ಸಂಸದೆ ಹೇಮಾ ಮಾಲಿನಿ ವಿರುದ್ಧ ಅವಹೇಳನಕಾರಿ ಹೇಳಿಕೆ : ರಣದೀಪ್ ಸುರ್ಜೇವಾಲಾಗೆ 48 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ನಿರ್ಬಂಧ

ನವದೆಹಲಿ 16: ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರಿಗೆ ಚುನಾವಣಾ ಆಯೋಗ ಮಂಗಳವಾರ 48 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ನಿರ್ಬಂಧ ವಿಧಿಸಿದೆ.

ಈ ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಕೇಂದ್ರ ಚುನಾವಣಾ ಆಯೋಗ ವಿಧಿಸಿದ ಮೊದಲ ಪ್ರಚಾರ ನಿಷೇಧ ಇದಾಗಿದೆ.

ಹೇಮಾ ಮಾಲಿನಿ ವಿರುದ್ಧ 'ಅವಹೇಳನಕಾರಿ, ಅನಾಗರಿಕ ಮತ್ತು ಅಸಭ್ಯ' ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಚುನಾವಣಾ ಆಯೋಗ ಕಳೆದ ಮಂಗಳವಾರ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ವಿಷಯದಲ್ಲಿ ಹೊರಡಿಸಲಾದ ಅಥವಾ ನಂತರ ಅವರಿಗೆ ನೀಡಿರುವ ಆದೇಶದಲ್ಲಿ ಯಾವುದೇ ಪೂರ್ವಾಗ್ರಹವಿಲ್ಲ. ಹರಿಯಾಣದಲ್ಲಿ ನಡೆದ ಚುನಾವಣಾ ಪ್ರಚಾರದ ಸಮಯದಲ್ಲಿ ಸುರ್ಜೇವಾಲಾ ನೀಡಿದ ಹೇಳಿಕೆಯನ್ನು ಆಯೋಗವು ಬಲವಾಗಿ ಖಂಡಿಸುತ್ತದೆ. ದುರ್ನಡತೆಗಾಗಿ ರಣದೀಪ್ ಸುರ್ಜೆವಾಲಾ ಅವರಿಗೆ ಛೀಮಾರಿ ಹಾಕಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಸಂವಿಧಾನದ 324 ನೇ ವಿಧಿ ಮತ್ತು ಈ ನಿಟ್ಟಿನಲ್ಲಿ ಇರುವ ಎಲ್ಲ ಅಧಿಕಾರಗಳ ಅಡಿಯಲ್ಲಿ, ಆಯೋಗವು ಏಪ್ರಿಲ್ 16 ರಂದು ಸಂಜೆ 6 ಗಂಟೆಯಿಂದ 48 ಗಂಟೆಗಳ ಕಾಲ ಸುರ್ಜೇವಾಲಾ ಅವರಿಗೆ ನಿಷೇಧ ಹೇರುತ್ತದೆ. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಾರ್ವಜನಿಕ ಸಭೆಗಳು, ಸಾರ್ವಜನಿಕ ಮೆರವಣಿಗೆಗಳು, ಸಾರ್ವಜನಿಕ ರ್ಯಾಲಿಗಳು, ರೋಡ್ ಶೋಗಳು ಮತ್ತು ಸಂದರ್ಶನಗಳು, ಮಾಧ್ಯಮಗಳಲ್ಲಿ ಸಾರ್ವಜನಿಕ ಹೇಳಿಕೆಗಳು (ಎಲೆಕ್ಟ್ರಾನಿಕ್, ಮುದ್ರಣ, ಸಾಮಾಜಿಕ ಮಾಧ್ಯಮ) ಇತ್ಯಾದಿಗಳನ್ನು ನಡೆಸುವಂತಿಲ್ಲ ಎಂದು ಹೇಳಿದೆ.