. ಜೀವಮರಣದ ನಡುವೆ ಹೋರಾಡುವ ರೋಗಿಗೆ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ. ರಕ್ತ ಅಪಘಾತದಂತಹ ಸಂದರ್ಭದಲ್ಲಿ, ಹೆರಿಗೆ ಸಮಯದಲ್ಲಿ, ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದ ಅವಶ್ಯಕತೆ ಬಹಳವಾಗಿರುತ್ತದೆ. ಅವರ ಪ್ರಾಣವನ್ನು ಕಾಪಾಡುವುದು  ನಾಗರಿಕನ ಕರ್ತವ್ಯ. ಅದಕ್ಕಾಗಿ ರಕ್ತದಾನವನ್ನು ಮಾಡಬೇಕು ಎಂದರು. 

ಎನ್‌ಸಿಸಿ ಅಧಿಕಾರಿ ಮೇಜರ್ ಡಾ.ಮಹೇಶ ಗುರನಗೌಡರ ಮಾತನಾಡಿ, ರಕ್ತದಾನವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಮಾಡುವುದರಿಂದ ಯಾವುದೇ ತೊಂದರೆಗಳು ಇಲ್ಲ. ಇದರಿಂದ ಆರೋಗ್ಯವನ್ನು ನಾವು ಮತ್ತಷ್ಟು ಸುಧಾರಿಸಬಹುದು. ಯಾವುದೇ ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಸಂಬಂಧಿ ಕಾಯಿಲೆಗಳು ಹತ್ತಿರವೂ ಬರುವುದಿಲ್ಲ. ನಾವು ರಕ್ತದಾನವನ್ನು ಮಾಡಿದರೆ ದೇಹ ಮತ್ತಷ್ಟು ಸದೃಢಗೊಳ್ಳುವುದೆಂದು ತಿಳಿಸಿದರು. 

ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಡಾ.ಎಚ್‌.ಎಸ್‌.ಮೇಲಿನಮನಿಯವರು ಮಾತನಾಡಿ, ಉತ್ತಮವಾದ ಆಹಾರವನ್ನು ಸರಿಯಾದ ಸಮಯಕ್ಕೆ ತೆಗೆದುಕೊಂಡರೆ ದೇಹ ಸ್ವಾಸ್ಥ್ಯದಿಂದ ಕೂಡಿರುತ್ತದೆ. ರಕ್ತದಾನದಂಥಹ ಸಾಮಾಜಿಕ ಸೇವಾಕಾರ್ಯದಲ್ಲಿ ತೊಡಗಿಸಬೇಕು.  ವೈದ್ಯವಿಜ್ಞಾನವು ನಿಯಮಿತ ರಕ್ತದಾನವನ್ನು ಮಾಡುವ ಸರಳ ಆರೋಗ್ಯ ಸೂತ್ರಗಳನ್ನು ತಿಳಿಸಿಕೊಟ್ಟಿದೆ. ಅದೊಂದು ಶ್ರೇಷ್ಠವಾದ ದಾನವಾಗಿದ್ದು ಯುವಜನಾಂಗ ರಕ್ತದಾನಕ್ಕೆ ಮುಂದೆ ಬರಬೇಕೆಂದು ಕರೆನೀಡಿದರು. 

ಎಲ್ಲ ಕೆಡೆಟ್‌ಗಳಿಗೆ ರಕ್ತದಾನ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಕೆಡೆಟ್ ವೈಷ್ಣವಿ ಮಾಳಿ ನಿರೂಪಿಸಿದರು. ಕೆಡೆಟ್ ಧೀರಜ್ ಭಾವಿಕಟ್ಟಿ ವಂದಿಸಿದರು.