ಶಿರಹಟ್ಟಿ ಪಟ್ಟಣದಿಂದ ಗದಗ ಹೊನ್ನಾಳಿ ರಾಜ್ಯ ಹೆದ್ದಾರಿ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಗೊಳಿಸಿ: ನಾಗರಾಜ ಲಕ್ಕುಂಡಿ
ಶಿರಹಟ್ಟಿ 30: ಶಿರಹಟ್ಟಿ ಪಟ್ಟಣದಲ್ಲಿ ಹಾದು ಹೋದ ಗದಗ ಹೊನ್ನಾಳಿ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸೊರಟೂರು ರಸ್ತೆಯ ರಿಂಗ್ ರೋಡ್ ಹಾಗೂ ಶಿರಹಟ್ಟಿಯಿಂದ ಚಬ್ಬಿ ರಸ್ತೆಯ ರಿಂಗ್ ರೋಡ್ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿದ್ದು ಶೀಘ್ರವೇ ಈ ರಾಜ್ಯ ಹೆದ್ದಾರಿಯನ್ನು ಕಲ್ಪಿಸುವ ಈ ಎರಡೂ ರಸ್ತೆಗಳನ್ನು ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಶಿರಹಟ್ಟಿ ತಾಲೂಕಾ ಬಿಜೆಪಿ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ ಅವರ ನೇತೃತ್ವದಲ್ಲಿ ತಹಶೀಲ್ದಾರವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಾಗರಾಜ ಲಕ್ಕುಂಡಿ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕೀರೇಶ ರಟ್ಟಿಹಳ್ಳಿ ಮಾತನಾಡಿ, ಗದಗ್ ಹೊನ್ನಾಳಿ ರಾಜ್ಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿ 4-5 ವರ್ಷಗಳಾಗಿವೆ. ಕಾಮಗಾರಿಗೆ ಬೃಹತ್ ವಾಹನಗಳ ಮೂಲಕ ಸಲಕರಣೆಗಳನ್ನು ಸಾಗಿಸಲು ನಗರದ ರಸ್ತೆಗಳ ಮೂಲಕ ಸಂಚರಿಸಿ ನಗರದಲ್ಲಿರುವ ರಸ್ತೆಗಳು ಸಂಪೂರ್ಣ ಹದಗಟ್ಟಿದೆ. ಈ ರಾಜ್ಯ ಹೆದ್ದಾರಿ ಕಾಮಗಾರಿ ಈಗಾಗಲೇ ಸಂಪೂರ್ಣವಾಗಿ ಮುಗಿದಿದ್ದು ನಗರದಲ್ಲಿನ ಹದಗೆಟ್ಟಿರುವ ರಸ್ತೆಗಳ ಬಗ್ಗೆ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬೃಹದಾಕಾರದ ಗುಂಡಿಗಳು ನಿರ್ಮಾಣವಾಗಿ ಮಹಿಳೆಯರಿಗೆ, ವೃದ್ಧರಿಗೆ, ಮಕ್ಕಳಿಗೆ ಈ ರಸ್ತೆಯ ಮೂಲಕ ಸಂಚರಿಸಲು, ಲಘು ವಾಹನಗಳ ಸಂಚಾರಕ್ಕೆ ಬಹಳ ತೊಂದರೆಯಾಗಿದೆ. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಗುಂಡಿಗಳು ಬಿದ್ದಿರುವ ರಸ್ತೆಗಳನ್ನು ಬರುವ ಎಂಟು ದಿನ ಒಳಗಾಗಿ ರಸ್ತೆ ಸಂಪೂರ್ಣವಾಗಿ ಡಾಂಬರೀಕರಣ ಮಾಡಿಕೊಡಬೇಕು, ಇಲ್ಲವಾದಲ್ಲಿ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಾನು ಲಮಾಣಿ, ಬಸವರಾಜ್ ವಡವಿ, ಗೂಳಪ್ಪ ಕರಿಗಾರ, ಅಕ್ಬರಸಾಬ್ ಯಾದಗಿರಿ, ಮಲ್ಲು ಕಬಾಡಿ, ವಿನೋದ್ ಕಪ್ಪತ್ತನವರ, ಮಂಜುನಾಥ ಬಳೆಗಾರ, ಮಲ್ಲು ಕುದುರಿ, ತಿಪ್ಪಣ್ಣ ಲಮಾಣಿ, ವೀರಣ್ಣ ಅಂಗಡಿ, ಗೀರೀಶ್ ತುಳಿ, ಸಂತೋಷ ಕುಬೇರ, ಶೇಖರ ಲಮಾಣಿ, ಯಲ್ಲಪ್ಪ ಖಾನಾಪುರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.