ನಮ್ಮ ನಡೆ, ಮತಗಟ್ಟೆ ಕಡೆ ಅಭಿಯಾನ ರಾಷ್ಟ್ರೀಯ ಹಬ್ಬದಂತಾಗಲಿ: ರಾಹುಲ್ ರತ್ನಂ ಪಾಂಡೆಯ

ಕೊಪ್ಪಳ ಏಪ್ರಿಲ್ 28: ಗಂಗಾವತಿ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ನಡೆಯುತ್ತಿರುವ ನಮ್ಮ ನಡೆ, ಮತಗಟ್ಟೆ ಕಡೆ ಅಭಿಯಾನದ ಧ್ವಜಾರೋಹಣವನ್ನು ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ರತ್ನಂ ಪಾಂಡೆಯ ಹಾಗೂ ಚುನಾವಣಾ ಜಿಲ್ಲಾ ರಾಯಭಾರಿಗಳಾದ  ಶಿವಕುಮಾರ್ ಮಾಲಿಪಾಟೀಲ್ ಅವರು ಜಂಟಿಯಾಗಿ ನೆರವೇರಿಸಿದರು. 

ಜಿಲ್ಲಾ ಪಂಚಾಯತ್ ಸಿಇಓ  ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಮೇ 7ರಂದು ನಡೆಯುವ ಲೋಕಸಭಾ ಚುನಾವಣೆ ಅಂಗವಾಗಿ ಜನರಿಗೆ ಮತಗಟ್ಟೆ ಪರಿಚಯಿಸಲು ನಮ್ಮ ನಡೆ, ಮತಗಟ್ಟೆ ಕಡೆ ಅಭಿಯಾನ ನಡೆಸಲಾಗುತ್ತಿದೆ. ಮತಗಟ್ಟೆಗಳ ಮೇಲೆ ಮೇ 7 ವರೆಗೆ ಧ್ವಜ ಏರಿಸಿಬೇಕು. ನಮ್ಮ ನಡೆ, ಮತಗಟ್ಟೆ ಕಡೆ ಅಭಿಯಾನವನ್ನು ರಾಷ್ಟ್ರೀಯ ಹಬ್ಬದಂತೆ ಆಚರಿಸಬೇಕು. ಚುನಾವಣೆ ಕೆಲಸದಲ್ಲಿ ಬಿ.ಎಲ್‌.ಓ ಗಳ ಕಾರ್ಯ ಅತೀ ಮುಖ್ಯವಾಗಿರುತ್ತದೆ. ಎಲ್ಲರೂ ಮತಗಟ್ಟೆಗಳನ್ನು ಮತದಾರರಿಗೆ ಪರಿಚಯಿಸಬೇಕು. ಶೇ.100 ರಷ್ಟು ಮತದಾನ ಆಗಲು ಕಾರ್ಯನಿರ್ವಹಿಸಬೇಕು. ಎಲ್ಲ ಮತಗಟ್ಟೆಗಳಲ್ಲಿ ಧ್ವಜಾರೋಹಣ ನಡೆಸಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.ಚುನಾವಣಾ ಜಿಲ್ಲಾ ರಾಯಭಾರಿಗಳಾದ  ಶಿವಕುಮಾರ್ ಮಾಲಿಪಾಟೀಲ್ ಅವರು ಮಾತನಾಡಿ, ಇದೀಗ ದೇಶ ಸೇವೆ ಮಾಡುವ ಅವಕಾಶ ಒದಗಿ ಬಂದಿದೆ. ಮತದಾರರು ಯಾವುದೇ ಆಸೆ, ಆಮೀಷಕ್ಕೆ ಬಲಿಯಾಗದೆ ಮತದಾನ ಮಾಡಬೇಕು. ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು. ಮತದಾನ ಪ್ರಮಾಣ ಹೆಚ್ಚಳವಾಗಲು ಶ್ರಮಿಸುವಂತೆ ಹೇಳಿದರು.ನಂತರ ಲೈಯನ್ಸ್‌ ಕ್ಲಬ್ ಆವರಣದಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸಿಇಓ  ರಾಹುಲ್ ರತ್ನಂ ಪಾಂಡೆಯ ಅವರು ಧ್ವಜಗಳನ್ನು ವಿತರಣೆ ಮಾಡಿದರು. 

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ  ಲಕ್ಷ್ಮೀದೇವಿ, ನಗರಸಭೆ ಪೌರಾಯುಕ್ತರಾದ  ವಿರುಪಾಕ್ಷ ಮೂರ್ತಿ ಅವರು, ಬಿ.ಎಲ್‌.ಓಗಳ ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ  ಪ್ರಸನ್ನಕಲ್ಮನಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ  ಮಹೇಶ ಹಿರೇಮಠ, ತೋಟಗಾರಿಕೆ ಸಹಾಯಕ ಅಧಿಕಾರಿಗಳಾದ  ಶಿವಕುಮಾರ ಗಾಂಜಿ, ಸಿಡಿಪಿಓ ಮೇಲ್ವಿಚಾರಕರಾದ  ವಿದ್ಯಾವತಿ, ನಗರಸಭೆ ಅಧಿಕಾರಿಗಳು, ತಾಪಂ ಅಧಿಕಾರಿಗಳು, ಸಿಬ್ಬಂದಿಗಳು, ಬಿ.ಎಲ್‌.ಓಗಳು ಇದ್ದರು.