ಬಾಂಧಾರಗಳಿಗೆ ನೀರು, ರೈತರಲ್ಲಿ ಹೊಮ್ಮಿದ ಸಂತಸ !

ಬಾಂಧಾರಗಳಿಗೆ ನೀರು, ರೈತರಲ್ಲಿ ಹೊಮ್ಮಿದ ಸಂತಸ ! Water in the check dams—joy among the farmers!

ಲೋಕದರ್ಶನ ವರದಿ 

ರಬಕವಿ-ಬನಹಟ್ಟಿ 03 : ತಾಲೂಕಿನ ವಿವಿಧ ಭಾಗಗಳಿಗೆ ಘಟಪ್ರಭಾ ಎಡದಂಡೆ ಕಾಲುವೆಗಳ ಮೂಲಕ ಬಾಂಧಾರಗಳಿಗೆ ನೀರು ಹರಿಸಲಾಗಿರುವ ಹಿನ್ನೆಲೆಯಲ್ಲಿ ರೈತರಲ್ಲಿ ಸಂತಸದ ನಗೆಯರಳಿದೆ. ಮುಂಗಾರು ಹಂಗಾಮಿನ ಬೆಳೆಗಳಿಗೆ ಇದು ಸಾಕಷ್ಟು ಅನುಕೂಲವಾಗಿದ್ದು, ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆತಿದೆ ಎಂದು ರೈತರು ತಿಳಿಸಿದ್ದಾರೆ. 

ತಾಲೂಕಿನ ಅನೇಕ ಗ್ರಾಮಗಳ ಬಾಂಧಾರಗಳಿಗೆ ನೀರು ತಲುಪಿರುವುದರಿಂದ ಹೊಲಗಳಲ್ಲಿ ತೇವಾಂಶ ಹೆಚ್ಚಾಗಿದೆ. ಇದರಿಂದ ಮುಂಗಾರು ಬೆಳೆಗಳಾದ ಸಜ್ಜಿ, ಮೆಕ್ಕೆಜೋಳ, ತೊಗರಿ, ಹೆಸರು ಸೇರಿದಂತೆ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ರೈತರು ಆತಂಕದಲ್ಲಿದ್ದರು. ಇದೀಗ ಕಾಲುವೆ ನೀರು ಹರಿದು ಬಂದಿರುವುದು ಕೃಷಿಕರಿಗೆ ದೊಡ್ಡ ನೆಮ್ಮದಿ ತಂದಿದೆ. 

ಸರ್ಕಾರದ ಆದೇಶದ ಮೇರೆಗೆ ಈ ಬಾರಿ ನೀರನ್ನು ಮುಖ್ಯವಾಗಿ ಬಾಂಧಾರಗಳ ಮುಖಾಂತರ ಜಾನುವಾರುಗಳ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಹರಿಸಲಾಗುತ್ತಿದೆ. ಆದ್ದರಿಂದ ರೈತರು ನೀರನ್ನು ಮಿತವಾಗಿ ಹಾಗೂ ಸಮರ​‍್ಕವಾಗಿ ಬಳಸಬೇಕು ಎಂದು ಜಿಎಲ್‌ಬಿಸಿ ಅಧಿಕಾರಿಗಳು ಮನವಿ ಮಾಡಿದ್ದಾರೆ. 

ಈ ಕುರಿತು ಜಿಎಲ್‌ಬಿಸಿ ಅಧಿಕಾರಿ ಶ್ರೀಧರ ನಂದಿಹಾಳ ಪತ್ರಿಕೆಯೊಂದಿಗೆ ಮಾತನಾಡಿ, ಸರ್ಕಾರದ ಸೂಚನೆಯಂತೆ ಬಾಂದಾರಗಳಿಗೆ ನೀರು ಹರಿಸಲಾಗುತ್ತಿದೆ. ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ನೀರು ಬಿಡುಗಡೆ ಮಾಡಲಾಗುತ್ತಿದ್ದು, ರೈತರು ಅನಾವಶ್ಯಕವಾಗಿ ನೀರನ್ನು ವ್ಯರ್ಥ ಮಾಡದೆ ಬೆಳೆಗಳಿಗೆ ಅಗತ್ಯವಿರುವಷ್ಟು ಮಾತ್ರ ಬಳಸಿಕೊಳ್ಳಬೇಕು, ಉಳಿದಂತೆ ಜನಜಾನುವಾರುಗಳಿಗೆ ಮಾತ್ರ ಎಂದು ಸರ್ಕಾರ ಖಡಕ್ಕಾಗಿ ಸುತ್ತೋಲೆ ಹೊರಡಿಸಿದೆ, ರೈತರು ಇದನ್ನು ಗಮನಿಸಿಬೇಕು ಎಂದು ತಿಳಿಸಿದರು. 

ಕಾಲುವೆ ನೀರು ಬಾಂಧಾರಗಳಿಗೆ ಹರಿದಿರುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಕೂಡ ಬಹುತೇಕ ನಿವಾರಣೆಯಾಗಿದೆ. ನೀರಿನ ಲಭ್ಯತೆಯಿಂದ ಕೃಷಿ ಕಾರ್ಯಗಳಿಗೆ ವೇಗ ಸಿಕ್ಕಿದ್ದು, ಮುಂಗಾರು ಹಂಗಾಮಿನಲ್ಲಿ ಉತ್ತಮ ಇಳುವರಿ ದೊರೆಯುವ ನೀರೀಕ್ಷೆ ಇದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.