ಶಿಕ್ಷಕರು ಸಮಾಜದ ಬೆನ್ನೆಲುಬು: ಸುನೀಲ ಮಹಾಂತಶೆಟ್ಟರ

ಶಿಕ್ಷಕರು ಸಮಾಜದ ಬೆನ್ನೆಲುಬು: ಸುನೀಲ ಮಹಾಂತಶೆಟ್ಟರ  Teachers are the backbone of society: Sunil Mahantashettar


ಲಕ್ಷ್ಮೇಶ್ವರ, ಸೆ. 6: ಶಿಕ್ಷಕರು ಸಮಾಜದ ಬೆನ್ನೆಲುಬಾಗಿದ್ದು, ದೇಶದ ಭವಿಷ್ಯ ನಿರ್ಮಿಸುವ ಮಹತ್ತರ ಜವಾಬ್ದಾರಿ ಅವರ ಮೇಲಿದೆ ಎಂದು ಯುವ ಮುಖಂಡ ಸುನೀಲ ಗಂಗಣ್ಣ ಮಹಾಂತಶೆಟ್ಟರ ಹೇಳಿದರು.  ದೇಶದ ಗಡಿಯಲ್ಲಿ ಸೈನಿಕರು ದೇಶವನ್ನು ಕಾಯುತ್ತಿದ್ದರೆ, ರೈತರು ಜನರ ಬದುಕಿಗೆ ಅನ್ನ ನೀಡುತ್ತಾರೆ. ಅದೇ ರೀತಿ ತರಗತಿಯ ನಾಲ್ಕು ಗೋಡೆಗಳ ನಡುವೆ ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುತ್ತಾರೆ. ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ಶಿಕ್ಷಕರನ್ನು ಸನ್ಮಾನಿಸುವುದು ನಮ್ಮೆಲ್ಲರ ಸೌಭಾಗ್ಯ ಎಂದರು.  

ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ‘ಮಾಸದ ಮಾತು’ ಕಾರ್ಯಕ್ರಮದ ಸರಣಿಯ 40ನೇ ಕಾರ್ಯಕ್ರಮವಾಗಿ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಹಿರಿಯ ಗುರುಚೇತನ: ್ಠದ್ಝ್ಣಿುಹ್ಠ್ಕ್ಲ್ಕ್ಣಿೂ' ಕಾರ್ಯಕ್ರಮದಲ್ಲಿ 94 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿರುವ ಆದರ್ಶ ಶಿಕ್ಷಕ ಬಿ.ಎ. ಮುಳ್ಳಳ್ಳಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.  

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್‌.ಕೆ. ಹವಾಲ್ದಾರ, ನಾಡಿಗೆ ವಿ.ಪಿ. ಬಲಿಗಾರ ಅವರಂತಹ ಶ್ರೇಷ್ಠ ಐಎಎಸ್ ಅಧಿಕಾರಿಗಳನ್ನು ನೀಡಿದ ಕೀರ್ತಿ ಹಿರಿಯ ಗುರು ಬಿ.ಎ. ಮುಳ್ಳಳ್ಳಿ ಅವರಿಗೆ ಸಲ್ಲುತ್ತದೆ ಎಂದರು.  

ಮತ್ತೋರ್ವ ಮುಖ್ಯ ಅತಿಥಿ, ನಿವೃತ್ತ ಶಿಕ್ಷಣ ಸಂಯೋಜಕ ಐ.ಎಸ್‌. ಮಡಿವಾಳರ ಮಾತನಾಡಿ, ಅಪಾರ ಶಿಷ್ಯ ಬಳಗ ಹೊಂದಿರುವ ಮುಳ್ಳಳ್ಳಿ ಗುರುಗಳು ಒಬ್ಬ ಮಾದರಿ ಶಿಕ್ಷಕರಾಗಿದ್ದಾರೆ. 94ರ ಹರೆಯದಲ್ಲಿಯೂ ಅವರ ಜೀವನೋತ್ಸಾಹ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ನೀಲಪ್ಪ ಹತ್ತಿ ಗುರು ವಂದನಾ ನುಡಿಗಳನ್ನಾಡಿದರು.  

ಕಸಾಪ ಹಾಗೂ ಶಿಷ್ಯ ಬಳಗದ ವತಿಯಿಂದ ಹಿರಿಯ ಗುರು ಬಿ.ಎ. ಮುಳ್ಳಳ್ಳಿ ಅವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು. ಕಸಾಪ ಪದಾಧಿಕಾರಿಗಳಾದ ಶಿಕ್ಷಕ ಈರಣ್ಣ ಗಾಣಿಗೇರ ಸ್ವಾಗತಿಸಿದರು. ಶಂಕರ ಶಿಳ್ಳಿನ ಹಾಗೂ ಎನ್‌.ಪಿ. ಪಾಟೀಲಗೌಡ್ರ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.  

ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರಾಜಣ್ಣ ಮುಳ್ಳಳ್ಳಿ ವಂದಿಸಿದರು. ನಿವೃತ್ತ ಶಿಕ್ಷಕ ವಿ.ಎಂ. ಹೂಗಾರ ಗುರು ವಂದನಾ ಗೀತೆಯನ್ನು ಪ್ರಸ್ತುತಪಡಿಸಿದರು.  

ಕಾರ್ಯಕ್ರಮದಲ್ಲಿ ಗಣ್ಯರಾದ ಶಿವು ವಡಕಣ್ಣವರ, ಈರಣ್ಣ ಬೆಳವಗಿ, ಪ್ರಿಯಾಂಕಾ ಮುಳ್ಳಳ್ಳಿ, ಶಿಕ್ಷಕಿ ವೀಣಾ ಜಾಧವ, ಪ್ರವೀಣಕುಮಾರ ಮುಳ್ಳಳ್ಳಿ, ದೇವೇಂದ್ರಗೌಡ ಪಾಟೀಲ, ನಾಗನಗೌಡ ಪಾಟೀಲ, ರವಿ ತಂತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.