ರಾಷ್ಟ್ರಪತಿ ಭವನದ ರಕ್ಷಾಬಂಧನ ಕಾರ್ಯಕ್ರಮಕ್ಕೆ ಮಹಾಲಿಂಗಪುರದ ವಿದ್ಯಾರ್ಥಿನಿ ಆಯ್ಕೆ

 ರಾಷ್ಟ್ರಪತಿ ಭವನದ ರಕ್ಷಾಬಂಧನ ಕಾರ್ಯಕ್ರಮಕ್ಕೆ ಮಹಾಲಿಂಗಪುರದ ವಿದ್ಯಾರ್ಥಿನಿ ಆಯ್ಕೆ  Student from Mahalingapura selected for Raksha Bandhan event at Rashtrapati Bhavan

ಲೋಕದರ್ಶನ ವರದಿ 

ಮಹಾಲಿಂಗಪುರ, ಆ. 26: ಸಹೋದರತ್ವದ ಪ್ರತೀಕವಾದ ರಕ್ಷಾಬಂಧನದ ಅಂಗವಾಗಿ ಆಗಸ್ಟ್‌ 28ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ವಿಶೇಷ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಹಾಲಿಂಗಪುರದ ಅಂತರರಾಷ್ಟ್ರೀಯ ಶಾಲೆಯ 10ನೇ ತರಗತಿ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ದಿಯಾ ಹುಮಾಯೂನ್ ಸುತಾರ್ ಆಯ್ಕೆಯಾಗಿದ್ದಾರೆ.  

ನಗರದ ಖ್ಯಾತ ಪ್ರವಚನಕಾರ ದಿ. ಇಬ್ರಾಹಿಂ ಸುತಾರ್ ಅವರ ಮೊಮ್ಮಗಳಾದ ದಿಯಾ ಹುಮಾಯೂನ್ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.  ಇವರೊಂದಿಗೆ ಶಾಲೆಯ 6ನೇ ತರಗತಿಯ ಕುಮಾರಿ ಕೃತಿಕಾ ಅಜಿತ್ ಕಾಸರ್, 7ನೇ ತರಗತಿಯ ಕುಮಾರಿ ವಿಜಯಲಕ್ಷ್ಮೀ ರಾಜೇಂದ್ರ ಆಸಂಗಿ, 8ನೇ ತರಗತಿಯ ಕುಮಾರ ಶೌರ್ಯ ಸಂತೋಷ ಸಮಾಜೆ ಹಾಗೂ 9ನೇ ತರಗತಿಯ ಕುಮಾರ ಪ್ರಣವ್ ಸುರೇಶ್ ಘಡಲೋಟಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.  

ವಿದ್ಯಾರ್ಥಿನಿಯ ಸಾಧನೆಗೆ ಆಡಳಿತಾಧಿಕಾರಿ ಭಾರತಿ ತಾಳಿಕೋಟಿ ಹಾಗೂ ಪದ್ಮಾವತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಸತೀಶ್ ಹಜಾರೆ ಅಭಿನಂದನೆ ಸಲ್ಲಿಸಿದ್ದಾರೆ.  ತಾತ ದಿ. ಇಬ್ರಾಹಿಂ ಸುತಾರ್ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ರಾಷ್ಟ್ರಪತಿ ಭವನಕ್ಕೆ ತೆರಳಿದ್ದ ಸಂದರ್ಭದಲ್ಲಿ, ಇದೀಗ ಮೊಮ್ಮಗಳು ರಾಷ್ಟ್ರಪತಿಯವರೊಂದಿಗೆ ಸಂವಾದ ನಡೆಸಲು ತೆರಳುತ್ತಿರುವುದು ಮಹಾಲಿಂಗಪುರ ನಗರದ ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿನಿಯ ಸಾಧನೆಗೆ ನಗರದ ಅನೇಕ ಗಣ್ಯರು ಹಾಗೂ ಸಂಘ-ಸಂಸ್ಥೆಗಳು ಅಭಿನಂದನೆ ಸಲ್ಲಿಸಿದ್ದಾರೆ.