ನಿರ್ಭೀತಿಯಿಂದ ಮತ ಚಲಾಯಿಸಿ: ಸುಭಾಷ್ ಸಂಪಗಾಂವಿ

ಕಿತ್ತೂರು 25: ಎಲ್ಲ ದಾನಗಳಲ್ಲಿ ಮತದಾನ ಶ್ರೇಷ್ಠವಾದದ್ದು, ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ಎಲ್ಲರೂ ಮತದಾನ ಮಾಡಬೇಕೆಂದು ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾ ಹಕ ಅಧಿಕಾರಿಗಳಾದ ಸುಭಾಷ್ ಸಂಪಗಾಂವಿ ಅವರು  ಹೇಳಿದರು. 

ತಾಲೂಕು ಪಂಚಾಯತಿ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ತಾಲೂಕಿನ ತುರಮರಿ ಗ್ರಾಮ ಪಂಚಾಯತಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಅಭಿಯಾನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಮಹಿಳೆಯರು ಮತದಾನ ವಿಷಯದಲ್ಲಿ ಹಿಂಜರಿಯದೇ ಮುಕ್ತವಾಗಿ ಮತದಾನ ಮಾಡಬೇಕು. ಸಂವಿಧಾನ ನೀಡಿರುವ ನಿಮ್ಮ ಹಕ್ಕನ್ನು ನೀವು ತಪ್ಪದೇ ಚಲಾಯಿಸಬೇಕು ಎಂದರು. 

ಮತದಾನ ಜಾಗೃತಿಗಾಗಿ ಮಹಿಳೆಯರಿಂದ ರಂಗೋಲಿ ಸ್ಪರ್ಧೆ  ಏರ್ಪಡಿಸಲಾಯಿತು. ಮಹಿಳೆಯರು ಆಸಕ್ತಿಯಿಂದ ಪಾಲ್ಗೊಂಡು ಮತದಾನದ ಮಹತ್ವ ಸಾರುವ ಘೋಷಣೆ ಹಾಗೂ ಚಿತ್ರಗಳನ್ನು ರಂಗೋಲಿಯಲ್ಲಿ ಆಕರ್ಷಕವಾಗಿ ಬಿಡಿಸಿ ಜಾಗೃತಿ ಮೂಡಿಸಿದರು.  

ನರೇಗಾ ಸಹಾಯಕ ನಿರ್ದೇಶಕರು ಲಿಂಗರಾಜ ಹಲಕರ್ಣಿಮಠ, ಐಇಸಿ ಸಂಯೋಜಕಿ ಎಸ್.ಬಿ.ಜವಳಿ, ಪಿಡಿಓ ಸುಭಾಷ ದಾನಪ್ಪನವರ, ಕಾರ್ಯದರ್ಶಿ ಮಹಾಂತೇಶ ಇಟಗಿ, ಕಲ್ಲಪ್ಪ ಚಕಡಿ, ಪಡದಯ್ಯ ಚಿಕ್ಕಮಠ,  ಅನ್ನಪೂರ್ಣ ವಕ್ಕುಂದ, ಭಾಗ್ಯಲಕ್ಷ್ಮೀ ಬಿ ಎಚ್,  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.