ರೈತರ ಮಾಗಾಣಿ ಬನವಾಸಿ ಸಿಸಿ ರಸ್ತೆ ಅಭಿವೃದ್ಧಿಗೆ ಶಾಸಕ ಗಣೇಶ ಶಂಕುಸ್ಥಾಪನೆ

MLA Ganesh lays foundation stone for development of Banavasi CC road, farmers' market

ಕಂಪ್ಲಿ  14:  ಪಟ್ಟಣದ ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ಬಳಿಯಲ್ಲಿ 2024-25ನೇ ಸಾಲಿನ ಕಲ್ಯಾಣ ಪಥ ಯೋಜನೆಯಡಿ ಸುಮಾರು 509.9 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಕೋಟೆಯಿಂದ ರಾಮಸಾಗರವರೆಗಿನ ಬನವಾಸಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್‌.ಗಣೇಶ ಶನಿವಾರ ಭೂಮಿ ಪೂಜೆ ಸಲ್ಲಿಸಿದರು.

ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಕಂಪ್ಲಿ-ಕೋಟೆ ಪ್ರದೇಶದಿಂದ ರಾಮಸಾಗರವರೆಗೆ ಸಿಸಿ ರಸ್ತೆ ಮಾಡಲಾಗುತ್ತಿದ್ದು, ಇಲ್ಲಿನ ರೈತರು ಸಹಕಾರದಿಂದ ಒಳ್ಳೆಯ ರಸ್ತೆ ಮಾಡಿಸಿಕೊಳ್ಳಬೇಕು. ಉಳಿದ ಬನವಾಸಿ ರಸ್ತೆಯನ್ನು ಕೆಕೆಆರ್‌ಡಿಬಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು. ಅತಿ ಶೀಘ್ರದಲ್ಲೇ ಜವುಕು-ದೇವಸಮುದ್ರ, ಸೋಮಸಮುದ್ರ-ಮದುರೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಇಡಿ ಅಧಿಕಾರಿಗಳು ಮನೆಗೆ ದಾಳಿ ಮಾಡಿದಾಗ ಮಹಜರು ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ, ಕೆಲವೊಂದು ಪತ್ರಿಕೆಯಲ್ಲಿ 5 ಕೆಜಿ ಬಂಗಾರ, 200 ಎಕರೆ ಭೂಮಿ ದಾಖಲೆಗಳು ಸಿಕ್ಕಿವೆ ಎಂದು ಸುಳ್ಳು ಸುದ್ದಿ ಬಿತ್ತರಿಸಿದ್ದು, ಇಂತಹವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ಮಾಧ್ಯಮದ ಮೇಲೆ ನಂಬಿಕೆ ಇದೆ. ಆದರೆ, ಸುಳ್ಳು ವರದಿ ಮಾಡಿದರೆ ನಂಬಿಕೆ ಉಳಿಯುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಲೊಡ್ಡು ಹೊನ್ನೂರವಲಿ, ಸಿ.ಆರ್‌.ಹನುಮಂತ, ರೈತ ಸಂಘದ ಅಧ್ಯಕ್ಷ ನವೀನ್ ಮಣ್ಣೂರು, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಕೆ.ಚಂದ್ರಶೇಖರ, ಹೊನ್ನೂರವಲಿ, ವಾಬುಸಾಬ್, ಕೆ.ಮಂಜು, ಎ.ಪರಶಪ್ಪ, ಶಂಕರ್, ಕೆ.ಷಣ್ಮುಕಪ್ಪ, ಕರಿಬಸವನಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.