ರಾಜಕೀಯ ಪಕ್ಷಗಳ ಸದನ ನಾಯಕರೊಂದಿಗೆ ಪ್ರಧಾನಿ ಮೋದಿ ಸಭೆ; ಕೋವಿಡ್ -19 ಉಚಿತ ಪರೀಕ್ಷೆಗೆ ಪ್ರತಿಪಕ್ಷ ಒತ್ತಾಯ
ನವದೆಹಲಿ, ಏ ೮, ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆಯಿಂದ ಉಂಟಾಗಿರುವ ತಲ್ಲಣದ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಬುಧವಾರ ಪ್ರತಿಪಕ್ಷ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಸದನ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ೫, ೦೦೦ ದಾಟಿರುವ ಹಿನ್ನಲೆಯಲ್ಲಿ ಕೋವಿಡ್ -೧೯ ಪರೀಕ್ಷೆಯನ್ನು ಉಚಿತವಾಗಿ ನಡೆಸಲು ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕೆಂದು ಪ್ರತಿಪಕ್ಷಗಳು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷದ ಗುಲಾಂ ನಬಿ ಆಜಾದ್, ತೃಣಮೂಲ ಕಾಂಗ್ರೆಸ್ ನಾಯಕ ಸುದೀಪ್ ಬಂಡೋಪಾಧ್ಯಾಯ, ಶಿವಸೇನೆಯ ಸಂಜಯ್ ರಾವತ್, ಬಿಜೆಡಿಯ ಪಿನಾಕಿ ಮಿಶ್ರಾ, ಎಲ್ ಜೆ ಪಿ ಚಿರಾಗ್ ಪಾಸ್ವಾನ್, ಎನ್ ಸಿ ಪಿಯ ಶರದ್ ಪವಾರ್, ಸಮಾಜವಾದಿ ಪಕ್ಷದ ರಾಮ ಗೋಪಾಲ್ ಯಾದವ್, ಅಕಾಲಿದಳ ನಾಯಕ ಸುಖ್ಬೀರ್ ಸಿಂಗ್ ಬಾದಲ್, ಬಿ ಎಸ್ ಪಿಯ ಸತೀಸ್ ಚಂದ್ರ ಮಿಶ್ರಾ, ವೈಎಸ್ ಆರ್ ಸಿ ಪಿಯ ವಿಜಯ್ ಸಾಯಿ ರೆಡ್ಡಿ, ಮಿಥುನ್ ರೆಡ್ಡಿ, ಜೆಡಿ(ಯು) ನ ರಾಜೀವ್ ರಂಜನ್ ಸಿಂಗ್, ಸಿಪಿಐ (ಎಂ) ಎಲಮಾರಂ ಕರೀಮ್ ಹಾಗೂ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಏಪ್ರಿಲ್ ೧೪ ರಂದು ದೇಶಾದ್ಯಂತ ವಿಧಿಸಲಾಗಿರುವ ಲಾಕ್ ಡೌನ್ ಆದೇಶವನ್ನು ಹಿಂಪಡೆಯಬೇಕೆ? ಅಥವಾ ಮುಂದುವರಿಸಬೇಕೆ? ಎಂಬ ಬಗ್ಗೆ ಸಭೆಯಲ್ಕಲಿ ಪ್ರಮುಖವಾಗಿ ಚರ್ಚೆ ನಡೆಯಿತು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ತಿಳಿಸಿದ್ದಾರೆ.
ಈ ನಡುವೆ ಕಾಂಗ್ರೆಸ್, ಜವಾಬ್ದಾರಿಯುತ ಪ್ರತಿಪಕ್ಷವಾಗಿ ದೇಶದ ಪ್ರಧಾನಮಂತ್ರಿಗಳಿಗೆ ಭಾರತದ ಇತಿಹಾಸ ಹಾಗೂ ಸಂಸ್ಕೃತಿಯನ್ನು ನೆನಪಿಸಿದ್ದು, ಭಾರತ ಯಾವುದೇ ದೇಶದ ಬೆದರಿಕೆಗಳಿಗೆ ಜಗ್ಗ ಬಾರದು ಎಂಬುದನ್ನು ಮನವರಿಕೆ ಮಾಡಿಕೊಡಲು ಬಯಸುತ್ತದೆ ಎಂದು ಹೇಳಿದೆ ನಾವು ಎದುರಿಸುತ್ತಿರುವ ಯಾವುದೇ ಸವಾಲು, ಒಂದು ಕ್ಷಣದ ಪರೀಕ್ಷೆಯಾಗಿದ್ದು, ಕೋವಿಡ್ -೧೯ ವಿಶ್ವದ ಇತಿಹಾಸದಲ್ಲಿ ಅಂತಹ ಒಂದು ಕ್ಷಣವಾಗಿದೆ. ಈ ಪರೀಕ್ಷೆಯಲ್ಲಿ ೧೩೦ ಕೋಟಿ ಭಾರತೀಯರು ಯಶಸ್ವಿಯಾಗಿದ್ದಾರೆ. ಚಪ್ಪಾಳೆ ತಟ್ಟಲು, ಮೇಣದ ಬತ್ತಿ ಬೆಳಗಲು ಸರ್ಕಾರ ಬಯಸಿತ್ತು ಅದು ಸೇರಿದಂತೆ ಪ್ರತಿ ಪರೀಕ್ಷೆಯಲ್ಲೂ ಜನರು ಯಶಸ್ವಿಯಾಗಿದ್ದಾರೆ ಎಂದು ಎಐಸಿಸಿ ವಕ್ತಾರ ಪವನ್ ಖೇರಾ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಯೊಡ್ಡಿ, ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ನಿಷೇಧವನ್ನು ತೆರವುಗೊಳಿಸುವಂತೆ ಭಾರತಕ್ಕೆ ಸೂಚಿಸುತ್ತಾರೆ. ತಕ್ಷಣವೇ ಭಾರತ ನಿಷೇಧವನ್ನು ತೆಗೆದುಹಾಕಿದೆ ಎಂದು ಅವರು ಹೇಳಿದರು.ಇಂತಹ ಒತ್ತಡ ಹಾಗೂ ಬೆದರಿಕೆಗಳಿಗೆ ತಕ್ಷಣವೇ ನಾವು ಬಗ್ಗಬೇಕೇ..? ಎಂಬುದನ್ನು ಇತಿಹಾಸ ಗಮನಿಸಲಿದೆ ಎಂದು ಖೇರಾ ಹೇಳಿದ್ದಾರೆ.
ಬ್ರೆಜಿಲ್ ಪ್ರಧಾನಿ, ಭಾರತ ಸರ್ಕಾರಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಪೂರೈಸುವಂತೆ ರಾಮಾಯಣ ಹಾಗೂ ನಮ್ಮ ಪುರಾಣಗಳನ್ನು ಉಲ್ಲೇಖಿಸಿ ಹೃದಯ ಸ್ಪರ್ಶಿ ಪತ್ರ ಬರೆದಿದ್ದಾರೆ, ಅಂತರರಾಷ್ಟ್ರೀಯ ಸಂಬಂಧಗಳಿಗೆ ಒಂದು ವಿಧಿ ವಿಧಾನ, ಮಾರ್ಗ ಎಂಬುದಿದೆ ಎಂದು ಅವರು ಹೇಳಿದ್ದಾರೆ.ಬಾಂಗ್ಲಾ ದೇಶ ವಿಮೋಚನಾ ಸಮರದ ವೇಳೆ ಬ್ರಿಟನ್ ಹಾಗೂ ಅಮೆರಿಕಾ ಬೆದರಿಕೆ ಒಡ್ಡಿದಾಗ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಭಾರತದ ಆಂತರಿಕ ವಿಚಾರಗಳಲ್ಲಿ ತಲೆತೂರಿಸಬೇಡಿ ಎಂದು ಹೇಳುವ ಮೂಲಕ ಆ ದೇಶಗಳಿಗೆ ದಿಟ್ಟ ಉತ್ತರ ನೀಡಿ ಅವುಗಳ ಸ್ಥಾನದಲ್ಲಿರುವಂತೆ ನೋಡಿಕೊಂಡಿದ್ದರು ಖೇರಾ ಇತಿಹಾಸವನ್ನು ಜ್ಞಾಪಿಸಿದ್ದಾರೆ.ಇತಿಹಾಸದಿಂದ ನಮ್ಮ ಪ್ರಧಾನಿ ಕಲಿಯಬೇಕು ಎಂಬುದು ನಮ್ಮ ನಿರೀಕ್ಷೆಯಾಗಿದೆ. ಬಿಕ್ಕಟ್ಟಿನ ಸಮಯದಲ್ಲಿ ನಾವು ಸರ್ಕಾರದ ಬೆಂಬಲಕ್ಕೆ ನಿಂತಿದ್ದೇವೆ. ಅವರ ಎಲ್ಲ ನಿರ್ಧಾರಗಳಿಗೂ ಬೆಂಬಲವಿದೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಪ್ರಧಾನಿಗೆ ದೇಶದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಜ್ಞಾಪಿಸಲು ಬಯಸುತ್ತೇವೆ. ಭಾರತ ಯಾವುದೇ ಬೆದರಿಕೆಗಳಿಗೆ ಬಗ್ಗ ಬಾರದು ಎಂದು ಖೇರಾ ಸಲಹೆ ನೀಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 