ಕೊಪ್ಪಳ 02: ಎಲ್ಲರಂತೆ ಸಾಮಾನ್ಯವಾಗಿದ್ದ ಯುವಕ ಆಯತಪ್ಪಿ ಬಿದ್ದಿದ್ದರಿಂದ ಬಾಗಿದ ಬೆನ್ನಿಗೆ ಸರಿಯಾದ ಚಿಕಿತ್ಸೆಸಿಗದೆ ದಿನೇ ದಿನೇ ಸಂಪೂರ್ಣ ಬೆಂಡಾಗಿದ್ದು, ಸೂಕ್ತ ಚಿಕಿತ್ಸೆಗಾಗಿ ನೆರವು ನೀಡುವಂತೆ ಯುವಕ ನಾಗರಾಜ ಹ್ಯಾಟಿ ಮನವಿ ಮಾಡಿದ್ದಾರೆ. ಅವರು ಸೋಮವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ನನಗೀಗ 26 ವರ್ಷ ನೆಟ್ಟಗೆ ನಿಲ್ಲಲು ಆಗುವುದಿಲ್ಲ. ಬಾಗಿಯೇ ಇರಬೇಕು. ಇದಲ್ಲದೆ ನಾನಾ ಆರೋಗ್ಯ ಸಮಸ್ಯೆಗಳು ಸಹ ಪ್ರಾರಂಭವಾಗಿವೆ. 5 ವರ್ಷಗಳ ಹಿಂದಷ್ಟೇ ಆಯತಪ್ಪಿ ಬಿದ್ದು ಕಾಲಿಗೆ ಪೆಟ್ಟಾಗಿತ್ತು. ಆಗ ಆರ್ಥಿಕ ಸಮಸ್ಯೆಯಿಂದ ಚಿಕಿತ್ಸೆ ಪಡೆಯದ ಕಾರಣ ಎಲ್ಲವೂ ಸರಿಯಾಗಿದ್ದ ನನಗೆ ಕ್ರಮೇಣ ಬೆನ್ನು ಬಾಗುತ್ತಾ ಬಂದಿದೆ.
ಈಗ ಬೆನ್ನು ಊನನಾಗಿದ್ದು ಪೂರ್ಣ ಪ್ರಮಾಣದಲ್ಲಿ ಬಾಗಿಯೇ ನಡೆಯುವಂತ ಪರಿಸ್ಥಿತಿ ಬಂದಿದೆ ಎಂದ ಅವರು ಎಂ ಕಾಲಾಜಿ ಪೆಂಡಾಲಾಜಿಸ್ ಎನ್ನುವ ಕಾಯಿಲೆ ಬಂದಿದ್ದು, ಈಗ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದಿದ್ದರೇ ಇನ್ನೂ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ. ಚಿಕಿತ್ಸೆಗೆ 8ರಿಂದ 10 ಲಕ್ಷ ರೂಪಾಯಿಗಳು ಬೇಕಾಗುತ್ತದೆ. ಅಷ್ಟೊಂದು ಹಣ ನನ್ನ ಬಳಿ ಇಲ್ಲ, ಕೂಲಿ, ನಾಲಿ ಮಾಡಿಯೇ ನಮ್ಮತಂದೆ, ತಾಯಿ ಜೀವನ ಮಾಡುತ್ತಿದ್ದಾರೆ. ಹೀಗಾಗಿ ನಾನು ಸಹ ಎಲ್ಲರಂತೆ ಬದುಕಲು ಚಿಕಿತ್ಸೆಗಾಗಿ ನೆರವು ನೀಡಿ ಎಂದು ಮನವಿ ಮಾಡಿದರು.ಅವರ ಸಂಬಂಧಿಕರಾದ ಯಂಕಣ್ಣ ಅಂಬಳಿ ಹಾಗೂ ಸೋಮನರಡ್ಡಿ ಮಾದಿನೂರು ಇದ್ದರು.