ಎಪಿಎಂಸಿ ನಿಯಮ ಉಲ್ಲಂಘನೆ ಆರೋಪ: ಬ್ಯಾಂಕ್ ಕಟ್ಟಡ ಪರೀಶೀಲನೆ

ಎಪಿಎಂಸಿ ನಿಯಮ ಉಲ್ಲಂಘನೆ ಆರೋಪ: ಬ್ಯಾಂಕ್ ಕಟ್ಟಡ ಪರೀಶೀಲನೆ  Allegation of APMC rule violation: Inspection of bank building

ತಾಳಿಕೋಟಿ 05:  ವಿಜಯಪುರ ನಗರದ ಎಪಿಎಂಸಿ ಮುಖ್ಯ ಪ್ರಾಂಗಣದ ನಿವೇಶನ ಸಂಖ್ಯೆ 27ರಲ್ಲಿ ನಿರ್ಮಾಣಗೊಂಡಿರುವ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಕಟ್ಟಡ ಹಾಗೂ ಅದರಲ್ಲಿನ ವಾಣಿಜ್ಯ ಮಳಿಗೆಗಳ ನಿರ್ಮಾಣದಲ್ಲಿ ಎಪಿಎಂಸಿ ಕಾಯ್ದೆ ಮತ್ತು ನಿಯಮಾವಳಿ ಉಲ್ಲಂಘನೆಯಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಎಪಿಎಂಸಿ ಬೆಳಗಾವಿ ವಿಭಾಗೀಯ ಹೆಚ್ಚುವರಿ ನಿರ್ದೇಶಕ ಡಾ. ಕೊಡಿಗೌಡ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.  

ಸಾಮಾಜಿಕ ಕಾರ್ಯಕರ್ತ ಗುರಲಿಂಗಪ್ಪ ಗುನ್ನಾಪೂರ ಸಲ್ಲಿಸಿದ ದೂರಿನಲ್ಲಿ, ರೈತರ ಹಿತಕ್ಕಾಗಿ ಮೀಸಲಿರಬೇಕಾದ ನಿವೇಶನವನ್ನು ಬ್ಯಾಂಕ್ಗೆ ನೀಡಿದ್ದು, ಕಟ್ಟಡದಲ್ಲಿ 11 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ಮೂಲಕ ಆದಾಯ ಗಳಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.  

ಪರೀಶೀಲನೆ ಬಳಿಕ ಮಾತನಾಡಿದ ಡಾ. ಕೊಡಿಗೌಡ, ಪ್ರಾಥಮಿಕ ಪರೀಶೀಲನೆಯಲ್ಲಿ ನಿಯಮ ಉಲ್ಲಂಘನೆಯ ಲಕ್ಷಣಗಳು ಕಂಡುಬಂದಿದ್ದು, ಸಮಗ್ರ ವರದಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು. ಅಲ್ಲಿಂದ ಬರುವ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  ಈ ವೇಳೆ ಎಪಿಎಂಸಿ ಕಾರ್ಯದರ್ಶಿ ಆರ್‌.ಎಸ್‌. ರಾಠೋಡ್, ಬ್ಯಾಂಕ್ ಅಧ್ಯಕ್ಷ ಕಾಶಿನಾಥ ಮುರಾಳ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.