ಅಧಿಕಾರಿಗಳು ಜವಾಬ್ದಾರಿಯಿಂದ ತಮ್ಮ ಕಾರ್ಯಗಳನ್ನು ನಿರ್ವಹಿಸಲಿ: ಅಧ್ಯಕ್ಷ ಎಸ್‌.ಆರ್‌.ಪಾಟೀಲ

Let the officers perform their duties responsibly: President S.R. Patil

 ಅಧಿಕಾರಿಗಳು ಜವಾಬ್ದಾರಿಯಿಂದ ತಮ್ಮ ಕಾರ್ಯಗಳನ್ನು ನಿರ್ವಹಿಸಲಿ: ಅಧ್ಯಕ್ಷ ಎಸ್‌.ಆರ್‌.ಪಾಟೀಲ 

ಧಾರವಾಡ  05: ರಾಜ್ಯ ಜನತೆಯ ಬದುಕು ಸುಧಾರಿಸಲು, ಅಭಿವೃದ್ಧಿಯಲ್ಲಿ ಎಲ್ಲರೂ ಭಾಗವಹಿಸಬೇಕು. ಈ ಹಿತ ಸಾಧನೆಗಾಗಿ ರಾಜ್ಯ ಸರಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ​‍್ಕವಾಗಿ ಜಾರಿಗೊಳಿಸಬೇಕು. ಅಧಿಕಾರಿಗಳು ಮಾತಾಡುವದಲ್ಲ, ತಮ್ಮ ಕೆಲಸಗಳನ್ನು ಮಾಡಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಸ್‌.ಆರ್‌.ಪಾಟೀಲ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ  ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯವಿಧಾನ ಮತ್ತು ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿಗೊಳಿಸಿದ ಬಗ್ಗೆ ಪ್ರಗತಿ ಪರೀಶೀಲನಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ,ಮಾತನಾಡಿದರು. ಗೃಹ ಜ್ಯೋತಿ ಯೋಜನೆಯಡಿ, ಅರ್ಹತೆ ಇರುವ ಎಲ್ಲ ಫಲಾನುಭವಿಗಳಿಗೆ ಸೌಲಭ್ಯ ಸೀಗಬೇಕು. ಗ್ರಾಮೀಣ ಭಾಗದಲ್ಲಿನ ಬಹಳಷ್ಟು ಜನ ಲೈನ್ ಮನ್‌ಗಳು ತಾವೇ ವಿದ್ಯುತ್ ತೊಂದರೆಗಳನ್ನು ಪರಿಹರಿಸಲು ಮುಂದಾಗದೆ, ತಮ್ಮ ಸಹಾಯಕರನ್ನು ನೇಮಿಸಿಕೊಂಡು ಅವರಿಂದ ಮಾಡಿಸುತ್ತಾರೆ.  ತರಬೇತಿ ಇಲ್ಲದ ಹಾಗೂ ಕಂಪನಿ ಅನುಮತಿ ಇಲ್ಲದೆ ಅವರನ್ನು ನೇಮಿಸಿಕೊಂಡಿರುವದರಿಂದ ಅಮಾಯಕರು ವಿದ್ಯುತ್ ಅವಘಡದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೆಸ್ಕಾಂ ಅಧಿಕಾರಿಗಳು ಮಾಹಿತಿ ಇದ್ದರೂ ಈ ಕುರಿತು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಈ ಕುರಿತು ಹೆಸ್ಕಾಂ ಎಂ.ಡಿ ಅವರು ಗಂಭೀರವಾಗಿ ಪರಿಗಣಿಸಬೇಕು. ಲೈನ್ ಮನ್‌ಗಳು ತಮಗೆ ಸಹಾಯಕರನ್ನು ನೇಮಿಸಿಕೊಂಡು, ಅವರಿಗೆ ಯಾವ ಸುರಕ್ಷತೆ ಇಲ್ಲದೆ ಕೆಲಸ ಕೊಡುತ್ತಿದ್ದಾರೆ. ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಅವರು ಸೂಚಿಸಿದರು. ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ ಮತ್ತು ಯುವ ನಿಧಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗದಂತೆ ಎಚ್ಚರವಹಿಸಬೇಕು. ಯಾವುದೇ ಅರ್ಹ ಫಲಾನುಭವಿ ಸರಕಾರದ ಯೋಜನೆಗಳಿಂದ ಹೊರಗುಳಿಯದಂತೆ ಮುಂಜಾಗ್ರತೆ ವಹಿಸಬೇಕು ಎಂದು ಅಧ್ಯಕ್ಷರು ಹೇಳಿದರು. ನ್ಯಾಯ ಬೆಲೆ ಅಂಗಡಿಯವರು ಯಾರು ಸರಿಯಾಗಿ ವಿತರಣೆ ಮಾಡುವುದಿಲ್ಲವೋ ಮತ್ತು ಭ್ರಷ್ಟಾಚಾರ ಏನಾದರೂ ಕಂಡುಬಂದಲ್ಲಿ ತಕ್ಷಣ ಅವರ ಪರವಾನಿಗೆಯನ್ನು ರದ್ದು ಮಾಡಿ ಎಂದು ಹೇಳಿದರು.  ಅನ್ನಭಾಗ್ಯ ಯೋಜನೆಯಡಿಯ ಸೌಲಭ್ಯಗಳ ಬಗ್ಗೆ ಸರ್ಕಾರದ ಮಾಹಿತಿಯ ಫಲಕಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.  ಶಕ್ತಿ ಯೋಜನೆ ಅಡಿಯಲ್ಲಿ ಬರುವ ಸಾರಿಗೆ ಬಸ್ಸುಗಳನ್ನು ಕೋರಿಕೆಯ ನಿಲ್ಲುಗಡೆ ಇದ್ದಲ್ಲಿ, ಅತಿ ಹೆಚ್ಚು ಸಾರ್ವಜನಿಕರು ಓಡಾಡುವ ಪ್ರದೇಶಗಳಲ್ಲಿ ಬಸ್ಸುಗಳನ್ನು ನಿಲ್ಲಿಸಬೇಕು ಎಂದು ಹೇಳಿದರು.  ಸಮಸ್ಯೆಗಳು ಕಂಡುಬಂದಲ್ಲಿ ಸ್ವತಃ ಅಧಿಕಾರಿಗಳೇ ಹೋಗಿ ಪರೀಶೀಲನೆ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಮಸ್ಯೆಗೆ ಪರಿಹಾರ ನೀಡಬೇಕು. ಹಳ್ಳಿಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಬಸ್ಸಿನ ವ್ಯವಸ್ಥೆ ಸರಿಯಾಗಿ ಮಾಡಬೇಕು. ಎಲ್ಲ ಬಸ್ ನಿಲ್ದಾಣಗಳಲ್ಲಿ ಶೌಚಾಲಯಗಳು ಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕೆಂದು ಎಂದು ಅಧ್ಯಕ್ಷ ಎಸ್‌.ಆರ್‌.ಪಾಟೀಲ ಅವರು ತಿಳಿಸಿದರು.   ಯುವನಿಧಿ ಯೋಜನೆಯಡಿ ಬಾಕಿ ಇರುವ ಅರ್ಜಿಗಳನ್ನು ನಿಯಮಾನುಸಾರ ಪರೀಶೀಲಿಸಿ, ಇತ್ಯರ್ಥ ಪಡಿಸಬೇಕೆಂದು ಸೂಚಿಸಿದರು.   ಗೃಹಲಕ್ಷ್ಮಿ ಯೋಜನೆಯಡಿ ಏಪ್ರಿಲ್ ತಿಂಗಳ ಹಣವನ್ನು ಮಂಜೂರು ಮಾಡಲಾಗಿದೆ. ಮೇ ತಿಂಗಳ ಹಣವನ್ನು ಎರಡು ದಿನಗಳಲ್ಲಿ ಜಮಾ ಆಗುತ್ತದೆ ಎಂದು ಅಧಿಕಾರಿಗಳು ಹೇಳಿದರು. ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ, 4,11,746 ಕುಟುಂಬಗಳು ಪ್ರಯೋಜನೆ ಪಡೆಯುತ್ತಿದ್ದಾರೆ. ಕಳೆದ ತಿಂಗಳು 23.38 ಕೋಟಿ ಝೀರೋ ಬಿಲ್ಲ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್‌.ಮೂಗನೂರಮಠ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.  ಜಿಲ್ಲಾ ಪ್ರಾಧಿಕಾರದ ಉಪಾಧ್ಯಕ್ಷರಾದ ಮುರಗಯ್ಯಾ ವಿರಕ್ತಮಠ, ಶಾಂತಪ್ಪ ಅಕ್ಕಿ, ರೇಹನ್ ರಝಾ ಐನಾಪೂರಿ, ರತ್ನಾ ತೇಗೂರಮಠ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಜಿಲ್ಲಾ ಪ್ರಾಧಿಕಾರದ ಸದಸ್ಯರಾದ ಅರವಿಂದ ಏಗನಗೌಡರ, ಬಸಪ್ಪ ಮಹಾಬಳೇಶ್ವರ ಬಾವಕಾರ, ಅಬ್ದುಲ ಗಣಿ ಅಹ್ಮದವಾಲಿ, ಅಬ್ದುಲ್ ರಸೀದ ಬೋಳಾಬಾಯಿ ಹಾಗೂ ಇತರ ಸದಸ್ಯರು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.