ಶರಣರ ಕೊಡುಗೆ ಅಪಾರ: ಚೆನ್ನವೀರ ಮಹಾಸ್ವಾಮೀಜಿ

ಶರಣರ ಕೊಡುಗೆ ಅಪಾರ: ಚೆನ್ನವೀರ ಮಹಾಸ್ವಾಮೀಜಿ  The contribution of the Sharanas is immense: Chennaveera Mahaswamiji

ಲಕ್ಷ್ಮೇಶ್ವರ, ಜು.24: "ಶರಣರಿಗೆ ಮರಣವೇ ಮಹಾನವಮಿ. ಅವರು ತಮ್ಮ ಸತ್ಕಾರ್ಯಗಳ ಮೂಲಕ ಮರಣಾನಂತರವೂ ಜನಮನಗಳಲ್ಲಿ ಬದುಕಿರುತ್ತಾರೆ. ಅವರ ಬದುಕಿನ ದಾರಿ ಇತರರಿಗೆ ಮಾದರಿಯಾಗಿದೆ" ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚೆನ್ನವೀರ ಮಹಾಸ್ವಾಮೀಜಿ ಹೇಳಿದರು.  

ತಾಲೂಕಿನ ರಾಮಗಿರಿ ಗ್ರಾಮದಲ್ಲಿ ದಿವಂಗತ ವೀರನಗೌಡ ಬಸನಗೌಡ ಪಾಟೀಲ ಅವರ ಭಾವನಮನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಸಮಾಜಮುಖಿ ಕಾರ್ಯಗಳಿಂದ ವ್ಯಕ್ತಿಯ ಹೆಸರು ಶಾಶ್ವತವಾಗುತ್ತದೆ ಎಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಜಿ.ಎಸ್‌. ಗಡ್ಡದೇವರಮಠ, "ರಾಮಗಿರಿಯಂತಹ ಗ್ರಾಮೀಣ ಭಾಗದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಮಾರು ಎರಡು ಕೋಟಿ ರೂ. ಮೌಲ್ಯದ 1 ಎಕರೆ 10 ಗುಂಟೆ ಜಮೀನು ದಾನ ಮಾಡಿದ ವೀರನಗೌಡ ಪಾಟೀಲ ಅವರ ಸೇವೆ ಸದಾ ಸ್ಮರಣೀಯ" ಎಂದು ಹೇಳಿದರು.  

ಸಮಾಜಸೇವಕ ಉಮೇಶ ಶೆಟ್ಟಿ ಮಾತನಾಡಿ, "ವೀರನಗೌಡ ಪಾಟೀಲ ಅವರ ಪುತ್ರ, ಪೊಲೀಸ್ ಇಲಾಖೆಯ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರು ಅತ್ಯುತ್ತಮ ಸೇವೆಗಾಗಿ ಎರಡು ರಾಷ್ಟ್ರಪತಿ ಪ್ರಶಸ್ತಿ ಹಾಗೂ ಒಂದು ರಾಜ್ಯ ಪ್ರಶಸ್ತಿ ಪಡೆದಿದ್ದು, ಅವರ ಸಾಧನೆಗೆ ತಂದೆಯೇ ಪ್ರೇರಣೆಯಾಗಿದ್ದರು" ಎಂದು ಹೇಳಿದರು.  

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ. ಆರ್‌.ಎನ್‌. ತೇಲ್ಕರ್, ವಿದ್ಯಾಪೀಠದ ಅಧ್ಯಕ್ಷ ಮಹಾಬಲೇಶ್ವರ​‍್ಪ ಬೇವಿನಮರದ, ಶಿಕ್ಷಕಿ ಮೈತ್ರಾದೇವಿ ಹಿರೇಮಠ ಸೇರಿದಂತೆ ಹಲವರು ಮಾತನಾಡಿ, ವೀರನಗೌಡ ಪಾಟೀಲ ಅವರ ಸಮಾಜಸೇವೆ ಮತ್ತು ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.  

ಕಾರ್ಯಕ್ರಮದಲ್ಲಿ ವೈದ್ಯ ಡಾ. ಎಸ್‌.ಬಿ. ಗುಡಗೇರಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯೆ ಜಯಶ್ರೀ ಹಿರೇಮಠ, ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ರಾಗಿ, ನಿವೃತ್ತ ಮುಖ್ಯ ಶಿಕ್ಷಕಿ ಗಂಗಮ್ಮ ಕಾಳೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.  

ಆರಂಭದಲ್ಲಿ ದಿವಂಗತ ವೀರನಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು. ಡಿವೈಎಸ್ಪಿ ಶಂಕರಗೌಡ ಪಾಟೀಲ ವಂದಿಸಿದರು. ಶಿಕ್ಷಕ ಶಿವಣ್ಣ ಬೆಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಬಿ.ಎಫ್‌. ಹೆಬ್ಬಾಳ, ಬಸವರಾಜ ಗಾಳಗನಾಥ ಹಾಗೂ ಮಂಜುನಾಥ ಅಂಗಡಿ ನಿರೂಪಿಸಿದರು.