ಫೆ.13 ರಂದು ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

Acceptance of public grievances on February 13 - District Officer Dr. Vijayamahantesh Danamma

ಫೆ.13 ರಂದು ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ  -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ 

ಹಾವೇರಿ 31 :  ಕರ್ನಾಟಕ ಲೋಕಾಯುಕ್ತ ಉಪ ಲೋಕಾಯುಕ್ತ  ನ್ಯಾಯಮೂರ್ತಿಗಳಾದ ಬಿ.ವೀರ​‍್ಪ ಅವರು ಫೆಬ್ರವರಿ 12 ರಿಂದ 14ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಫೆ.13 ರಂದು ಸಾರ್ವಜನಿಕರಿಂದ ದೂರು ಹಾಗೂ ಅಹವಾಲು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು  ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ  ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾನ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳೊಂದಿಗೆ,  ಕರ್ನಾಟಕ ಲೋಕಾಯುಕ್ತ ಹೆಚ್ಚುವರಿ ವಿಚಾರಣಾ ನಿಬಂಧಕರಾದ  ಕೆ.ಎಂ.ರಾಜಶೇಖರ,  ಪಿ.ಶ್ರೀನಿವಾಸ ಹಾಗೂ ವಿಚಾರಣಾ ಉಪ ನಿಬಂಧಕರಾದ  ಅರವಿಂದ ಎನ್‌.ವಿ. ಅವರು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದರು. 

ವಿವಿಧ ಸ್ಥಳಗಳಿಗೆ ಭೇಟಿ:  ಮಾನ್ಯ  ಉಪ ಲೋಕಾಯುಕ್ತ  ನ್ಯಾಯಮೂರ್ತಿಗಳು ಫೆ.12 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವಿವಿಧ  ಸ್ಥಳಗಳಿಗೆ ಅನೀರೀಕ್ಷಿತ ಭೇಟಿ ನೀಡಲಿದ್ದಾರೆ. ಅಂದು  ಮ. 1-45 ರಿಂದ  2-45ರವರೆಗೆ  ಹಾವೇರಿ ನಗರದ ನ್ಯಾಯಾಲಯದ  ಆವರಣದಲ್ಲಿರುವ ಹಾವೇರಿ  ಬಾರ್ ಅಸೋಸಿಯೇಷನ್‌ನಲ್ಲಿ ವಕೀಲರೊಂದಿಗೆ ಸಂಹವನ ನಡೆಸಲಿದ್ದಾರೆ. ಮಧ್ಯಾಹ್ನ 2-45 ರಿಂದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು. 

ಸಾರ್ವಜನಿಕರ ಅಹವಾಲು ಸ್ವೀಕಾರ: ಫೆ.13ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1-30ರವರೆಗೆ ಹಾಗೂ ಮಧ್ಯಾಹ್ನ 2-30 ರಿಂದ  ಸಂಜೆ 5 ಗಂಟೆಗೆವರೆಗೆ  ಹಾವೇರಿ ನಗರದ ಜಿಲ್ಲಾ ಗುರುಭವನದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸಲಿದ್ದಾರೆ. 

 ಜಿಲ್ಲೆಯಲ್ಲಿ ಯಾರಿಗಾದರೂ ಸರ್ಕಾರಿ ಅಧಿಕಾರಿ ಹಾಗೂ ನೌಕರರಿಂದ ತಮಗೆ ಕಾನೂನು ರೀತ್ಯಾ ಆಗಬೇಕಾದ ಕೆಲಸದಲ್ಲಿ ವಿಳಂಬವೇನಾದರೂ ಆಗಿದ್ದರೆ ಅಥವಾ ಅಧಿಕಾರಿ ಮತ್ತು ನೌಕರರು ನ್ಯಾಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು ಅಥವಾ ಇನ್ನಾವುದೇ ತರಹದ ಭ್ರಷ್ಟಾಚಾರ ಮತ್ತು ದುರಾಡಳಿತದಲ್ಲಿ ತೊಡಗಿದ್ದರೆ, ಅದರಿಂದ ತೊಂದರೆಗೊಳಗಾದ  ಸಾರ್ವಜನಿಕರು  ಉಪ ಲೋಕಾಯುಕ್ತ ನ್ಯಾಯಮೂರ್ತಿಗಳ ಮುಂದೆ ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿ  ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು. 

ಸೌಲಭ್ಯಗಳಿಂದ ವಂಚಿತರಾಗಬಾರದು: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ದೊರೆಯಬೇಕು  ಹಾಗೂ ಯಾವುದೇ ವ್ಯಕ್ತಿ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬುದು ಮಾನ್ಯ ಉಪ ಲೋಕಾಯುಕ್ತರ ಆಶಯವಾಗಿದ್ದು, ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ಹಾಗೂ ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಕ್ಕೆ ಅನಗತ್ಯ ವಿಳಂಬ ಮಾಡುತ್ತಿದ್ದರೆ  ಈ ವಿಷಯವಾಗಿ  ಸಾರ್ವಜನಿಕರು  ಮಾನ್ಯ  ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸಬಹುದು.  ಜಿಲ್ಲೆಯ ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು  ಎಂದು ತಿಳಿಸಿದರು.  


124 ಪ್ರಕರಣಗಳು:  ಜಿಲ್ಲೆಗೆ ಸಂಬಂಧಿಸಿದ 124 ಲೋಕಾಯುಕ್ತ ಪ್ರಕರಣಗಳಿದ್ದು, ಫೆ.14 ರಂದು  ಬೆಳಿಗ್ಗೆ 10 ರಿಂದ ಮಧ್ಯಾಹ್ನ 1-30ರವರೆಗೆ ಹಾಗೂ ಮಧ್ಯಾಹ್ನ 2-30 ರಿಂದ ಸಂಜೆ 5 ಗಂಟೆವರೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಹಾವೇರಿ ಜಿಲ್ಲೆಗೆ ಸಂಬಂಧಪಟ್ಟ ಲೋಕಾಯುಕ್ತ ಸಂಸ್ಥೆಗಳಲ್ಲಿ ದಾಖಲಾಗಿರುವ(ಗೌರವಾನ್ವಿತ ಉಪ ಲೋಕಾಯುಕ್ತರ ಕಾರ್ಯವ್ಯಾಪ್ತಿಗೆ ಒಳಪಡುವ ಪ್ರಕರಣಗಳಲ್ಲಿ) ತನಿಖೆ ಮತ್ತು ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಲ್ಲಿ (ಈಗಾಗಲೇ ಕಚೇರಿಯಿಂದ ನೋಟಿಸ್ ಕಳುಹಿಸಿರುವ) ದೂರುದಾರರು ಹಾಗೂ ಎದುರುಗಾರರ ಸಮ್ಮುಖದಲ್ಲಿ  ಕಾನೂನು ರೀತ್ಯ ವಿಚಾರಣೆ ನಡೆಸಲಿದ್ದಾರೆ. ಇದರಿಂದ ದೂರುದಾರರು ಹಾಗೂ ಎದುರುದಾರರು ವಿಚಾರಣೆಗೆ ಬೆಂಗಳೂರು  ತೆರಳುವುದು ತಪ್ಪುತ್ತದೆ ಹಾಗೂ ಸಮಯದ ಉಳಿತಾಯವಾಗಲಿದೆ ಎಂದರು.  

ನಾಲ್ಕು ಕೌಂಟರ್‌:ಲೋಕಾಯುಕ್ತ ಡಿಎಸ್‌ಪಿ ಬಿ.ಪಿ.ಚಂದ್ರಶೇಖರ ಅವರು ಮಾತನಾಡಿ, ಫೆ.13 ರಂದು ಗುರುಭವನದಲ್ಲಿ ಅಹವಾಲು ಹಾಗೂ ದೂರು ಸ್ವೀಕಾರ ಸಮಯದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಪ್ರತ್ಯೇಕ ನಾಲ್ಕು ಕೌಂಟರ್ ಸ್ಥಾಪಿಸಲಾಗುವುದು, ಅಲ್ಲಿ ಸಲ್ಲಿಸಲಾಗುವ ದೂರುಗಳಿಗೆ ಸ್ಥಳದಲ್ಲೇ  ಪರಿಹಾರ ಒದಗಿಸಲಾಗುವುದು.  ಸಾರ್ವಜನಿಕರು ಅಹವಾಲು ಹಾಗೂ ದೂರು ಸಲ್ಲಿಸಲು ನಮೂನೆ 1 ಮತ್ತು 2 ಭರ್ತಿ  ಮಾಡುವ ಕುರಿತು  ಲೋಕಾಯುಕ್ತ ಸಿಬ್ಬಂದಿಗಳು ಮಾಹಿತಿ ನೀಡಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು  ಎಂದರು.    

ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಕರ್ನಾಟಕ ಲೋಕಾಯುಕ್ತ ಎಸ್‌.ಪಿ. ಎಂ.ಎಸ್‌.ಕೌಲಾಪುರೆ,   ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್‌. ಉಪಸ್ಥಿತರಿದ್ದರು.  

ಫೆ.12 ರಿಂದ ಫೆ.14ರವರೆಗೆ  ಜಿಲ್ಲೆಯಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳ ಪ್ರವಾಸ 

ಹಾವೇರಿ 31 :  ಮಾನ್ಯ ಉಪಲೋಕಾಯುಕ್ತ  ನ್ಯಾಯಮೂರ್ತಿಗಳಾದ ಬಿ.ವೀರ​‍್ಪ ಅವರು ಫೆಬ್ರವರಿ 12 ರಿಂದ 14ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. 

ಮಾನ್ಯ ಉಪಲೋಕಾಯುಕ್ತ  ನ್ಯಾಯಮೂರ್ತಿಗಳು ಫೆ.11 ರಂದು ರಾತ್ರಿ 11 ಗಂಟೆಗೆ ಬೆಂಗಳೂರಿನಿಂದ ಹೊರಟು, ಫೆ.12 ರಂದು ಬೆಳಿಗ್ಗೆ 4-25ಕ್ಕೆ ಹಾವೇರಿಗೆ ಆಗಮಿಸುವರು. ಅಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಅಂದು  ಮ.1-45 ರಿಂದ  2-45ರವರೆಗೆ  ಹಾವೇರಿ ನಗರದ ನ್ಯಾಯಾಲಯದ  ಆವರಣದಲ್ಲಿರುವ ಹಾವೇರಿ  ಬಾರ್ ಅಸೋಸಿಯೇಷನ್‌ನಲ್ಲಿ ವಕೀಲರೊಂದಿಗೆ ಸಂಹವನ ನಡೆಸಲಿದ್ದಾರೆ. ಮಧ್ಯಾಹ್ನ 2-45 ರಿಂದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ರಾತ್ರಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. 

 ಫೆ.13 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1-30ರವರೆಗೆ ಹಾಗೂ ಮಧ್ಯಾಹ್ನ 2-30 ರಿಂದ  ಸಂಜೆ 5 ಗಂಟೆಗೆವರೆಗೆ  ಹಾವೇರಿ ನಗರದ ಜಿಲ್ಲಾ ಗುರುಭವನದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸಲಿದ್ದಾರೆ.  ಸಂಜೆ 5-30 ರಿಂದ 6-30ರವರೆಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ  ಆಯೋಜಿಸಲಾದ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ಸಂಬಂಧಿಸಿದ ಕಾನೂನು ಸಾಕ್ಷರತಾ ಕಾರ್ಯಕ್ರಮಕ್ಕೆ  ಕಂದಾಯ ಇಲಾಖೆ, ಆರ್‌ಡಿಪಿಆರ್, ಶಿಕ್ಷಣ, ರೇಷ್ಮೆ, ಕೃಷಿ, ತೋಟಗಾರಿಕೆ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು,  ಉಪನೋಂದಣಿ ಅಧಿಕಾರಿ, ಆರ್‌ಟಿಒ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ, ಶಾಲಾ ಶಿಕ್ಷಣ ಇಲಾಖೆ  ಉಪನಿರ್ದೇಶಕರು, ಎಇಒ ಮತ್ತು ಬಿಇಒ  ಭಾಗವಹಿಸಲಿದ್ದಾರೆ. 

ಫೆ.14 ರಂದು  ಬೆಳಿಗ್ಗೆ 10 ರಿಂದ ಮಧ್ಯಾಹ್ನ 1-30ರವರೆಗೆ ಹಾಗೂ ಮಧ್ಯಾಹ್ನ 2-30 ರಿಂದ ಸಂಜೆ 5 ಗಂಟೆವರೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಹಾವೇರಿ ಜಿಲ್ಲೆಗೆ ಸಂಬಂಧಪಟ್ಟ ಲೋಕಾಯುಕ್ತ ಸಂಸ್ಥೆಗಳಲ್ಲಿ ದಾಖಲಾಗಿರುವ(ಗೌರವಾನ್ವಿತ ಉಪ ಲೋಕಾಯುಕ್ತರ ಕಾರ್ಯವ್ಯಾಪ್ತಿಗ ಒಳಪಡುವ ಪ್ರಕರಣಗಳಲ್ಲಿ) ತನಿಖೆ ಮತ್ತು ವಿಚಾರಣೆಗೆ ಬಾಕಿಯಿರುವ ಪ್ರಕರಣಗಳಲ್ಲಿ (ಈಗಾಗಲೇ ಕಚೇರಿಯಿಂದ ನೋಟಿಸ್ ಕಳುಹಿಸಿರುವ) ದೂರುದಾರರು ಹಾಗೂ ಎದುರುಗಾರರ ಸಮ್ಮುಖದಲ್ಲಿ  ಕಾನೂನು ರೀತ್ಯ ವಿಚಾರಣೆ ನಡೆಸಲಿದ್ದಾರೆ.  ಫೆ. 13 ರಂದು ಸಾರ್ವಜನಿಕರು  ನೀಡಿದ ದೂರುಗಳ ಬಾಕಿ ಕುಂದುಕೊರತೆಗಳ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ.  

ಸಂಜೆ 5-45 ರಿಂದ  ರಾತ್ರಿ 7-30ರವರೆಗೆ  ಹಾವೇರಿ ನಗರದ  ಜಿಲ್ಲಾ ನ್ಯಾಯಾಲಯದಲ್ಲಿ ಹಾವೇರಿ ಜಿಲ್ಲೆಯ ನ್ಯಾಯಾಂಗ ಇಲಾಖೆ ಮತ್ತು ಲೋಕಾಯುಕ್ತ ಪೊಲೀಸರ ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸಭೆ ನಡೆಸಲಿದ್ದಾರೆ.  ರಾತ್ರಿ 11-10 ಕ್ಕೆ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.