ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ದೀಕ್ಷಾಬೋಧ ಕಾರ್ಯಕ್ರಮ

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ದೀಕ್ಷಾಬೋಧ ಕಾರ್ಯಕ್ರಮ  Convocation Address for Postgraduate Students

ಲೋಕದರ್ಶನ ವರದಿ 

ಧಾರವಾಡ 20 : ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ, ಉದ್ಯೋಗ ಕೌಶಲ್ಯ ಹಾಗೂ ಸೃಜನಶೀಲತೆಯನ್ನು ಬೆಳೆಸಲು ಶೈಕ್ಷಣಿಕ ಕಾರ್ಯಕ್ರಮ, ಕಾರ್ಯಾಗಾರ, ಸೆಮಿನಾರ್, ಉಪನ್ಯಾಸ, ಕೈಗಾರಿಕಾ ಭೇಟಿ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಧಾರವಾಡ ವಿದ್ಯಾಗಿರಿಯ ಜೆ.ಎಸ್‌.ಎಸ್‌.  ಮಂಜುನಾಥೇಶ್ವರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ಅಜಿತ್ ಪ್ರಸಾದ್ ಹೇಳಿದರು.  

2026-27ನೇ ಸಾಲಿಗೆ ಪ್ರವೇಶ ಪಡೆದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ದೀಕ್ಷಾಬೋಧ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.  

ಎಂ.ಎಸ್ಸಿ., ಎಂ.ಕಾಂ. ಹಾಗೂ ಎಂ.ಎ. (ಇಂಗ್ಲಿಷ್) ಕೋರ್ಸ್ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಶೈಕ್ಷಣಿಕ ವಾತಾವರಣ, ಚಟುವಟಿಕೆಗಳು ಹಾಗೂ ನಿಯಮ-ನಿಬಂಧನೆಗಳ ಕುರಿತು ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜತೆಗೆ ಕ್ರೀಡೆ, ಸಾಂಸ್ಕೃತಿಕ, ಎನ್‌ಎಸ್‌ಎಸ್ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತಿದೆ ಎಂದರು.  

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಡಾ. ಅಜಿತ್ ಪ್ರಸಾದ್ ಸನ್ಮಾನಿಸಿ ಅಭಿನಂದಿಸಿದರು. ಡಾ. ಸೂರಜ್ ಜೈನ್ ಸ್ವಾಗತಿಸಿದರು. ಡಾ. ಶಿಲ್ಪಾ ನಾಯಕ್ ವಂದಿಸಿದರು. ಚೈತ್ರಾ ಕೊಕಾಟಿ ಕಾರ್ಯಕ್ರಮ ನಿರೂಪಿಸಿದರು.  

ಡಾ. ಶಾಲ್ಮಲಾ ರತ್ತಾಕರ್, ಡಾ. ಜ್ಯೋತಿ ಅಕ್ಕಿ, ಡಾ. ಶಶಿಕಾಂತ, ರಜನಿ ತಾಳಿಕೋಟಿ, ಮುರಳೀಧರ ಹೆಗಡೆ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.