ಭಾವೈಕ್ಯತೆ, ಸೌಹಾರ್ದತೆಯಿಂದ ಬದುಕಬೇಕು: ಅಜ್ಜಂಪೀರ್ ಖಾದ್ರಿ

ಭಾವೈಕ್ಯತೆ, ಸೌಹಾರ್ದತೆಯಿಂದ ಬದುಕಬೇಕು: ಅಜ್ಜಂಪೀರ್ ಖಾದ್ರಿ  Live with spirituality, harmony: Ajjampir Qadri


ಶಿಗ್ಗಾವಿ, ಸೆ.6: ಪಟ್ಟಣದ ಟೆಂಪೋ ನಿಲ್ದಾಣದಲ್ಲಿ ನಡೆದ ಅನ್ಯಕೋಮಿನ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಶನಿವಾರ ದೇವಸ್ಥಾನದಲ್ಲಿ ಶುದ್ಧೀಕರಣ ಕಾರ್ಯ ನಡೆಯಿತು.  

ಬೆಳಗ್ಗೆಯಿಂದಲೇ ಹೋಮ-ಹವನ, ಅಭಿಷೇಕ, ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ದೇವಸ್ಥಾನದ ಶುದ್ಧೀಕರಣ ಕಾರ್ಯ ಕೈಗೊಳ್ಳಲಾಯಿತು.  

ಮಾಜಿ ಶಾಸಕ ಹಾಗೂ ಹೆಸ್ಕಾಂ ಅಧ್ಯಕ್ಷ ಸಯ್ಯದ್ ಅಜ್ಜಂಪೀರ್ ಖಾದ್ರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪ್ರಸಾದ ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವಸ್ಥಾನದ ಶುದ್ಧೀಕರಣ ಕಾರ್ಯವು ಸಂಪನ್ನವಾಗಿದೆ. ನಾವೆಲ್ಲರೂ ಸೌಹಾರ್ದತೆ ಮತ್ತು ಭಾವೈಕ್ಯತೆಯಿಂದ ಬದುಕಬೇಕು. ಭಾವೈಕ್ಯತೆಯ ನೆಲದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಹೇಳಿದರು.  

ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದು, ವಿಶೇಷವಾಗಿ ರೈತಾಪಿ ಜನರಿಗೆ ಒಳಿತಾಗಬೇಕು ಹಾಗೂ ದೇವಸ್ಥಾನವು ಇನ್ನಷ್ಟು ಅಭಿವೃದ್ಧಿಯಾಗಬೇಕು ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.  

ಈ ಸಂದರ್ಭದಲ್ಲಿ ಗಂಜಿಗಟ್ಟಿ ಮಠದ ಡಾ. ವೈಜನಾಥ ಶಿವಾಚಾರ್ಯ ಮಹಾಸ್ವಾಮಿಗಳು, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಶಿವಪ್ರಸಾದ ಸುರಗಿಮಠ, ನಗರದ ಹಿರಿಯರು, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಟೆಂಪೋ ಚಾಲಕ-ಮಾಲೀಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.