ಶಿಗ್ಗಾವಿ 10 : ಶಿಗ್ಗಾವಿ ಸವಣೂರ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಹಕ್ಕು ಪತ್ರವಿಲ್ಲದೆ ವಾಸುವಿರುವ ಕುಟುಂಬಗಳನ್ನು ಗುರುತಿಸಿ ವರದಿ ನೀಡುವಂತೆ ಸೂಚಿಸಿದ್ದರು ಅಧಿಕಾರಿಗಳು ಮುಂದಾಗುತ್ತಿಲ್ಲ. ಎರಡು ದಿನಗಳಲ್ಲಿ ವರದಿ ನೀಡದಿದ್ದರೆ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಶಾಸಕ ಯಾಸೀರ ಖಾನ್ ಪಠಾಣ ಪಿಡಿಓ ಮತ್ತು ಲೆಕ್ಕಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಸೋಮವಾರ ಪಟ್ಟಣದ ಅಂಬೇಡ್ಕರ್ ಸಂಕೀರಣದ ಆಡಳಿತ ಭವನದಲ್ಲಿ ಸೋಮವಾರ ನಡೆದ ಪಿಡಿಓ, ಗ್ರಾಮಲೆಕ್ಕಾಧಿಕಾರಿಗಳ ಸಭೆಯಲ್ಲಿ ಎಚ್ಚರಿಸಿದ ಅವರು, ಕ್ಷೇತ್ರದಲ್ಲಿ ದಶಕಗಳಿಂದ ವಾಸವಾದ ಅನಧಿಕೃತ ಕುಟುಂಬಕ್ಕೆ ಹಕ್ಕುಪತ್ರಗಳನ್ನು ವಿತರಿಸುವ ಕನಸು ಕಂಡು ಹಗಲಿರುಳ ಶ್ರಮಿಸುತ್ತಿದ್ದೇನೆ.
ಸಾಕಷ್ಟು ಸಮಯ ಕೊಟ್ಟರೂ ಕನಿಷ್ಠ ನಿಮ್ಮ ಗ್ರಾಪಂ.ವ್ಯಾಪ್ತಿಯಲ್ಲಿರುವ ಅನಧಿಕೃತ ಕುಟುಂಬಗಳನ್ನು ಗುರುತಿಸಿ ವರದಿ ನೀಡಲು ನಿಮ್ಮಿಂದಾಗುತ್ತಿಲ್ಲ. ಕೆಲಸ ಮಾಡುವ ಮನಸ್ಸಿದ್ದರೇ ಮಾಡಿ ಇಲ್ಲವಾದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಇದರ ಅರಿವು ನಿಮಗಿರಬೇಕು. ವರದಿ ಇಲ್ಲದೆ ಬರಿಗೈಯಲ್ಲಿ ಮದುವೆಗೆ ಬಂದಂತೆ ಸಭೆಗೆ ಬಂದಿದ್ದೀರಲ್ಲ? ಎಂದು ತರಾಟೆಗೆ ಪಡೆದರು. ಕೊಟ್ಟ ಸಮಯದಲ್ಲಿ ವರದಿ ಸಿದ್ಧಪಡಿಸಿಕೊಂಡು ಬರದಿದ್ದರೇ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.ಸುಮಾರು ವರ್ಷಗಳಿಂದ ವಾಸವಾದರೂ ಬ್ಯಾಂಕ್ ಸಾಲ ಸೌಲಭ್ಯ ಸಿಗದೇ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ. 'ಬಿ' ಖಾತಾದಿಂದ ಅವರಿಗೆ ಅನ್ಯಾಯವಾಗುತ್ತದೆ. 50ಕ್ಕೂ ಹೆಚ್ಚು ಕುಟುಂಬಗಳಿದ್ದರೇ ಉಪಗ್ರಾಮ, ಅದಕ್ಕಿಂತ ಹೆಚ್ಚಿದ್ದರೇ ಕಂದಾಯ ಗ್ರಾಮವನ್ನಾಗಿಸಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡರೂ ಅಧಿಕಾರಿಗಳು ನಮ್ಮ ವೇಗಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.ತಾಲೂಕಿಗೆ ಕಂದಾಯ ಸಚಿವರನ್ನು ಆಹ್ವಾನಿಸಿ ಅವರಿಂದ ಹಕ್ಕುಪತ್ರ ವಿತರಿಸುವ ಯೋಜನೆ ಹಮ್ಮಿಕೊಂಡಿದ್ದೇವೆ. ಕಂದಾಯ, ಪಂಚಾಯತ್ ಇಲಾಖೆ, ವೇಗದಲ್ಲಿ ಕೆಲಸ ಮಾಡಿ ನಿಗಧಿತ ವೇಳೆಗೆ ಬಂಕಾಪುರ, ಶಿಗ್ಗಾಂವಿ, ಸವಣೂರ ಪಟ್ಟ ಣಗಳು ಸೇರಿದಂತೆ ಕ್ಷೇತ್ರದಲ್ಲಿ ಸರ್ವೇ ಮಾಡಿ ವಾಸವಾದ ಅನಧಿಕೃತ ಕುಟುಂಬಗಳ ವರದಿ ನೀಡಬೇಕು. ಸಲಹೆ, ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸದೇ ಮೈಗಳ್ಳತನ ಮಾಡುವ ಅಧಿಕಾರಿಗಳ ಹೆಸರು ಕೊಡಿ ಎಂದು ತಹಸೀಲ್ದಾರ ರವರಿಗೆ ಸೂಚಿಸಿದರು.ಸಭೆಯಲ್ಲಿ ತಹಸಿಲ್ದಾರ್ ರವಿಕುಮಾರ ಕೊರವರ, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಶೇಖಪ್ಪ ಮಣಕಟ್ಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಸಾಳೊಂಕಿ ಸೇರಿದಂತೆ ತಾಲುಕಾಡಳಿತದ ಇತರೆ ಅಧಿಕಾರಿಗಳು ಸಭೆಯಲ್ಲಿದ್ದರು.