ಬೆಂಗಳೂರು, ಜ 28 : ಸಹಾಯಧನದ ಮೂಲಕ ರೈತರಿಗೆ ಎಂಜಿಕೆ ಸೋಲಾರ್ ಕೀಟನಾಶಕ ಯಂತ್ರ ಒದಗಿಸಬೇಕೆಂದು ರೈತ ಸಂಘ ಹಾಗೂ ಹಸಿರು ಸೇನೆಯ ಸಂಶೋಧಕ ಎಂ.ಜಿ.ಕರಿಬಸಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2 ವರ್ಷಗಳ ಹಿಂದೆ ತಾವು ಸೌರ ವಿದ್ಯುತ್ ಸೌಲಭ್ಯ ಹೊಂದಿರುವ ಕೀಟನಾಶಕ ಯಂತ್ರ ಸಂಶೋಧನೆ ಮಾಡಿದ್ದು, ಇದುವರೆಗೂ ರೈತರಿಗೆ 6 ಸಾವಿರ ಕೀಟನಾಶಕ ಯಂತ್ರವನ್ನು ಹಂಚಲಾಗಿದೆ. ಇದರಿಂದ ತರಕಾರಿ ಮತ್ತು ಹಣ್ಣಿನ ಬೆಳೆಗಳಲ್ಲಿ ಕೀಟನಾಶಕಗಳ ಬಳಕೆ ಇಲ್ಲದೇ ಬೆಳೆ ಬೆಳೆಯಲು ಸಾಧ್ಯವಾಗಿದೆ. ಜತೆಗೆ ರೈತರಿಗೆ ಹಣ ಉಳಿತಾಯವಾಗುತ್ತಿದೆ ಎಂದರು.
ಇದರಿಂದ ಹಣ್ಣು, ತರಕಾರಿ ಬೆಳೆಗಳು ವಿಷಮುಕ್ತವಾಗಿ ಗ್ರಾಹಕರಿಗೆ ದೊರೆಯಲಿದ್ದು, ಜನ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಲಿದೆ. ಈಗಾಗಲೇ 12 ಜಿಲ್ಲೆಗಳಲ್ಲಿ ಕೃಷಿ ಇಲಾಖೆ ಆತ್ಮಯೋಜನೆಯಡಿ ಕೆಲವು ರೈತರಿಗೆ ಉಚಿತವಾಗಿ ಕೀಟನಾಶಕ ಯಂತ್ರ ನೀಡಿದೆ. ಇವುಗಳ ಬಳಕೆಯಿಂದ ರೈತರಿಗೂ ಉತ್ತಮ ಫಲಿತಾಂಶ ದೊರೆತಿದೆ ಎಂದರು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಜೆಟ್ನಲ್ಲಿ ರೈತರಿಗೆ ಉಚಿತವಾಗಿ ಸೋಲಾರ ಯಂತ್ರ ವಿತರಿಸಬೇಕೆಂದು ಅವರು ಒತ್ತಾಯಿಸಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅರುಣಕುಮಾರ ಕುರಡಿ ಉಪಸ್ಥಿತರಿದ್ದರು.