ಸರಕಾರಿ ಪ್ರೌಢ ಶಾಲೆಯಲ್ಲಿವಿಶ್ವ ಪರಿಸರ ದಿನ ಆಚರಣೆ
ಕೊಪ್ಪಳ 06: ತಾಲೂಕಿನ ಟಿ ಬಿ ಪಿ ಮುನಿರಾಬಾದ್ ನ ಸ್ಥಳೀಯ ಸರಕಾರಿ ಪ್ರೌಢಶಾಲೆಯಲ್ಲಿ ಗುರುವಾರದಂದು ವಿಶ್ವ ಪರಿಸರ ದಿನಾಚರಣೆಯನ್ನು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಾಲೆಯ ಮುಖ್ಯಸ್ಥರು ಸಕ್ರಿಯವಾಗಿ ಭಾಗವಹಿಸಿದರು.ಕಾರ್ಯಕ್ರಮದ ಭಾಗವಾಗಿ, ವಿದ್ಯಾರ್ಥಿನಿ ಪೂಜಾ ಪರಿಸರ ದಿನದ ಮಹತ್ವವನ್ನು ವಿವರಿಸಿದರು. ಅವರು ಗಿಡಮರಗಳನ್ನು ಸಂರಕ್ಷಿಸಿ ಬೆಳೆಸುವುದರಿಂದ ಸಂಭವಿಸುವ ಹಲವಾರು ಲಾಭಗಳ ಬಗ್ಗೆ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂಬುದನ್ನು ಹಿರಿಯರಿಗೆ ಒತ್ತಿ ಹೇಳಿದರು.ನಂತರ ಕನ್ನಡ ಅಧ್ಯಾಪಕಿ ಗೀತಾಬಾಯಿ ಅವರು ಪ್ರಭಾಷಣ ನೀಡಿ, ವಿಶ್ವ ಪರಿಸರ ದಿನವನ್ನು ಸುಮಾರು 143 ದೇಶಗಳು ಆಚರಿಸುತ್ತಿವೆ ಎಂದು ವಿವರಿಸಿದರು.
ಪ್ಲಾಸ್ಟಿಕ್ ಬಳಕೆಯ ಹಾನಿಯನ್ನು ತೊಡಗಿ, ಪ್ಲಾಸ್ಟಿಕ್ ವಿರೋಧಿ ಅಭಿಯಾನವನ್ನು ಎಲ್ಲೆಡೆ ಪ್ರಚಲಿತಗೊಳಿಸುವ ಅಗತ್ಯವಿದೆ ಎಂಬ ಸಂದೇಶವನ್ನು ಅವರು ನೀಡಿದರು.ಮುಖ್ಯೋಪಾಧ್ಯಾಯರಾದ ರಾಜಭಕ್ಷಿ ಅವರು ವಿಶ್ವ ಪರಿಸರ ದಿನದ ಮಹತ್ವವನ್ನು ತಿಳಿಸುತ್ತ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪ್ರೇರಣಾದಾಯಕ ಉಕ್ತಿಯನ್ನು ಉಲ್ಲೇಖಿಸಿದರು.
ಅವರು ಉಲ್ಲೇಖಿಸಿದಂತೆ:"ನಾನು ಅಳಿಲನ್ನು ಸಾಕಿದೆ, ಅದು ಓಡಿಹೋಯಿತು. ಪಕ್ಷಿಯನ್ನ ಸಾಕಿದೆ, ಅದು ಸಹ ಹಾರಿಹೋಯಿತು. ಆದರೆ ಒಂದು ಮರವನ್ನು ಬೆಳೆಸಿದಾಗ, ಆ ಎರಡು ಪ್ರಾಣಿಗಳು ಮರದ ನೆರಳಿನಲ್ಲಿ ಸೇರಿದವು." ಈ ಉಕ್ತಿಯ ಮೂಲಕ ಅವರು ಒಂದು ಮರದ ಮಹತ್ವವನ್ನು ಹಾಗೂ ಪರಿಸರದ ಜೊತೆ ನಮ್ಮ ಸಂಬಂಧವನ್ನು ಬಿಂಬಿಸಿದರು. ಅಲ್ಲದೇ, ಮಗು ಹುಟ್ಟಿದಾಗ ತೊಟ್ಟಿಲು, ಮನುಷ್ಯ ಸತ್ತಾಗ ಚಟ್ಟ ಕಟ್ಟಲು ಮರದ ಅವಶ್ಯಕತೆ ಇರುವುದರಿಂದ, ಮರವನ್ನೂ ತಾಯಿಯಂತೆ ಪ್ರೀತಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರುಗಳಾದ ಶಮಿಮುನ್ನಿಸಾ ಬೇಗಂ ಖಿಲ್ಲೆದಾರ್, ಅತಿಯಾ ಬಾನು, ರಫತುನ್ನಿಸಾ, ನಾಗರತ್ನ, ವಿದಾಯತುಲ್ಲ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಇಸ್ಮಾಯಿಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರುಕಾರ್ಯಕ್ರಮದ ಅಂತ್ಯದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ತಮ್ಮ ಕೈಗಳಿಂದ ಗಿಡ ನೆಟ್ಟು, ಪರಿಸರ ಸಂರಕ್ಷಣೆಗೆ ಬದ್ಧತೆ ತೋರಿಸಿದರು.