ಉತ್ತಮ ಆರೋಗ್ಯವೇ ಇಂದಿನ ಸಂಪಾದನೆ : ವೈದ್ಯಾಧಿಕಾರಿ ಅನ್ನಪೂರ್ಣ ಅಂಗಡಿ

ಅವರಾದಿಯಲ್ಲಿ ಕೂಲಿಕಾರರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ  

ಚನ್ನಮ್ಮನ ಕಿತ್ತೂರು 23: ಇಂದಿನ ದಿನಮಾನದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದೇ ಅತ್ಯುತ್ತಮ ಸಂಪಾದನೆ ಆಗಿದೆ. ಆರೋಗ್ಯದಿಂದ ಇದ್ದಾಗ ಮಾತ್ರ ಉದ್ಯೋಗ ಮಾಡಲು ಸಾಧ್ಯ. ಹಾಗಾಗಿ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಮಾಡಿ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅನ್ನಪೂರ್ಣ ಅಂಗಡಿ ತಿಳಿಸಿದರು.  

ತಾಲೂಕಿನ ಅವರಾದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾದ ಐಇಸಿ ಚಟುವಟಿಕೆಯಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕೂಲಿಕಾರರಿಗೆ  ಗುರುವಾರ  ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ದೇಶಿಸಿ ಮಾತನಾಡಿದರು. ಕೆಲಸದ ಒತ್ತಡದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರು ಆಸ್ಪತ್ರೆಗೆ ಹೋಗಲು ಆಗಿರುವುದಿಲ್ಲ. ಹಾಗಾಗಿ ನೀವು ಇದ್ದಲಿಗೆ ನಮ್ಮ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಸಮೇತ ಬಂದಿದ್ದೇವೆ. ಆರೋಗ್ಯ ಸಮಸ್ಯೆ ಏನೇ ಇದ್ದರು ವೈದ್ಯಾಧಿಕಾರಿಗಳಿಗೆ ತಿಳಿಸಿ, ಚಿಕಿತ್ಸೆ ಪಡೆಯುಬೇಕು ಎಂದು ತಿಳಿಸಿದರು.  

ಶಿಬಿರ ಉದ್ಘಾಟಿಸಿದ ಅವರಾದಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಜಗದೀಶ ಗೌಡರ ಮಾತನಾಡಿ, ಗ್ರಾಮೀಣ ಪ್ರದೇಶದ ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಗ್ರಾಮಗಳಲ್ಲಿಯೇ ಆರೋಗ್ಯ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಿತ್ತೂರಿನ ಸಮುದಾಯ ಆರೋಗ್ಯ ಕೇಂದ್ರದ ಡಾ.ಅಭಿನವ ಮಿಶ್ರಾ, ಕ್ಷಯರೋಗ ತಜ್ಞರು ಡಾ.ಮಹೇಶ ದೇವಲತ್ತಿ, ತಾಲೂಕು ಪಂಚಾಯತಿ ತಾಂತ್ರಿಕ ಸಂಯೋಜಕ ವಿನಯಕುಮಾರ್ ಪಾಟೀಲ, ಐಇಸಿ ಸಂಯೋಜಕಿ ಶಿವಲೀಲಾ ಜವಳಿ, ಬಿಎಫ್‌ಟಿ ಬಸವರಾಜ ಹೊಸಮನಿ, ಡಿಓ ಈರ​‍್ಪ ಸರದಾರ್ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.