ಭಾರತದ ಗತವೈಭವ ಮರುಕಳಿಸುತ್ತದೆ: ಶ್ರೀನಿವಾಸ ಪಾಟೀಲ

ಭಾರತದ ಗತವೈಭವ ಮರುಕಳಿಸುತ್ತದೆ: ಶ್ರೀನಿವಾಸ ಪಾಟೀಲ India's past glory will be repeated: Srinivas Patil

ಲೋಕದರ್ಶನ ವರದಿ 

ಮಹಾಲಿಂಗಪುರ 08 : ಪಂಚಮುಖಿ ಶಿಕ್ಷಣವು ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಮಗುವಿನ ಸಮಗ್ರ, ಸವಾಂರ್ಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ ಭಾರತಿ ವಿಭಾಗ ಸಂಯೋಜಕ ಶ್ರೀನಿವಾಸ ಪಾಟೀಲ ಹೇಳಿದರು. ಸ್ಥಳೀಯ ಅಕ್ಷರ ವಿದ್ಯಾವಿಹಾರ ಮಾಡರ್ನ್‌ ಶಾಲೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ ಭಾರತಿ ವತಿಯಿಂದ ಜರುಗಿದ ಶಿಕ್ಷಕರ ಸಬಲೀಕರಣ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಮಗುವಿನಲ್ಲಿಯೂ ಅದಮ್ಯ ಶಕ್ತಿ ಇರುತ್ತದೆ ಅದನ್ನು ಹೊರ ತಂದು ಆ ಮಗು ದೇಶದ ಶಕ್ತಿಯಾಗಿ ಬೆಳೆಯಲು 5 ಆಯಾಮಗಳಲ್ಲಿ ತರಬೇತಿ ನೀಡಿದಾಗ ಮಗು ವ್ಯಕ್ತಿಯಾಗುವ ಬದಲು ಶಕ್ತಿಯಾಗುತ್ತದೆ.

ಪ್ರತಿಯೊಂದು ಮಗುವು ಈ ದೇಶದ ಆಸ್ತಿಯಾಗಬೇಕು ಆ ಮೂಲಕ ಸಮೃದ್ಧ ರಾಷ್ಟ್ರ ನಿರ್ಮಾಣವಾಗಬೇಕು, ಭಾರತ ಮತ್ತೆ ವಿಶ್ವಗುರುವಾಗಬೇಕು ಎಂಬ ಉದ್ದೇಶದೊಂದಿಗೆ ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ ಭಾರತಿ ನಿರಂತರವಾಗಿ ಶ್ರಮಿಸುತ್ತಿದ್ದು ಸಾಹಿತ್ಯ, ಶಿಕ್ಷಣ, ಸೇವೆ, ಆರೋಗ್ಯ ಈ ನಾಲ್ಕು ಆಯಾಮಗಳಲ್ಲಿಯೂ ನಿರಂತರ ದುಡಿಯುತ್ತಿದ್ದು ಸ್ವಸ್ಥ ಸಮಾಜ, ಸಮೃದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ದುಡಿಯುತ್ತಿದೆ. ಸಮಾಜದ ಸರ್ವರೂ ಕೈಜೋಡಿಸಿ, ಭಾರತದ ಗತವೈಭವ ಮರುಕಳಿಸುವ ಕಾಲ ಸನ್ನಿಹಿತವಾಗಿದೆ ಎಂದರು. 

ಪ್ರಶಿಕ್ಷಣ ಭಾರತಿ ಸಂಪನ್ಮೂಲ ವ್ಯಕ್ತಿ ಸಪನಾ ಅನಿಗೋಳ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಕಾರ ಕೇಂದ್ರಿತ ಚಟುವಟಿಕೆಗಳ ಬಗ್ಗೆ ಪ್ರಾಯೋಗಿಕವಾಗಿ ವಿವರಿಸಿದರು. ಮದರಖಂಡಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಮತ್ತು ಸಂಪನ್ಮೂಲ ವ್ಯಕ್ತಿ ಡಿ.ಬಿ.ಹಿರೇಮಠ ಸಮರ್ಥ ಶಿಕ್ಷಕ ಎಂಬ ವಿಷಯದ ಮೇಲೆ ಮತ್ತು ಸಾವಳಗಿ ವಲಯ ಸಂಪನ್ಮೂಲ ವ್ಯಕ್ತಿ ಮತ್ತು ಪ್ರಶಿಕ್ಷಣ ಭಾರತಿ ಸಂಪನ್ಮೂಲ ವ್ಯಕ್ತಿ ರಘು ಹಿರೇಮಠ ವೇದ ಗಣಿತ ವಿಷಯ ಕುರಿತು ತರಬೇತಿ ನೀಡಿದರು. ರಾಷ್ಟ್ರೋತ್ಥಾನ ಪರಿಷತ್ ಜಿಲ್ಲಾ ಸಹ ಸಂಚಾಲಕ ನಾರನಗೌಡ ಉತ್ತಂಗಿ ಸಮಾರೋಪ ನುಡಿ ಆಡಿದರು. ಪ್ರಶಿಕ್ಷಣ ಭಾರತಿ ಸಂಪನ್ಮೂಲ ವ್ಯಕ್ತಿ ಪ್ರೀತಿ ಕಲ್ಯಾಣಿ, ಪ್ರಾಂಶುಪಾಲ ಶರಣು ಅಂಗಡಿ, ಪ್ರಶಿಕ್ಷಣ ಭಾರತಿ ಬಾಗಲಕೋಟ ಜಿಲ್ಲಾ ಸಂಯೋಜಕ ಹನಮಂತ ನಾಗರಾಳ , ಸಂಸ್ಥೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು.