ಜ್ಞಾನ ವಿಕಾಸ ಕೇಂದ್ರದ ಮೂಲಕ ಮಹಿಳೆಯರು ಅಭಿವೃದ್ಧಿ

ಜ್ಞಾನ ವಿಕಾಸ ಕೇಂದ್ರದ ಮೂಲಕ ಮಹಿಳೆಯರು ಅಭಿವೃದ್ಧಿ  Women development through Knowledge Development Center

ಗದಗ   02: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಜ್ಞಾನ ವಿಕಾಸ ಕೇಂದ್ರದ ಮೂಲಕ ಮಹಿಳೆಯರು ಅಭಿವೃದ್ಧಿ ಹೊಂದುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಮಹಾದೇವಗೌಡ ಪಾಟೀಲ ಹೇಳಿದರು. ಜಿಲ್ಲೆಯ ರೋಣ ತಾಲೂಕಿನ ಸಂದಿಗವಾಡ ಗ್ರಾಮದ ಬೆಂಕಿ ಸ್ವಾಮಿ ಮಠದಲ್ಲಿ ಗುರುವಾರ ನಡೆದ ಕಲ್ಮೇಶ್ವರ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಮಹಿಳೆಯರು ನಾಲ್ಕುಗೋಡೆಯ ಮದ್ಯದಿಂದ ಹೊರಗೆ ಬಂದು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಮಾತೃಶ್ರೀ ಅಮ್ಮನವರ ಜ್ಷಾನವಿಕಾಸ ಕಾರ್ಯಕ್ರಮವು ಪ್ರೇರಣೆ ಎಂದಿಗೆ ಆತ್ಮಸ್ಥರ್ಯವನ್ನು ನೀಡಿದೆ. ಎಲ್ಲರೂ ಇದರ ಪ್ರಯೋಜನವನ್ನು ಪಡೆಯಿರಿ ಎಂದರು.ಮಹಿಳೆಯರು ಆರ್ಥಿಕ, ಬೌದ್ಧಿಕ, ಸಾಮಾಜಿಕ ಬಡತನಗಳನ್ನು ದೂರ ಮಾಡುವ ದೃಷ್ಟಿಯಿಂದ ಜ್ಷಾನ ವಿಕಾಸ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

ಮಹಿಳೆಯರಿಗೆ ಶಿಕ್ಷಣ, ಆರ್ಥಿಕ ನೆರವು ನೀಡಿ ನಿರಂತರ ಬದಲಾವಣೆಗೆ ಪ್ರಯತ್ನಿಸಲಾಗುತ್ತಿದೆ ಎಂದರು.ಶಿಕ್ಷಕ ಎಸ್‌.ಎಚ್‌. ಭಜಂತ್ರಿ ಮಾತನಾಡಿ, ಸ್ವಸಹಾಯ ಸಂಘದ ಸದಸ್ಯರಿಗೆ ಮಕ್ಕಳ ಶಿಕ್ಷಣವನ್ನು ಸರ್ಕಾರಿ ಶಾಲೆಗಳಿಗೆ ಕಲಿಸಬೇಕು. ಜತೆಗೆ ಸಂಸ್ಕೃತಿಯೂ ಮನೆಯ ಮೊದಲ ಪಾಠಶಾಲೆಯಾಗಬೇಕು. ಹೆಣ್ಣು ಮಕ್ಕಳನ್ನು ಒಳ್ಳೆಯ ಗುಣಗಳನ್ನು ಬೆಳೆಸಬೇಕೆಂದು ಮಾಹಿತಿ ನೀಡಿದರು. ಎಂ.ಟಿ. ವಾಲ್ಮೀಕಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹತ್ತು ಹಲವಾರು ಯೋಜನೆ ಜಾರಿಗೆ ತರುವ ಮೂಲಕ ಆರ್ಥಿಕವಾಗಿ ಮಹಿಳೆಯರು ಸಬಲರಾಗುವಂತೆ ಮಾಡಿದೆ.

ಸರಕಾರ ಮಾಡುವ ಕೆಲಸವನ್ನು ಡಾ.ಡಿ.ವೀರೇಂದ್ರ ಹೆಗ್ಗಡೆವರು ಮಾಡುತ್ತಿದ್ದಾರೆ ಎಂದರು.ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡೆಯಬೇಕು. ಸಂಘದ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.  ವಲಯದ ಮೇಲ್ವಿಚಾರಕ ಬಡಿಗೇರ, ಕ್ಷೇತ್ರ  ಯೋಜನಾಧಿಕಾರಿ ಮಹಾಬಲೇಶ್ವರ ಪಟೇಗಾರ, ಶಿವನಗೌಡ ಪಾಟೀಲ, ತಾಲೂಕಿನ ಸಮನ್ವಯಾಧಿಕಾರಿ ಲಕ್ಷ್ಮೀ, ಸ್ಥಳೀಯ ಸೇವಾ ಪ್ರತಿನಿಧಿ ಸುಮಾ, ಪ್ರಗತಿ ಬಂದು ಸಂಘದ ಸದಸ್ಯ ಲೋಕಪ್ಪ ಜಾಲಿಹಾಳ ಸೇರಿದಂತೆ ಗ್ರಾಮಸ್ಥರು ಇದ್ದರು.