ಮಕ್ಕಳ ರಕ್ಷಣೆ ಜೊತೆಗೆ ಬಾಲ್ಯ ವಿವಾಹ, ದೌರ್ಜನ್ಯ ತಡೆಯಲು ಜಾಗೃತಿವಹಿಸಿ : ಎಸಿ ಹೆಚ್‌.ಡಿ.ರಾಜೇಶ

ಮಕ್ಕಳ ರಕ್ಷಣೆ ಜೊತೆಗೆ ಬಾಲ್ಯ ವಿವಾಹ, ದೌರ್ಜನ್ಯ ತಡೆಯಲು ಜಾಗೃತಿವಹಿಸಿ : ಎಸಿ ಹೆಚ್‌.ಡಿ.ರಾಜೇಶ Along with protecting children, create awareness to prevent child marriage and violence: AC H.D. Ra

ಲೋಕದರ್ಶನ ವರದಿ

ಕಂಪ್ಲಿ 12 : ಬಾಲ್ಯ ವಿವಾಹ ಕಾನೂನು ಬಾಹಿರ. ಇಂತಹ ಪ್ರಕರಣಗಳು ಕಂಡು ಬಂದರೆ ನಾಗರಿಕರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮತ್ತು ಇಂತಹ ಕಾನೂನು ಬಾಹಿರ ಪ್ರಕರಣಗಳನ್ನು ನಿರ್ಲಕ್ಷ್ಯಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಹೆಚ್‌.ಡಿ.ರಾಜೇಶ ಹೇಳಿದರು. ಪಟ್ಟಣದ ಪುರಸಭೆಯಲ್ಲಿ ಗುರುವಾರ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಈಗಾಗಲೇ ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿಯನ್ನು ಪುರಸಭೆಗೂ ವಿಸ್ತರಿಸಲಾಗಿದೆ. ಸಮಿತಿ ರಚಿಸಿ, ಮಹಿಳೆಯರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಎಲ್ಲಾ ಇಲಾಖೆ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಎನ್‌ಜಿಒ ಸಮ್ಮುಖದಲ್ಲಿ ಕಂಪ್ಲಿಯಲ್ಲಿ ಮೊದಲ ಬಾರಿಗೆ ಸಭೆ ಜರುಗಿದ್ದು, ಮುಂದಿನ ಎರಡು ದಿನದಲ್ಲಿ ಕಾವಲು ಸಮಿತಿ ರಚಿಸಿ, ಆದೇಶ ಹೊರಡಿಸಲಾಗುವುದು. ಮಹಿಳೆಯರಲ್ಲಿ ಮತ್ತು ಮಕ್ಕಳಲ್ಲಿ ಕಾನೂನು ಹಕ್ಕುಗಳ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ಜಾಗೃತಿವಹಿಸಬೇಕಾಗಿದೆ. ತಾಲೂಕು ಮತ್ತು ಗ್ರಾಮೀಣ ಭಾಗದಲ್ಲಿ ಕರಪತ್ರಗಳನ್ನು ಹೊರಡಿಸಿ, ಜಾಗೃತಿಗೆ ಮುಂದಾಗಬೇಕು. ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಕಟ್ಟಿನಿಟ್ಟಿನ ಕ್ರಮವಹಿಸಬೇಕಾಗಿದೆ. ಪೋಷಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಮಕ್ಕಳ ಬಿಕ್ಷಾಟನೆ ತಡೆಗಟ್ಟಿ, ಶಿಕ್ಷಣ ಕೊಡಿಸುವ ವ್ಯವಸ್ಥೆಯಾಗಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು. ಅಷ್ಟರೊಳಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಿಯಾ ಯೋಜನೆ ತಯಾರಿಸಿ, ವರದಿ ನೀಡಬೇಕು. ಸರ್ಕಾರ ಯೋಜನೆಗಳನ್ನು ತಲುಪಿಸುವ ಜೊತೆಗೆ ಮಹಿಳೆಯರ ರಕ್ಷಣೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದರು.