ಉಪ ನೋಂದಣಿ ಕಚೇರಿ ಆರಂಭಕ್ಕೆ ಶಾಸಕರಿಗೆ ಮನವಿ

ಉಪ ನೋಂದಣಿ ಕಚೇರಿ ಆರಂಭಕ್ಕೆ ಶಾಸಕರಿಗೆ ಮನವಿ  Request to MLA to open a Sub-Registrar office


ತಾಳಿಕೋಟಿ 09: ಪಟ್ಟಣದಲ್ಲಿ ಮಂಜೂರಾಗಿರುವ ಉಪ ನೋಂದಣಿ   ಕಚೇರಿಯನ್ನು ಶೀಘ್ರ ಆರಂಭಿಸುವಂತೆ ಒತ್ತಾಯಿಸಿ ಅಂಬೇಡ್ಕರ್ ಸೇನೆ ತಾಳಿಕೋಟಿ ಘಟಕದ ಪದಾಧಿಕಾರಿಗಳು ಮಂಗಳವಾರ ಶಾಸಕ ಸಿ.ಎಸ್‌. ನಾಡಗೌಡ ಅವರಿಗೆ ಮನವಿ ಸಲ್ಲಿಸಿದರು. ತಾಳಿಕೋಟಿ ಜಿಲ್ಲೆಯ ಪ್ರಮುಖ ವ್ಯಾಪಾರ-ವಾಣಿಜ್ಯ ಕೇಂದ್ರವಾಗಿದ್ದರೂ ಉಪ ನೋಂದಣಿ ಕಚೇರಿ ಇಲ್ಲದ ಕಾರಣ ಬಡವರು, ರೈತರು ಹಾಗೂ ಸಾರ್ವಜನಿಕರು ಖರೀದಿ ನೋಂದಣಿ, ಇಸಿ, ಹಕ್ಕುಬಿಡುವಿಕೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಮುದ್ದೇಬಿಹಾಳಕ್ಕೆ ತೆರಳಬೇಕಾಗಿದೆ. ಇದರಿಂದ ಸಮಯ ಹಾಗೂ ಹಣ ವ್ಯರ್ಥವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ತಾಳಿಕೋಟಿ ತಾಲೂಕಾಗಿ ಸುಮಾರು ಹತ್ತು ವರ್ಷಗಳಾಗಿದ್ದರೂ ಉಪ ನೋಂದಣಿ ಕಚೇರಿ ಆರಂಭವಾಗಿಲ್ಲ. ಈಗಾಗಲೇ ಮಂಜೂರಾಗಿರುವ ಕಚೇರಿಯನ್ನು ಕೂಡಲೇ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷ ಬಸ್ಸು ಮಾದರ, ತಾಲೂಕು ಅಧ್ಯಕ್ಷ ಗೋಪಾಲ್ ಕಟ್ಟಿಮನಿ, ಸಾಮಾಜಿಕ ಹೋರಾಟಗಾರ ಮೊಹಮ್ಮದ್ ಶಫೀಕ್ ಇನಾಮದಾರ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.