ಬೇಡಿಕೆ ಈಡೇರಿಸುವ ಭರವಸೆ ಹೋರಾಟ ಅಂತ್ಯ

The struggle for the fulfillment of the demand is over.

ಬೇಡಿಕೆ ಈಡೇರಿಸುವ ಭರವಸೆ ಹೋರಾಟ ಅಂತ್ಯ   

ತಾಳಿಕೋಟೆ 06: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಜಿಲ್ಲಾ ಘಟಕ ಹಾಗೂ ಸ್ಥಳೀಯ ಕಲಕೇರಿ ಗ್ರಾಮ ಘಟಕದ ವತಿಯಿಂದ 10 ದಿನಗಳಿಂದ ನಡೆಸಿದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಬುಧವಾರ ಹಿಂದಕ್ಕೆ ಪಡೆಯಲಾಯಿತು.  

ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಅವರು ಹೋರಾಟಗಾರರೊಂದಿಗೆ ಚರ್ಚಿಸಿ ಮನ ಒಲಿಸಿದರು. ಅವರುಬೇಡಿಕೆ ಇಟ್ಟಿದ್ದ 20ಕ್ಕೂ ಅಧಿಕ ಅಂಶಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಜಿಲ್ಲಾ ಹಂತದಲ್ಲಿ ಸಾಧ್ಯವಿರುವ ಎಲ್ಲವುಗಳನ್ನು ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ಜರುಗಿಸುತ್ತೇವೆ. ಸರ್ಕಾರದ ಹಂತದಲ್ಲಿ ನಿರ್ಣಯಿಸಬೇಕಾದ ಅಂಶಗಳನ್ನು ಸರ್ಕಾರಕ್ಕೆ ಪತ್ರ ಬರೆದು ಸಮಸ್ಯೆಗಳ ಕುರಿತು ಗಮನ ಸೆಳೆಯಲಾಗುವುದು ಹೋರಾಟವನ್ನು ಹಿಂದಕ್ಕೆ ಪಡೆಯಬೇಕು ಎಂಬ ವಿನಂತಿಗೆ ಒಪ್ಪಿದ ಹೋರಾಟಗಾರರು ತಮ್ಮ ಹತ್ತು ದಿನಗಳ ಅಹೋರಾತ್ರಿ ಹೋರಾಟವನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದರು.  

ರಣಧೀರ ಪಡೆ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಸಂತೋಷ ಮಣಿಗಿರಿ, ಡಿಎಸ್‌ಎಸ್‌. ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ಸಿಂದಗಿ ತಾಲ್ಲುಕಾ ಸಂಚಾಲಕ ಶರಣು ಚಲವಾದಿ, ಸಂಘಟನಾ ಸಂಚಾಲಕ ಶಿವಕುಮಾರ ಗಣಿಯಾರ, ಕಲಕೇರಿ ವಲಯ ಸಂಚಾಲಕ ಸೋಮು ಬಡಿಗೇರ, ಕಲಕೇರಿಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ಈರಗಂಟೆಪ್ಪ ಬಡಿಗೇರ, ಯಮನೂರಿ ಬೆಕಿನಾಳ, ಬಸವರಾಜ ಗುಡಿಸಲಮನಿ, ಮಲ್ಲಪ್ಪ ನಡುವಿಕೇರಿ, ಆನಂದ ಹೊಸಮನಿ ಸೇರಿದಂತೆ ಹಲವರಿದ್ದರು.  

ಉಪವಿಭಾಗಾಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಟೆ, ತಹಶೀಲ್ದಾರ ಡಾ.ವಿನಯಾ ಹೂಗಾರ, ತಾಲ್ಲೂಕು ಪಂಚಾಯಿತಿ ಇಓ ಎನ್‌.ಎಸ್‌.ಮಸಳಿ, ಪಿಡಿಓ ಬಿ.ಎಂ.ಸಾಗರ ಇತರ ಅಧಿಕಾರಿಗಳಿದ್ದರು.