ನಿರ್ಲ್ಯಕ್ಷಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯದವರ ಏಳಿಗೆಗಾಗಿ ನಿಗಮ ಸ್ಥಾಪನೆ : ಪಲ್ಲವಿ
ಗದಗ 09: ನಿರ್ಲಕ್ಷಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯದವರ ಏಳಿಗಾಗಿ ನಿಗಮವು ಸ್ಥಾಪನೆಯಾಗಿದ್ದು ಪ.ಜಾ ಮತ್ತು ಪ.ಪಂ ಅಲೆಮಾರಿ ಸಮದಾಯದವರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕೆಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಪತ್ರಿಕಾಗೋಷ್ಟಿಯನ್ನುದ್ದೇಶಿ ಅವರು ಮಾತನಾಡಿದರು. ಪ.ಜಾ ಮತ್ತು ಪ. ಪಂ. ಅಲೆಮಾರಿ ಅಭಿವೃದ್ಧಿ ನಿಗಮವು ಗದಗ ಜಿಲ್ಲೆಯಲ್ಲಿ ಡಿಸೆಂಬರ್ 7 ರಿಂದ 9 ರವರೆಗೆ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು ಜಿಲ್ಲೆಯ ಅಲೆಮಾರಿ ಸಮುದಾಯದವರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಹಾಗೂ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 5 ವರ್ಷಗಳಾದ ಮೇಲೆಯೂ ಅಲೆಮಾರಿ ಸಮುದಾಯದವರಿಗೆ ಸ್ವಾತಂತ್ರ್ಯ ಬಂದಿರಲಿಲ್ಲ. 1952 ರಲ್ಲಿ ಆಗಿನ ಪ್ರಧಾನಿ ಜವಾಹರ ಲಾಲ್ ನೆಹರು ಅವರು ಅಲೆಮಾರಿ ಸಮುದಾಯದವರನ್ನು ಸ್ವತಂತ್ರಗೊಳಿಸಿದರು ಎಂದರು.
ಅಲೆಮಾರಿ ಸಮುದಾಯದವರಿಗೆ ನೆಲೆ ಸೇರಿದಂತೆ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು. ಸರ್ಕಾರದ ಹಾಗೂ ಸಾರ್ವಜನಿಕರ ನಡುವೆ ಕೊಂಡಿಯಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕೆಲಸ ಮಾಡುತ್ತಿದ್ದು ಸಮಾಜದ ಅನಿಷ್ಟ ಪದ್ಧತಿಗಳಾದ ಬಾಲ್ಯವಿವಾಹ, ಮೌಢ್ಯತನ ಹೋಗಲಾಡಿಸಿ ಆ ಸಮುದಾಯವರಿಗೆ ಶಿಕ್ಷಣ ಒದಗಿಸುವ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು. ಪ್ರತಿ ವರ್ಷ ಅಗಸ್ಟ 31 ರಂದು ವಿಮುಕ್ತ ಬುಡಕಟ್ಟುಗಳ ದಿನಾಚರಣೆ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಪ.ಜಾ ಮತ್ತು ಪ.ಪಂಗಡದ ಅಲೆಮಾರಿ ಸಮುದಾಯಗಳಿಗೆ ಭೇಟಿ ನೀಡಿದ ನಿಗಮದ ಅಧ್ಯಕ್ಷರು ತಮ್ಮ ಅನುಭವಗಳನ್ನು ಪತ್ರಿಕಾಗೋಷ್ಟಿಯಲ್ಲಿ ಹಂಚಿಕೊಂಡರು.
ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರಿನಲ್ಲಿ ಗ್ರಾಮದ ಗಂಟಿಚೋರ್ ಜನಾಂಗದವರಿಗೆ ಸ್ಮಶಾನ ಭೂಮಿ ಅಭಿವೃಧ್ಧಿ, ನಿವೇಶನ ಸಮಸ್ಯೆ , ಜಾತಿ ಪ್ರಮಾಣ ಪತ್ರ, ನೂಲಿ ಚಂದಯ್ಯನವರ ಭವನ ಮಂಜೂರಾತಿ, ವಯಸ್ಕರ ಶಿಕ್ಷಣ ಕುರಿತು ಸಮಸ್ಯೆಗಳು ಕಂಡು ಬಂದಿದ್ದು ಈ ಕುರಿತು ಕ್ರಮ ವಹಿಸಲಾಗುವುದು ಎಂದರು.
ಲಕ್ಷ್ಮೇಶ್ವರ ಪಟ್ಟಣದ ಇಂದಿರಾ ನಗರದಲ್ಲಿ ಪ.ಜಾತಿಯಬುಡ್ಲ ಜಂಗಮ್ ಸಮುದಾಯದ ಕುಟುಂಬಗಳಿಗೆ ನಿವೇಶನ ಲಭ್ಯವಿದ್ದು ಮನೆ ಕಟ್ಟಿಸುವುದು, ಚೆನ್ನದಾಸರ ಸಮುದಾಯದ ಕುಟುಂಬಗಳಿಗೆ ನಿವೇಶನ, ಸುಡುಗಾಡ ಸಿದ್ಧರ ಸಮುದಾಯದವರಿಗೆ ನಿವೇಶನ ಒದಗಿಸುವ ಕುರಿತು ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿದೆ.
ನರಗುಂದ ಪಟ್ಟಣದ ಹರಿಣಿ ಶಿಕಾರಿ ಸಮುದಾಯದವರಿಗೆ ನಿವೇಶನಗಳ ಸಮಸ್ಯೆಯಿದೆ. ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಶುದ್ಧ ಕುಡಿಯುವ ನೀರನ್ನು ಕಲ್ಪಿಸಲು ಕ್ರಮ ವಹಿಸಲಾಗುವುದು. ಮಹಿಳೆಯರಿಗೆ ಶೌಚಾಲಯದ ಸಮಸ್ಯೆ ಇದ್ದು ಈ ಕುರಿತು ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಈ ಜನರಿಗೆ ಶುಚಿತ್ವದ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು ಎಂದು ನುಡಿದರು.
ನರೇಗಲ್ ಪಟ್ಟಣದ ಸಿಂಧೋಳು ಸಮುದಾಯದವರ 55 ಕುಟುಂಬಗಳು ಇದ್ದು ಅದರಲ್ಲಿ 11 ಮನೆಗಳು ನಿರ್ಮಾಣವಾಗಿದ್ದು ಉಳಿದವರಿಗೆ ಬೇರೆ ಕಡೆ ನಿವೇಶನದ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿನ ಸೌಲಭ್ಯ ಹಾಗೂ ರಸ್ತೆ ಸಂಪರ್ಕ ಸೇರಿದಂತೆ ಇಲ್ಲಿನ ಜನರಿಗೆ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ ಹಾಗೂ ರೇಶನ್ ಕಾರ್ಡ ಸಮಸ್ಯೆಗಳಿದ್ದು ಆದಷ್ಟು ಶೀಘ್ರ ಪರಿಹರಿಸಬೇಕಾಗಿದೆ. ಮೇವುಂಡಿ ಗ್ರಾಮದ ಬುಡ್ಲ ಜಂಗಮ ಸಮುದಾಯದ ಒಟ್ಟು 13 ಕುಟುಂಬಗಳಿದ್ದು 4 ಕುಟುಂಬಗಳಿಗೆ ಮನೆಗಳಿದ್ದು 9 ಕುಟುಂಬಗಳಿಗೆ ಮನೆಗಳಿರುವುದಿಲ್ಲ. ಅವರ ವಸತಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಜಾತಿ ಪ್ರಮಾಣ ಪತ್ರದ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದರು.
ಮುಂಡರಗಿ ಪಟ್ಟಣದ ಕುಂಚಿ ಕೊರವ ಸಮುದಾಯದವರ 35 ಕುಟುಂಬಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು 28 ಜನರ ಅರ್ಜಿಗಳು ಆಯ್ಕೆಯಾಗಿದ್ದು ಶೀಘ್ರದಲ್ಲಿ ಹಕ್ಕು ಪತ್ರ ನೀಡಲು ಕ್ರಮ ವಹಿಸಲಾಗುವುದು. ಮನೆ ನಿರ್ಮಾಣ ,ಕುಡಿಯುವ ನೀರು ಮತ್ತು ಬೀದೀದೀಪದ ಸಮಸ್ಯೆ, ವಯಸ್ಕರ ಶಿಕ್ಷಣ ಕುರಿತಂತೆ ಕ್ರಮ ವಹಿಸಲಾಗುವುದು.
ಮುಂಡರಗಿ ತಾಲೂಕು ಕೊರ್ಲಹಳ್ಳಿ ಗ್ರಾಮದ ಶಿಳ್ಳೇಕ್ಯಾತ ಸಮುದಾಯದವರು ಮೀನುಗಾರಿಕೆ ಕೆಲಸ ನಿರ್ವಹಿಸುತ್ತಿದ್ದು ಸರ್ಕಾರದಿಂದ ಅವರಿಗೆ ವಿಮೆ ಸೌಲಭ್ಯ ದೊರೆಯಬೇಕಾಗಿದೆ. ಈ ಕುರಿತು ಸಂಬಂಧಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಗದಗ ನಗರದ ಸುಡುಗಾಡು ಸಿದ್ಧರ ಸಮುದಾಯದವರಿಗೆ ಅವರ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗದಗ ಬೆಟಗೇರಿಯ ಹರಿಣಿ ಶಿಕಾರಿ, ಗಂಟಿ ಚೋರ್, ಕೊರಚ, ಕೊರಮ, ಚೆನ್ನದಾಸರ ಸಮುದಾಯಗಳಿಗೆ ಭೂ ಒಡೆತನ ಯೋಜನೆ, ಮೈಕ್ರೋ ಕ್ರೆಡಿಟ್, ನೇರ ಸಾಲ ಮತ್ತು ಉದ್ಯಮಶೀಲತಾ ಯೋಜನೆಗಳಡಿ ಸೌಲಭ್ಯ ದೊರಕಿಸಬೇಕು. ಛಪ್ಪರಬಂದ ಸಮುದಾಯದವರಿಗೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಲೆಮಾರಿ ಸ್ಥಾನ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಜಿ ತಿಳಿಸಿದರು.
ಈ ಸಂದರ್ಭದಲ್ಲಿ ನಿಗಮದ ವಿಶೇಷ ಅಧಿಕಾರಿ ಆನಂದ ಏಕಲವ್ಯ, ನಗರಸಭೆ ನಾಮನಿರ್ದೇಶಿತ ಸದಸ್ಯ ದುರ್ಗೆಶ ವಿಭೂತಿ, ಜಿಲ್ಲಾ ಅಲೆಮಾರಿ ಅನುಷ್ಟಾನ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಹುಲ್ಲೇಶ ಭಜಂತ್ರಿ , ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಹಾಜರಿದ್ದರು.